ಲಾಭಕ್ಕಾಗಿ ಬಿಜೆಪಿ ನಾಯಕರಲ್ಲಿ ಶುರುವಾಗಿದೆ ಪೈಪೋಟಿ

By Kannadaprabha NewsFirst Published Feb 8, 2021, 10:53 AM IST
Highlights

ಇದೀಗ ಈ ಬಿಜೆಪಿ ನಾಯಕರ ನಡುವೆಯೇ ಪೈಪೋಟಿ ಆರಂಭವಾಗಿದೆ. ಲಾಭದ ಉದ್ದೇಶಕ್ಕಾಗಿ ಇಲ್ಲಿ ಪೈಪೋಟಿ ನಡೆಯುತ್ತಿದೆ. 

ವರದಿ :  ಚಂದ್ರಶೇಖರ್‌ ಚಿಕ್ಕರಾಂಪುರ

ಚಿಕ್ಕನಾಯಕನಹಳ್ಳಿ (ಫೆ.08):  ಬರದ ನಾಡಿಗೆ ಹೇಮಾವತಿ ಹರಿದು ತೀವ್ರ ಸಂಕಷ್ಟಕ್ಕಿಡಾಗಿದ್ದ ರೈತರ ಮುಖದಲ್ಲಿ ಖುಷಿ ಇದ್ದರೆ, ಈ ಹೇಮಾವತಿ ಎತ್ತಿನಹೊಳೆ, ಭದ್ರಾಮೇಲ್ದಂಡೆ, ನೀರಾವರಿ ಹೋರಾಟ ಹಾಗೂ ನೀರು ಹರಿದ ವಿಚಾರ ಲಾಭ ಪಡೆಯಲು ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ.

ತಾಲೂಕಿಗೆ 2003ರ ಹಿಂದಿನಿಂದಲು ಹೇಮಾವತಿ ನೀರಾವರಿ ಹೋರಾಟ ಮಾಡುತ್ತಲೆ ಬಂದಿದ್ದು, ಅದರ ಪ್ರತಿಫಲವಾಗಿ ಈ ಬಾರಿ ಪ್ರಾಯೋಗಿಕವಾಗಿ ಹೇಮಾವತಿಯನ್ನು ಮೊದಲ ಬಾರಿಗೆ ಗುರುತ್ವಾಕರ್ಷಣೆಯ ಮೂಲಕ ಸಾಸಲು ಕೆರೆಗೆ ಹರಿಸಲಾಯಿತು. ನಂತರ ಅಲ್ಲಿಂದ ಹೇಮೆಯು ನೈಸರ್ಗಿಕವಾಗಿ ಕೆರೆಗಳ ಕೋಡಿಗಳ ಮೂಲಕ ಹಳ್ಳದಲ್ಲಿ ಹರಿಯುತ್ತಾ ಮುಂದೆ ತನ್ನ ದಾರಿಯನ್ನು ತಾನೆ ಕಂಡುಕೊಳ್ಳುತ್ತಾ ತಗ್ಗಿನ ಕಡೆಗೆ ಹರಿದಳಾದರೂ ಹರಿಯುವ ಮಾರ್ಗದಲ್ಲಿ ಸಿಗುವಂತಹ ಕೆರೆಗಳನ್ನು ಹಳ್ಳ, ಅಣೆಕಟ್ಟುಗಳನ್ನು ತುಂಬಿಕೊಂಡು ನಾಲ್ಕೈದು ತಿಂಗಳಿಂದ ಹರಿದು ಶೆಟ್ಟಿಕೆರೆ ಭಾಗದ ರೈತರ ಭಾಗಕ್ಕೆ ಜೀವಜಲವಾಗಿದ್ದು, ಜನರು ಹರ್ಷದಿಂದ ತಮ್ಮೂರಿನ ಕೆರೆಗಳಿಗೆ ಗಂಗಾಪೂಜೆ, ಬಾಗಿನ ಅರ್ಪಿಸುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯಲ್ಲಿ ಈ ಹೇಮಾವತಿ ನೀರಾವರಿ ಯೋಜನೆಯು ಕಾರ್ಯಕರ್ತರಲ್ಲಿನ ಬಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಟ್ಟಿದೆ.

ನೀರಾವರಿ ಹೋರಾಟಗಾರರಿಗೆ ಇಲ್ಲ ಸನ್ಮಾನ; ಆರೋಪ

ಹೇಮಾವತಿ ನೀರಾವರಿ ಹೋರಾಟವು ಶೆಟ್ಟಿಕೆರೆಯ ಕಟ್ಟೆರಂಗನಾಥಸ್ವಾಮಿ ದೇವಾಲಯದಿಂದ ಆರಂಭಗೊಂಡು ಹುಳಿಯಾರಿನ ಬೋರನಕಣಿವೆಗೆ ನೀರು ಹರಿಸಬೇಕು ಎನ್ನುವ ಗುರಿ ಇಟ್ಟುಕೊಂಡು ಹುಳಿಯಾರಿನಲ್ಲಿ ಅನೇಕ ಹೋರಾಟಗಳು ನಡೆದವು. ಅಂದು ಕಳ್ಳಂಬೆಳ್ಳ ಶಾಸಕರಾಗಿದ್ದ ಕೆ.ಎಸ್‌.ಕಿರಣ್‌ಕುಮಾರ್‌ ಹೋರಾಟಗಾರರೊಂದಿಗೆ ಕಾಣಿಸಿಕೊಂಡಿದ್ದರು. ಅದರೆ ನೀರಾವರಿ ಹೋರಾಟವು ಹಾಗೆ ಮುಂದುವರಿದು ಕಾಮಗಾರಿಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮಂಜೂರಾತಿ ದೊರೆಯಿತಾದರೂ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿತ್ತು. ನಂತರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಜೆ.ಸಿ.ಮಾಧುಸ್ವಾಮಿ ಇದೇ ಪಕ್ಷದಿಂದ ಗೆದ್ದು ಸಚಿವರಾಗಿ ಈ ಕಾಮಗಾರಿಗೆ ಹೆಚ್ಚು ಗಮನಹರಿಸಿ ವರ್ಷವೇ ಹೇಮೆಯ ನೀರುಹರಿಯುವಂತೆ ಮಾಡಿದರು.

ತಂದೆ ಬಿಎಸ್‌ವೈ ಹೆಸರಿಗೆ ಚ್ಯುತಿ ತರುವ ಕೆಲಸ ಮಾಡಲ್ಲ ...

ಅದರೆ, ಈ ನೀರು ಹರಿದ ಖುಷಿಯಲ್ಲಿ ಕೆಲವರು ಸಚಿವರ ಬೆಂಬಲಿಗರು ಸಚಿವರಿಗೆ ತಾಲೂಕಿನಲ್ಲಿ ಶೆಟ್ಟಿಕೆರೆಯಲ್ಲಿ ಅಭಿನಂದನಾ ಸಮಾರಂಭವನ್ನು ಮಾಡಿದರು. ಅದರೆ ಈ ಕಾರ್ಯಕ್ರಮಕ್ಕೆ ಯಾವುದೇ ನೀರಾವರಿ ಸಂಘ ಸಂಸ್ಥೆಯ ಹೋರಾಟಗಾರರಿಗೆ ಆಹ್ವಾನ ಇರಲಿಲ್ಲ. ಅದ್ದರಿಂದ ಬಿಜೆಪಿಯ ಕೆ.ಎಸ್‌.ಕಿರಣ್‌ಕುಮಾರ್‌ ಅಭಿಮಾನಿಗಳು ಸಹ ನೈಜ ನೀರಾವರಿ ಹೋರಾಟಗಾರರಿಗೆ ಅಭಿನಂದನಾ ಸಮಾರಂಭವನ್ನು ನಡೆಸಿದ್ದು, ಇದು ಪಕ್ಷದಲ್ಲಿರುವಂತಹ ಕೆಲವು ಪಕ್ಷ ನಿಷ್ಠ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

ಈ ಹೇಮಾವತಿ ನೀರಾವರಿ ಯೋಜನೆಯು ಸಕಾರಗೊಳ್ಳುವುದು ಒಂದು ಕಡೆಯಾದರೆ ಇದರ ಪ್ರಯೋಜನವನ್ನು ರೈತರು ಪಡೆದರೆ ಇದರ ಪ್ರಚಾರವನ್ನು ಯಾರು ಅನುಭವಿಸಬೇಕು ಎನ್ನುವುದು ಗೊಂದಲವಾಗಿದೆ.

ಮೌನವಾಗಿದ್ದಾರೆ ಮಾಜಿ ಶಾಸಕ ಸುರೇಶ್‌ ಬಾಬು

ಬಿಜೆಪಿಯ ಇಬ್ಬರು ನಾಯಕರು ಹೇಮಾವತಿ ನೀರಾವರಿ ಯೋಜನೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಇದರ ಪ್ರಯೋಜನ ಪಡೆಯುತ್ತಿದ್ದರೆ 10 ವರ್ಷಗಳಿಂದ ಶಾಸಕರಾಗಿದ್ದ ಸಿ.ಬಿ.ಸುರೇಶ್‌ ಬಾಬು ನೀರಾವರಿ ಯೋಜನೆಗಳಲ್ಲಿ ಅಂದಿನ ಹಾಲಿ ಕ್ಷೇತ್ರದ ಜನಪ್ರತಿನಿಧಿಯಾಗಿದ್ದು, ಕ್ಷೇತ್ರಕ್ಕೆ ನೀಡಿದ ಶ್ರಮವನ್ನು ಜನತೆಗೆ ತಿಳಿಸದೆ ಮೌನವಾಗಿರುವುದು ಅವರ ಬೆಂಬಲರಿಗೆ ಬಹಳ ನಿರಾಸೆ ತಂದಿದೆ ಹಾಗೂ ಕಾಂಗ್ರೆಸ್‌ ನಾಯಕರು ಈ ಹಿಂದೆ ಚಿ.ನಾ.ಹಳ್ಳಿ ತಾಲೂಕಿಗೆ ಪ್ರಪ್ರಥಮವಾಗಿ ಮಾಜಿ ಶಾಸಕ ಬಿ.ಲಕ್ಕಪ್ಪ ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿ ನೀರಿಗಾಗಿ ಕಲ್ನಾಡಿಗೆಯ ಮೂಲಕ ರಾಜಭವನಕ್ಕೆ ತೆರಳಿ ಸರ್ಕಾರವನ್ನು ಒತ್ತಾಯಿಸಿ ಹೋರಾಟದ ಬುನಾದಿ ಹಾಕಿದ್ದು ಕಾಂಗ್ರೆಸ್‌ ಪಕ್ಷದ ನಾಯಕರು. ಆದರೆ ಈ ಯೋಜನೆಯ ಬಗ್ಗೆ ಚಕಾರ ಎತ್ತದೆ ಮೌನವಾಗಿದ್ದಾರೆ.

click me!