ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ನೀರು; ಸೂಕ್ತ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಕರವೇ ಪ್ರತಿಭಟನೆ

By Kannadaprabha NewsFirst Published Sep 3, 2022, 11:04 AM IST
Highlights

ವಿಪರೀತ ಮಳೆಯಿಂದ ತಾಲೂಕಿನ ಅಡವಿಸೋಮಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದ್ದರೂ ಅಧಿಕಾರಿಗಳು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಆರೋಪಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಿಗ್ಗಾಂವಿ (ಸೆ.3) : ವಿಪರೀತ ಮಳೆಯಿಂದ ತಾಲೂಕಿನ ಅಡವಿಸೋಮಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದ್ದರೂ ಅಧಿಕಾರಿಗಳು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಆರೋಪಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಓಲೆಕಾರ ಹರಿಹಾಯ್ದರು. ವಿಪರೀತ ಮಳೆಯಿಂದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದೆ. ಆದರೆ ಮಕ್ಕಳು ಅಂಗನವಾಡಿ ಮುಂದೆ ಕಾಯುತ್ತ ನಿಂತಿದ್ದರು. ಅಧಿಕಾರಿಗಳು ಮಕ್ಕಳ ರಕ್ಷಣೆಗೆ ಸೂಕ್ತ ರಕ್ಷಣೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅತಿವೃಷ್ಟಿ ಹಾನಿ: ಸರ್ಕಾರ ಪ್ರತಿ ಹೆಕ್ಟೇರ್‌ಗೆ 50,000 ರೂ. ಪರಿಹಾರ ನೀಡಲಿ

ಕುನ್ನೂರ ಗ್ರಾಪಂ ವ್ಯಾಪ್ತಿಯ ಅಡವಿಸೋಮಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿಯೇ ಅಂಗನವಾಡಿ ಇದೆ. ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿತ್ತು. ಅಂಗನವಾಡಿ ಕಾರ್ಯಕರ್ತೆ ಯಶೋದಾ ರಜೆಯಲ್ಲಿದ್ದರೂ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವ ವ್ಯವಸ್ಥೆ ಮಾಡಿದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಕರವೇ ಜಿಲ್ಲಾ ಅಧ್ಯಕ್ಷ ಮಂಜುನಾಥ ಒಲೇಕಾರ ಹಾಗೂ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗಿದರು. ಅಂಗನವಾಡಿ ಮೇಲೆ ಪಿಡಿಒ ನಿಗಾ ಇರಿಸಬೇಕು. ಮಕ್ಕಳನ್ನು ತಕ್ಷಣ ಬೇರೆಡೆ ಸ್ಥಳಾಂತರಿಸದೆ ಬಡ ಮಕ್ಕಳ ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ತಡಸ ಕರವೇ ಗ್ರಾಮ ಘಟಕದ ಅಧ್ಯಕ್ಷ ಶಂಕರ ಬಡಿಗೇರ, ಮಾನಪ್ಪ ಉಪ್ಪಾರ, ಬಸವರಾಜ ಕೇರಪ್ಪನವರ, ವೀರಪ್ಪ ಅಕ್ಕಿ, ಕಿರಣಕುಮಾರ ಕೇರಪ್ಪನವರ, ಯಲ್ಲಪ್ಪ ಕಾಮಜೇನು, ಶಂಭು ಅಕ್ಕಿ, ಸಿದ್ದಪ್ಪ ಅಕ್ಕಿ, ಈರಪ್ಪ ತಳವಾರ, ರಾಮಣ್ಣ ಒಲೇಕಾರ, ಶಂಕರಪ್ಪ ಹುಲಸೋಗ್ಗಿ, ಶಿವಾನಂದ ಉಪ್ಪಾರ, ನಾಗರಾಜ ಅಕ್ಕಿ ಸೇರಿದಂತೆ ಹಲವರು ಇದ್ದರು.

ತುಮಕೂರು: ಪದೇ ಪದೇ ಮೂತ್ರ ಮಾಡಿದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ

ಸ್ಥಳಕ್ಕೆ ಸಿಡಿಪಿಒ ನೀತಾ ವಾಡ್ಕರ್‌ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದರು. ಅಂಗನವಾಡಿ ಮಕ್ಕಳ ಸುರಕ್ಷತೆಗೆ ಕ್ರಮ ವಹಿಸಿ, ಅವರಿಗೆ ಪ್ರತ್ಯೇಕ ಶಾಲಾಕೊಠಡಿ ನಿಯೋಜಿಸಿದರು. ಭಾರಿ ಮಳೆಯಾಗಿದೆ. ಅಂಗನವಾಡಿ ಕಾರ್ಯಕರ್ತೆ ರಜೆಯಲ್ಲಿದ್ದುದರಿಂದ ಸಮಸ್ಯೆಯಾಗಿದೆ. ಆದಷ್ಟುಬೇಗ ವ್ಯವಸ್ಥೆ ಸರಿಪಡಿಸುವುದಾಗಿ ಕರವೇ ಕಾರ್ಯಕರ್ತರಿಗೆ ಭರವಸೆ ನೀಡಿದರು. ಈಗಾಗಲೇ ಅಂಗನವಾಡಿ ಕಟ್ಟಡ ಕೆಡವಿ, ಬೇರೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ನೀತಾ ವಾಡ್ಕರ್‌ ಹೇಳಿಕೆಗೆ ಗ್ರಾಮಸ್ಥರು, ಕರವೇ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

click me!