ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಮಣಿಸಲು ಹೆಚ್‌ಡಿಕೆ Gen-Z ಮಾಸ್ಟರ್ ಪ್ಲಾನ್! ಮೈತ್ರಿ ಅಭ್ಯರ್ಥಿ ಕವೀಶ್ ಗೌಡ?

Published : Jun 20, 2026, 02:17 PM IST
HD Kumaraswamy GT Devegowda

ಸಾರಾಂಶ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ನಡೆಗೆ ಅಸಮಾಧಾನಗೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, ಅವರಿಗೆ ಸೆಡ್ಡು ಹೊಡೆಯಲು ಹೊಸ ತಂತ್ರ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಯುವ ನಾಯಕ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸಿದ್ಧತೆ ನಡೆಸುತ್ತಿದ್ದಾರೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೈಪ್ರೊಫೈಲ್ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಈಗಿನಿಂದಲೇ ರಾಜಕೀಯ ಜಿದ್ದಾಜಿದ್ದಿ ಮತ್ತು ಹೊಸ ತಂತ್ರಗಾರಿಕೆಗಳು ಗರಿಗೆದರಿವೆ. ಜೆಡಿಎಸ್‌ನಲ್ಲಿ ಭಿನ್ನಮತದ ಮುನ್ಸೂಚನೆ ನೀಡಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡ (GTD) ಅವರಿಗೆ ಶಾಕ್ ನೀಡಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ 'Gen-Z' (ಯುವ ಪೀಳಿಗೆಯ) ಪ್ಲಾನ್ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಯುವ ನಾಯಕ, ಕಳೆದ ಚುನಾವಣೆಯ ರನ್ನರ್-ಅಪ್ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸ್ಕೆಚ್ ಹಾಕುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಜಿಟಿಡಿ ನಡೆಗೆ ಹೆಚ್‌ಡಿಕೆ ಕೆಂಡ, ಈ ಬಾರಿ ನನ್ನದೇ ಅಂತಿಮ ತೀರ್ಮಾನ!

ಕಳೆದ ಕೆಲವು ಸಮಯದಿಂದ ಜೆಡಿಎಸ್ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಜಿ.ಟಿ. ದೇವೇಗೌಡರ ನಡೆ ಕುಮಾರಸ್ವಾಮಿ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಜಿಟಿಡಿ ಈಗಾಗಲೇ ಪಕ್ಷದಿಂದ ಎರಡು ಕಾಲುಗಳನ್ನು ಆಚೆ ಇಟ್ಟಿದ್ದಾರೆ" ಎಂದು ಸಿಟ್ಟು ಹೊರಹಾಕಿರುವ ಹೆಚ್‌ಡಿಕೆ, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಹಂತದಲ್ಲೇ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೆಚ್.ಡಿ. ದೇವೇಗೌಡರಲ್ಲ, ನನ್ನದೇ ಅಂತಿಮ ತೀರ್ಮಾನ. ಮುಂದಿನ ಚುನಾವಣೆಯಲ್ಲಿ ಹೊಸ ಪೀಳಿಗೆಯ, ಸಕ್ರಿಯವಾಗಿರುವ 'Gen-Z' ಯುವಕರಿಗೆ ಟಿಕೆಟ್ ನೀಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. ಹೆಚ್‌ಡಿಕೆ ಅವರ ಈ ಆಕ್ರೋಶಭರಿತ ಹೇಳಿಕೆಯ ಬೆನ್ನಲ್ಲೇ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕವೀಶ್ ಗೌಡ ಅವರ ಹೆಸರು ಅತ್ಯಂತ ಮುನ್ನೆಲೆಗೆ ಬಂದಿದೆ.

ಯಾರು ಈ ಕವೀಶ್ ಗೌಡ?

ಕವೀಶ್ ಗೌಡ ಮೈಸೂರಿನ ಪ್ರಭಾವಿ ರಾಜಕೀಯ ಮನೆತನದಿಂದ ಬಂದವರು. ಇವರು ಮೈಸೂರು ಭಾಗದ ಕಾಂಗ್ರೆಸ್‌ನ ಹಿರಿಯ ಹಾಗೂ ಮಾಜಿ ಶಾಸಕ ವಾಸು ಅವರ ಪುತ್ರ. ಆದರೆ, ತಂದೆಯ ಪಕ್ಷದ ಹಾದಿ ಹಿಡಿಯದ ಕವೀಶ್ ಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತಮ್ಮ ಚೊಚ್ಚಲ ಚುನಾವಣೆಯಲ್ಲೇ ಹಿರಿಯ ನಾಯಕ ಜಿ.ಟಿ. ದೇವೇಗೌಡರ ವಿರುದ್ಧ ಭರ್ಜರಿ ಪೈಪೋಟಿ ನೀಡಿ, 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಇಡೀ ಮೈಸೂರು ರಾಜಕೀಯ ವಲಯ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು.

ದಳಪತಿಗಳ ಗಾಳ: ಜಿಟಿಡಿ ಕಾಂಗ್ರೆಸ್‌ಗೆ ಹೋದರೆ, ಕವೀಶ್ ಜೆಡಿಎಸ್‌ಗೆ?

ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಕವೀಶ್ ಗೌಡ ಕ್ಷೇತ್ರದಲ್ಲಿ ಧೃತಿಗೆಡದೆ ನಿರಂತರವಾಗಿ ಸಕ್ರಿಯರಾಗಿದ್ದಾರೆ. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ, ಯುವಕರನ್ನು ಸಂಘಟಿಸುತ್ತಾ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವಿ ನೆಟ್‌ವರ್ಕ್ ಸೃಷ್ಟಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಜೆಡಿಎಸ್ ನಾಯಕರು ಈಗ ಕವೀಶ್ ಗೌಡಗೆ ನೇರವಾಗಿಯೇ ಗಾಳ ಹಾಕಿದ್ದಾರೆ.

ರಾಜಕೀಯ ವಲಯದ ಲೆಕ್ಕಾಚಾರಗಳ ಪ್ರಕಾರ, ಒಂದು ವೇಳೆ ಜಿ.ಟಿ. ದೇವೇಗೌಡರು ಜೆಡಿಎಸ್ ತೊರೆದು ಅಧಿಕೃತವಾಗಿ ಹಸ್ತ ಪಾಳಯ (ಕಾಂಗ್ರೆಸ್) ಸೇರಿದರೆ, ಕವೀಶ್ ಗೌಡ ಅವರು ಜೆಡಿಎಸ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಗ ಅವರು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಪ್ರಬಲ ಜಂಟಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ.

ವರ್ಕ್ ಔಟ್ ಆಗುತ್ತಾ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್?

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ವೈಯಕ್ತಿಕ ವರ್ಚಸ್ಸು ಅಪಾರವಾಗಿದೆ. ಅವರನ್ನು ಅವರದ್ದೇ ಕ್ಷೇತ್ರದಲ್ಲಿ ಮಣಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಹೆಚ್‌ಡಿಕೆ ಈ ಬಾರಿ 'ವಯಸ್ಸು ಮತ್ತು ಯೌವನ'ದ ಕಾರ್ಡ್ ಪ್ಲೇ ಮಾಡಲು ಹೊರಟಿದ್ದಾರೆ. ಹಿರಿಯ ನಾಯಕನ ವಿರುದ್ಧ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಕ್ಲೀನ್ ಇಮೇಜ್ ಹೊಂದಿರುವ ಹಾಗೂ ಒಕ್ಕಲಿಗ ಸಮುದಾಯದ ಯುವ ನಾಯಕನನ್ನು ತಂದು ನಿಲ್ಲಿಸಿದರೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ವಶಕ್ಕೆ ಪಡೆಯಬಹುದು ಎಂಬುದು ದಳಪತಿಗಳ ಲೆಕ್ಕಾಚಾರ.

ಕವೀಶ್ ಗೌಡ ಅವರ ಯುವ ಶಕ್ತಿ ಮತ್ತು ಮೈತ್ರಿಕೂಟದ ಸಾಂಪ್ರದಾಯಿಕ ಮತಗಳು ಸೇರಿದರೆ ಜಿಟಿಡಿಗೆ ಪ್ರಬಲ ಪೆಟ್ಟು ನೀಡಬಹುದು ಎಂಬ ಹೈಟೆಕ್ ಪ್ಲಾನ್ ಚಾಮುಂಡೇಶ್ವರಿ ಅಖಾಡವನ್ನು ಈಗಿನಿಂದಲೇ ಕಾವೇರುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಈ ದಳಪತಿಗಳ ರಾಜಕೀಯ ತಂತ್ರಗಾರಿಕೆ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಮಂಗಳೂರು to ಬೆಂಗಳೂರು 5 ಗಂಟೆ ಜರ್ನಿ, ಶಿರಾಡಿ ಘಾಟ್ ಸುರಂಗ ಮಾರ್ಗ ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ!
NEET-UG Re-Exam 2026: ನಾಳೆ ರಾಜ್ಯಾದ್ಯಂತ ನೀಟ್ ಮರು ಪರೀಕ್ಷೆ, ಈ ನಿಯಮ ಉಲ್ಲಂಘಿಸಿದರೆ ಪ್ರವೇಶವಿಲ್ಲ!