ಭಾರೀ ಮಳೆ : ಹಳ್ಳದಲ್ಲಿ ಬೈಕ್‌ ಸಮೇತ ದಂಪತಿ ಕೊಚ್ಚಿ ಹೋದ ದಂಪತಿ

By Kannadaprabha NewsFirst Published Jul 8, 2021, 7:10 AM IST
Highlights
  •  ಹಳ್ಳದಲ್ಲಿ ಬೈಕ್‌ ಸಮೇತ ಕೊಚ್ಚಿ ಹೋದ ದಂಪತಿ
  • ಹಗರಿಬೊಮ್ಮನಹಳ್ಳಿ ತಾಲೂಕಿನ ಮುತ್ಕೂರು ಗ್ರಾಮದ ದಂಪತಿ
  • ಹಳ್ಳದ ನೀರಿನ ರಭಸಕ್ಕೆ ಬೈಕ್‌ ಸಮೇತ ದಂಪತಿ ನೀರುಪಾಲು

 ಹೂವಿನಹಡಗಲಿ (ಜು.08):  ತಾಲೂಕಿನ ಕಾಲ್ವಿ ತಾಂಡಾದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್‌ ಸಮೇತ ದಂಪತಿ ಕೊಚ್ಚಿ ಹೋಗಿರುವ ಘಟನೆ ಮಂಗಳವಾರ ತಡರಾತ್ರಿ ಜರುಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಮುತ್ಕೂರು ಗ್ರಾಮದ ಕೆ. ಮಲ್ಲಿಕಾರ್ಜುನ (55), ಪತ್ನಿ ಸುಮಂಗಳಮ್ಮ (48) ಮೃತಪಟ್ಟದುರ್ದೈವಿಗಳು. ಮುಂಡರಗಿ ತಾಲೂಕಿನ ತಳಕಲ್‌ದಿಂದ ಹಗರಿಬೊಮ್ಮನಹಳ್ಳಿ ತಾಲೂಕಿನ ಮುತ್ಕೂರು ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಳ್ಳದ ನೀರಿನ ರಭಸಕ್ಕೆ ಬೈಕ್‌ ಸಮೇತ ದಂಪತಿ ನೀರುಪಾಲಾಗಿದ್ದಾರೆ.

ಪಶ್ಚಿಮ ಕರಾವಳಿಯುದಕ್ಕೂ ಜುಲೈ 8 ರಿಂದ ಮಳೆ; ಆದರೂ ಆತಂಕ ತಗ್ಗಿಲ್ಲ! ...

ತಳಕಲ್‌ ಗ್ರಾಮದಲ್ಲಿ ಸಂಬಂಧಿಕರ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ರಾತ್ರಿ ಹೋಗುವುದು ಬೇಡ, ಬಹಳ ಮಳೆ ಬಂದಿದೆ ಎಂದು ಸಂಬಂಧಿಕರು ಪರಿ ಪರಿಯಾಗಿ ಬೇಡಿಕೊಂಡರೂ ಮಲ್ಲಿಕಾರ್ಜುನ ಊರಿಗೆ ಹೋಗಬೇಕೆಂಬ ಹಟಕ್ಕೆ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ.

ಮೈಲಾರ- ತೋರಣಗಲ್‌ ರಾಜ್ಯ ಹೆದ್ದಾರಿ ಮಧ್ಯೆ ಇರುವ ಈ ಹಳ್ಳದ ಸೇತುವೆಗೆ ತಡೆಗೋಡೆ ನಿರ್ಮಾಣ ಮಾಡಿಲ್ಲ. ನೀರಿನ ರಭಸಕ್ಕೆ ಬೈಕ್‌ ನಿಯಂತ್ರಣ ತಪ್ಪಿ ಹಳ್ಳದ ನೀರಿಗೆ ಬಿದ್ದಿದೆ. ಹಳ್ಳದ ಸೇತುವೆಗೆ ಸಣ್ಣ ಕಲ್ಲಿನ ಕಂಬಗಳನ್ನು ಕೂಡಾ ಹಾಕಿಲ್ಲ.

ಪತಿ ಮಲ್ಲಿಕಾರ್ಜುನ ಶವ ಪತ್ತೆಯಾಗಿದ್ದು, ನಂತರ ಪೊಲೀಸರು ಬಂದು ಪತ್ನಿ ಸುಮಂಗಳಮ್ಮ ಅವರ ಶವವನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಹಗರಿಬೊಮ್ಮಹಳ್ಳಿ ತಾಲೂಕಿನ ತಂಬ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಹೂವಿನಹಡಗಲಿ ತಹಸೀಲ್ದಾರ್‌ ಎ.ಎಚ್‌. ಮಹೇಂದ್ರ, ಹಗರಿಬೊಮ್ಮನಹಳ್ಳಿ ತಹಸೀಲ್ದಾರ್‌ ಶರಣಮ್ಮ, ತಂಬ್ರಹಳ್ಳಿ ಠಾಣೆಯ ಪಿಎಸ್‌ಐ ವೈಶಾಲಿ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದರು.

click me!