ಹನೂರಿನ ಹೊಗೇನಕಲ್ ಜಲಪಾತ ವೀಕ್ಷಣೆಗೆ ನಿರ್ಬಂಧ

By Kannadaprabha NewsFirst Published Jul 21, 2024, 12:44 PM IST
Highlights

ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಮೂಲಕ ಅರಣ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಂಡಿದೆ.

  ಹನೂರು : ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಮೂಲಕ ಅರಣ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಂಡಿದೆ.

ಹನೂರು ತಾಲೂಕಿನ ಪ್ರೇಕ್ಷಣೀಯ ಸ್ಥಳ ಹೊಗೇನಕಲ್ ಜಲಪಾತ ವೀಕ್ಷಣೆಗೆ ಕರ್ನಾಟಕ ಹಾಗೂ ತಮಿಳುನಾಡು ಎರಡು ರಾಜ್ಯದ ಜಲಪಾತದ ದಡದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ.

Latest Videos

 ಭೋರ್ಗರೆಯುತ್ತಿದೆ ಕಾವೇರಿ ನದಿ 

ಕಬಿನಿ ಹೂರಹರಿವು ಹೆಚ್ಚಳ ಆಗಿರುವುದರಿಂದ ಜತೆಗೆ ಭಾರಿ ಮಳೆಯಿಂದ ಹೊಗೇನಕಲ್ ಜಲಪಾತದಲ್ಲಿ ಕಾವೇರಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಕರ್ನಾಟಕ ಜಲಪಾತದ ದಡ ಸೇರಿದಂತೆ ತಮಿಳುನಾಡಿನ ಭಾಗದಲ್ಲೂ ಸಹ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿ ಭಾರಿ ಬಂದೋಬಸ್ತ್ ಕಲ್ಪಿಸುವ ಮೂಲಕ ಸೂಕ್ತ ಕ್ರಮ ಕೈಗೊಂಡಿದೆ.

 ಹೊಗೇನಕಲ್ ಜಲಪಾತದ ರೌದ್ರ ನರ್ತನ 

ಭಾರತದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಾದ ಹನೂರು ತಾಲೂಕಿನ ಹೊಗೇನಕಲ್ ಜಲಪಾತದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ದೃಶ್ಯ ಕಲ್ಲು ಬಂಡೆಗಳ ನಡುವೆ ರೌದ್ರ ನರ್ತನದ ನೋಟ ರುದ್ರರಮಣೀಯವಾಗಿದೆ.

 ಪ್ರವಾಸಿಗರಿಗೆ ನಿರ್ಬಂಧ: 

ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಇನ್ನಿತರ ಕಡೆಯಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದ ಭಕ್ತರು, ಹೊಗೇನಕಲ್ ಜಲಪಾತ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಅರಣ್ಯ ಇಲಾಖೆ ಪಾಲಾರ್ ಅರಣ್ಯ ಇಲಾಖೆ ಗೇಟ್ ಬಳಿ ಪ್ರವಾಸಿಗರನ್ನು ತಡೆದು ಬಂದಂತಹ ವಾಹನಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಹೊಗೇನಕಲ್ ಜಲಪಾತ ವೀಕ್ಷಣೆ, ತಮಿಳುನಾಡು ಹಾಗೂ ಕರ್ನಾಟಕದ ಜಲಪಾತದ ವೀಕ್ಷಣೆ, ಪ್ರವಾಸಿಗರ ತೆಪ್ಪ ವಿಹಾರ ಬೋಟಿಂಗ್ ವ್ಯವಸ್ಥೆ ನಿರ್ಬಂಧಿಸಲಾಗಿದೆ. ಜತೆಗೆ ಹೊಗೇನಕಲ್ ಜಲಪಾತ ವೀಕ್ಷಣೆಗೆ ತೆರಳುವ ತೆಪ್ಪ ನಡೆಸುವವರೆಗೂ ಸಹ ಅರಣ್ಯ ಇಲಾಖೆ ನದಿಗೆ ಇಳಿಯದಂತೆ ಸೂಚನೆ ನೀಡಿದೆ.

ಮಳೆ ಇಲ್ಲದೆ ಬಣಗುಟ್ಟುತ್ತಿದ್ದ ಹೊಗೇನಕಲ್ ಜಲಪಾತ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಬಿನಿ ಹೊರಹರಿವು ಹೆಚ್ಚಳದಿಂದ ಕಾವೇರಿ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತಮಿಳುನಾಡಿನ ಭಾಗದಲ್ಲಿ ಅಲ್ಲಿನ ಸರ್ಕಾರ ತೆಪ್ಪ ನಡೆಸುವವರಿಗೆ ತೆಪ್ಪಗಳನ್ನು ಇಡಲು ಶಡ್ ನಿರ್ಮಾಣ ಮಾಡಿ ಸುರಕ್ಷತಾ ಸಾಧನಗಳನ್ನು ಸಹ ನೀಡಿದೆ. ಕರ್ನಾಟಕದ ಭಾಗದಲ್ಲಿ ತೆಪ್ಪ ನಡೆಸುವವರಿಗೆ ತೆಪ್ಪಗಳನ್ನು ಇಡಲು ಯಾವುದೇ ಸುರಕ್ಷಿತ ಸ್ಥಳ ಶೆಡ್ ಇಲ್ಲದೆ ಬಿಸಿಲು ಮಳೆಯಲ್ಲಿ ಇಡಲಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ಇಲ್ಲಿನ ಯಾವುದೇ ಸೌಲಭ್ಯ ಇಲ್ಲದೆ ಇರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿನ ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರವಾಸಿಗರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದರೂ ಕಲ್ಪಿಸುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.

ತಮಿಳುನಾಡಿನಲ್ಲಿ ತೆಪ್ಪ ನಡೆಸುವವರ ಸುರಕ್ಷತೆ ಹಾಗೂ ಜಲಪಾತ ವೀಕ್ಷಣೆಗೆ ನಿಷೇಧ ಹೇರಿರುವ ಕಾರಣ ಅಲ್ಲಿನ ಸರ್ಕಾರ ತೆಪ್ಪಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಲು ಶೆಡ್ ನಿರ್ಮಾಣ ಮಾಡಿಕೊಟ್ಟಿದೆ. ಆದರೆ ನಮ್ಮ ಕರ್ನಾಟಕದ ಗಡಿಭಾಗದ ತೆಪ್ಪ ನಡೆಸುವವರ ನಿವಾಸಿಗಳ ತೆಪ್ಪಗಳು ಬಿಸಿಲು ಮಳೆಯಲ್ಲಿ ಬಿದ್ದಿವೆ.

 ಶಕ್ತಿ ವೇಲು, ಹೊಗೇನಕಲ್ ನಿವಾಸಿ, ತೆಪ್ಪ ನಡೆಸುವವರು. 

click me!