ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಭಾರೀ ಮಳೆ

By Kannadaprabha NewsFirst Published Oct 23, 2020, 7:18 AM IST
Highlights

ರಾಜ್ಯದಲ್ಲಿ ಈಗಾಗಲೇ ಮಳೆಯ ಆರ್ಭಟ ಹೆಚ್ಚಾಗುತ್ತಲೇ ಇದ್ದು ಮತ್ತೆ ವರುಣ ಅಬ್ಬರಿಸಲು ಆರಂಭಿಸಿದ್ದಾನೆ.

ಬೆಂಗಳೂರು (ಅ.23): ಬೆಂಗಳೂರು, ಹಾಸನ, ಹಾವೇರಿ ಸೇರಿ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದೀಚೆಗೆ ಸುಮಾರು ಎರಡ್ಮೂರು ಗಂಟೆಗಳ ಕಾಲ ಭರ್ಜರಿ ಮಳೆಯಾಗಿದ್ದು, ಕೆಲವೆಡೆ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಏತನ್ಮಧ್ಯೆ, ಭೀಮಾ ಮತ್ತು ಡೋಣಿ ನದಿ ನೀರಿನಮಟ್ಟಬಹುತೇಕ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಆವರಿಸಿದ್ದ ಪ್ರವಾಹದಾತಂಕ ನಿವಾರಣೆಯಾಗಿದೆ. ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡಿರುವ ಸಂತ್ರಸ್ತರಲ್ಲಿ ಕೆಲವರು ನಿಧಾನವಾಗಿ ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ.

ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಕೆಲವೆಡೆ ಉತ್ತಮ ಮಳೆ ಆಗಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ ಇತ್ತಾದರೂ ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಿದ್ದು ಬಿಟ್ಟರೆ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಿಟ್ಟು ಬಿಟ್ಟು ತುಂತುರು ಮಳೆಯಾಗಿದೆ. ಆದರೆ, ಬೆಂಗಳೂರು, ಹಾವೇರಿ, ಗದಗ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮಧ್ಯಾಹ್ನದ ನಂತರ ಎರಡ್ಮೂರು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಮಲೆನಾಡು ವ್ಯಾಪ್ತಿಯಲ್ಲಿರುವ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸಾಧಾರಣ ಮಳೆ ಬಿದ್ದಿದೆ.

‘ಮಹಾಮಳೆ’ಗೆ ತೊಯ್ದು ತೊಪ್ಪೆಯಾದ ಬೆಂಗ್ಳೂರು: 23 ವರ್ಷದ 3ನೇ ಮಹಾಮಳೆ ...

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸುರಿದ ಮಳೆಗೆ ಪಟ್ಟಣದ ತಗ್ಗುಪ್ರದೇಶಗಳ ಜನ ಪರದಾಡಿದರೆ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ 2 ತಾಸು ಸುರಿದ ಮಳೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಚಿತ್ರದುರ್ಗದಲ್ಲಿ ಹಲವು ಜಮೀನುಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ.

click me!