ಸಂಕಷ್ಟಕ್ಕೆ ಈಡಾದ ರೈತಗೆ ಮತ್ತೊಂದು ಆತಂಕ

By Kannadaprabha NewsFirst Published Sep 23, 2020, 11:26 AM IST
Highlights

ಮೊದಲೇ ಸಮಸ್ಯೆಯಲ್ಲಿದ್ದ ರೈತರಿಗೆ ಇದೀಗ ಇನ್ನಷ್ಟು ಸಮಸ್ಯೆಗಳು ಬಂದೊದಗಿವೆ. ಇದರಿಂದ ರೈತ ಸಮುದಾಯ ತೀವ್ರ ಆತಂಕಕ್ಕೆ ಒಳಗಾಗಿದೆ. 

ಸಕಲೇಶಪುರ (ಸೆ.23): ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ವಾಣಿಜ್ಯ ಬೆಳೆಗಳಾದ ಕಾಫಿ ಹಾಗೂ ಮೆಣಸು ಉದುರತೊಡಗಿದೆ. ಇದರಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ತಾಲೂಕಿನ ಬೆಳೆಗಾರರು ಇನ್ನಷ್ಟು ನಷ್ಟಅನುಭವಿಸುವ ಆತಂಕದಲ್ಲಿದ್ದಾರೆ.

ಸಾಮಾನ್ಯವಾಗಿ ತಾಲೂಕಿನಲ್ಲಿ ಜೂನ್‌, ಜುಲೈನಲ್ಲಿ ಬಾರಿ ಮಳೆ ಸುರಿದರೆ ಸೆಪ್ಟೆಂಬರ್‌ ಮಾಹೆಯಲ್ಲಿ ಹದವಾದ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಜೂನ್‌ ಹಾಗೂ ಜುಜೈ 2ನೇ ವಾರದವರೆಗೂ ಹೆಚ್ಚಿನ ಮಳೆ ಬಾರದ ಕಾರಣ ತಾಲೂಕಿನಲ್ಲಿ ಮಳೆ ಕೊರತೆ ಉಂಟಾಗಿತ್ತು. ಆಗಸ್ಟ್‌ ತಿಂಗಳಿನಲ್ಲಿ ವಾಡಿಕೆ ಮಳೆ 455 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ 1099 ಮಿ.ಮೀ ಮಳೆ ಬಿದ್ದ ಪರಿಣಾಮ ತಾಲೂಕಿನಲ್ಲಿ ವ್ಯಾಪಕ ಬೆಳೆ ಹಾನಿ ಸಂಭವಿಸಿತ್ತು. ಸುರಿದ ಅದಿಕ ಮಳೆಯಿಂದಾಗಿ ಕಾಫಿ, ಮೆಣಸು, ಭತ್ತದ ಶುಂಠಿ ಹಾಗೂ ಅಡಿಕೆ ಬೆಳೆಗಳಿಗೆ ನೇರ ಹಾನಿಯುಂಟಾಗಿತ್ತು.

ಕೃಷಿ ಕಾಯಿದೆ ಗುಟ್ಟುಗಳೇನು? ರೈತ ವಿರೋಧಿಯಾ-ಸ್ನೇಹಿಯಾ? .

ಇದಾದ ನಂತರ ಸೆಪ್ಟೆಂಬರ್‌ ಮಾಹೆಯಲ್ಲಿ ಸೆಪ್ಟೆಂಬರ್‌ 1 ರಿಂದ 16 ರವರೆಗೆ ವಾಡಿಕೆಯಂತೆ 96 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ 171 ಮಿ.ಮೀ ಮಳೆಯಾಗಿದ್ದು ಶೇ.78 ಕ್ಕೂ ಹೆಚ್ಚು ಅ​ಕ ಮಳೆಯಾಗಿದೆ. ಆದರೆ ಬಂಗಾಳ ಕೊಲ್ಲಿಯಲ್ಲಿ ವಾಯುಬಾರ ಕುಸಿತದಿಂದ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಪಿರಿ ಪಿರಿ ಮಳೆಗೆ ತಾಲೂಕಿನಲ್ಲಿ ಸಂಪೂರ್ಣ ಶೀತದ ವಾತವರಣ ಉಂಟಾಗಿದೆ. ಇದರಿಂದ ಕಾಫಿ, ಮೆಣಸು, ಅಡಿಕೆ ಉದುರುತ್ತಿದ್ದು ಶೇ 30ಕ್ಕೂ ಹೆಚ್ಚು ಬೆಳೆ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ.

ಸುರಿಯುತ್ತಿರುವ ಮಳೆಯಿಂದಾಗಿ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀಳುತ್ತಿದ್ದು ಜನ ಶೀತ, ನೆಗಡಿ, ಕೆಮ್ಮು, ಜ್ವರಗಳಿಗೆ ತುತ್ತಾಗುತ್ತಿದ್ದಾರೆ. ಒಂದೆಡೆ ಕೊರೋನಾ ಹಾವಳಿ ಮತ್ತೊಂದೆಡೆ ಶೀತದ ಹಾವಳಿಯಿಂದ ಜನ ಯಾವುದು ಕೊರೊನಾ ಯಾವುದು ಶೀತ ಎಂದು ತಿಳಿಯದೆ ಆತಂಕಕ್ಕೆ ಈಡಾಗುತ್ತಿದ್ದಾರೆ. ಮಳೆಗೆ ಹೆದರಿರುವ ಜನ ಕಳೆದ ಒಂದು ವಾರದಿಂದ ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣದತ್ತ ಸುಳಿಯದ ಕಾರಣ ವ್ಯಾಪಾರ ವ್ಯವಹಾರಗಳು ಇಳಿಮುಖಗೊಂಡಿದೆ. ಕೊರೊನಾದ ಜೊತೆಗೆ ಮಳೆಯಿಂದಾಗಿ ತಾಲೂಕಿನ ಪ್ರವಾಸೋದ್ಯಮಕ್ಕೂ ತೀವ್ರ ಪೆಟ್ಟು ಬಿದ್ದಿದ್ದು ಪ್ರವಾಸಿಗರು ಈ ಹಿಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಬರದೇ ಇರುವುದರಿಂದ ತಾಲೂಕಿನಲ್ಲಿ ಆರ್ಥಿಕತೆಗೆ ತೀವ್ರ ಪೆಟ್ಟು ಬಿದ್ದಿದೆ.ಸರ್ಕಾರ ಮಳೆಹಾನಿ ಪರಿಹಾರಕ್ಕೆ ಇನ್ನು ಯಾವುದೆ ಸಣ್ಣಮೊತ್ತದ ಪರಿಹಾರವನ್ನು ಬಿಡುಗಡೆ ಮಾಡದಿರುವುದಿರಂದ ರೈತರಿಗೆ ನಿರಾಶೆಯುಂಟಾಗಿದೆ. ಒಟ್ಟಾರೆಯಾಗಿ ಮಲೆನಾಡಿನಲ್ಲಿ ಸೆಪ್ಟೆಂಬರ್‌ ಮಾಹೆಯಲ್ಲಿ ಸುರಿಯುತ್ತಿರುವ ಮಳೆ ಜನರನ್ನು ಸಂಕಷ್ಟಕ್ಕೆ ದೂಡಿದ್ದು ಮಳೆ ನಿಂತಲ್ಲಿ ಮಾತ್ರ ಜನ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗುತ್ತದೆ.

ಇದರ ಜೊತೆಗೆ ಕಾಡಾನೆಗಳ ಹಾವಳಿ ಸಹ ಮಿತಿಮೀರಿದ್ದು ಪಟ್ಟಣದ ಅನತಿ ದೂರದಲ್ಲಿರುವ ಕೌಡಳ್ಳಿ ಹಾಗೂ ಮಳಲಿ ಗ್ರಾಮಗಳಲ್ಲಿ ವ್ಯಾಪಕ ಬೆಳೆ ನಷ್ಟಮಾಡಿರುವುದು ರೈತರನ್ನು ಮತ್ತಷ್ಟುಸಂಕಷ್ಟಕ್ಕೆ ಈಡು ಮಾಡಿದೆ.

ಹೆಚ್ಚುವರಿ ಮಳೆಯಿಂದಾಗಿ ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತ,ಅಡಿಕೆ ನಾಶಗೊಂಡಿದ್ದು ಜೊತೆಯಲ್ಲಿ ಕಾಡಾನೆಗಳ ಕಾಟ ಜನಜೀವನವನ್ನು ಜರ್ಜರಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತ ಗಮನಹರಿಸಿ ಮಲೆನಾಡಿಗೆ ಸೂಕ್ತ ಪರಿಹಾರ ನೀಡಬೇಕು.

-ಎಚ್‌.ಬಿ.ಭಾಸ್ಕರ್‌, ಕೌಡಳ್ಳಿ ಗ್ರಾಮ ಕಾಫಿ ಬೆಳೆಗಾರ
 
ಅಕಾಲಿಕ ಮಳೆಯಿಂದಾಗಿ ಕಾಫಿ, ಮೆಣಸು, ಅಡಿಕೆ , ಭತ್ತದ ಬೆಳೆಗಳಿಗೆ ಹಾನಿಯುಂಟಾಗಿದ್ದು, ಮಲೆನಾಡಿನ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಕೂಡಲೆ ಪರಿಹಾರ ಮೊತ್ತವನ್ನು ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು.

-ಸಾ.ಸು.ವಿಶ್ವನಾಥ್‌,ಸುಳ್ಳಕ್ಕಿ, ಕಾಫಿ ಬೆಳೆಗಾರರು

click me!