
ಮಂಡ್ಯ (ಆ.29) ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸಂಕಷ್ಟಗಳಿಗೆ ತಕ್ಷಣ ಸ್ವಂದಿಸುವ ನಾಯಕ. ಜನರು ತಮ್ಮ ನೋವು, ದುಃಖ ಹೇಳಿಕೊಂಡಾಗ ಕುಮಾರಸ್ವಾಮಿ ಕೂಡ ಭಾವುಕರಾಗುತ್ತಾರೆ. ಇದೀಗ ಹೆಚ್ಡಿ ಕುಮಾರಸ್ವಾಮಿ ನಡೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ವಿಶೇಷ ಚೇತನ ಬಾಲಕ ತನ್ನ ತಾಯಿ ಜೊತೆ ಸಚಿವರ ಭೇಟಿಗೆ ಆಗಮಿಸಿದ್ದ. ಸಹಾಯಕ ಸಲಕರಣೆ ಪಡೆಯಲು ಆಗಮಿಸಿದ ಬಾಲಕನ ಜೊತೆ ಮಾತನಾಡುತ್ತಾ ಏನು ಬೇಕಾ ಕಂದಾ ಎಂದು ಕೇಳಿದ್ದಾರೆ. ಈ ಮಾತು ಕೇಳಿದ ಬೆನ್ನಲ್ಲೇ ಬಾಲಕ, ನನಗೆ ಜೀಪ್ ಬೇಕು ಅಂಕಲ್ ಎಂದು ಬೇಡಿಕೆ ಮುಂದಿಟ್ಟಿದ್ದಾನೆ. ತಕ್ಷಣವೇ ಸ್ಪಂದಿಸಿದ ಸಚಿವ ಹೆಚ್ಡಿ ಕುಮಾರಸ್ವಾಮಿ, ಆಟಿಕೆ ಜೀಪ್ ಕೊಡಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ತಾಯಿ ಜೊತೆ ಆಗಮಿಸಿದ್ದ ಬಾಲಕ ಜೀವಿತ್ ನಾಯಕ್ಗೆ ಆಟಿಕೆ ಜೀಪ್ ಸಿಕ್ಕಾದ ಆದ ಖುಷಿಗೆ ಪಾರವೇ ಇರಲಿಲ್ಲ. ಈ ಸಣ್ಣ ಸಂತೋಷದಲ್ಲಿ ಧನ್ಯತೆ ಭಾವವಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಾಮಾನ್ಯವಾಗಿ ಮಕ್ಕಳಿಗೆ ಏನು ಬೇಕು ಎಂದಾಗ ಚಾಕೋಲೇಟ್ ಸೇರಿದಂತೆ ಕೆಲ ಬೇಡಿಕೆ ಮುಂದಿಡುತ್ತಾರೆ. ಆದರೆ ಜೀವಿತ್ ನಾಯಕ್ ಅಚ್ಚರಿ ಬೇಡಿಕೆ ಮುಂದಿಟ್ಟಿದ್ದ. ವಿಶೇಷ ಚೇತನ ಬಾಲಕ ಜೀವಿತ್ ನಾಯಕ್ ತನಗೆ ಆಟವಾಡಲು ಜೀಪ್ ಬೇಕು ಎಂದಿದ್ದ. ಈತನ ಬೇಡಿಕೆ ಕೇಳಿ ಸ್ವತಃ ತಾಯಿ ಅಚ್ಚರಿಗೊಂಡಿದ್ದರು. ಇನ್ನು ಅಕ್ಕ ಪಕ್ಕದಲ್ಲಿದ್ದವರೆಲ್ಲಾ, ಕೇಂದ್ರ ಸಚಿವರ ಬಳಿ ಈ ರೀತಿ ಬೇಡಿಕೆ ಇಡೋದಾ ಎಂದು ಹುಬ್ಬೇರಿಸಿದ್ದರು. ಆದರೆ ಹೆಚ್ಡಿ ಕುಮಾರಸ್ವಾಮಿ ಪುಟ್ಟ ಬಾಲಕನ ಬೇಡಿಕೆಯನ್ನು ಗೌರವ ಪೂರ್ಣವಾಗಿ ಸ್ವೀಕರಿಸಿದ್ದಾರೆ.
ಬಾಲಕ ಏನೋ ಹೇಳಿದ್ದಾನೆ ಎಂದು ಕುಮಾರಸ್ವಾಮಿ ಸುಮ್ಮನಾಗಲಿಲ್ಲ. ಆಪ್ತ ಕಾರ್ಯದರ್ಶಿ ಮೂಲಕ ತಕ್ಷಣವೇ ಜೀಪ್ ಖರೀದಿಸಲು ಸೂಚಿಸಿದ್ದಾರೆ. ದೊಡ್ಡ ಆಟಿಕೆ ಜೀಪ್ ಕೆಲವೇ ಕ್ಷಣಗಳಲ್ಲಿ ಬಾಲಕನ ಮುಂದೆ ಬಂದಿದೆ. ಬಾಲಕ ಜೀಪ್ನಲ್ಲಿ ಕುಳಿತು ಖುಷಿ ಪಟ್ಟಿದ್ದಾನೆ. ಬಾಲಕನ ತಾಯಿ ಭಾವುಕರಾಗಿದ್ದಾರೆ.
ಜೀವನದ ಪ್ರತಿಯೊಂದು ಸಣ್ಣ ಸಂತೋಷದಲ್ಲೂ ಧನ್ಯತೆಯ ಭಾವವಿದೆ ಎಂಬುದಕ್ಕೆ ಸ್ವತಃ ನಾನೇ ಸಾಕ್ಷಿಯಾಗುವ ಯೋಗ ದೊರೆಯಿತು. ಸಹಾಯಕ ಸಲಕರಣೆ ಪಡೆಯಲು ತನ್ನ ತಾಯಿಯೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಬಂದಿದ್ದ ವಿಶೇಷಚೇತನ ಬಾಲಕ ಚಿ.ಜೀವಿತ್ ನಾಯಕ್ ಜತೆ ಕೆಲ ಕ್ಷಣಗಳ ಕಾಲ ಮಾತನಾಡಿದೆ. ಈ ಸಂದರ್ಭದಲ್ಲಿ ಬಾಲಕನ ಕುಶಲೋಪರಿ ವಿಚಾರಿಸಿ, 'ನಿನಗೆ ಏನ್ ಬೇಕು ಕಂದಾ?' ಎಂದು ಕೇಳಿದೆ. 'ನನಗೆ ಜೀಪ್ ಬೇಕು ಅಂಕಲ್..' ಎಂದು ಕೇಳಿದ. ಕೂಡಲೇ ನನ್ನ ಆಪ್ತ ಕಾರ್ಯದರ್ಶಿಗೆ ಹೇಳಿ ಬಾಲಕನಿಗೆ ಜೀಪ್ ತರಿಸಿಕೊಟ್ಟೆ. ಆ ಜೀಪನ್ನು ಹತ್ತಿ ಕುಳಿತಾಗ ಆ ಕಂದನ ಕಣ್ಣಲ್ಲಿ ಕಂಡ ಆನಂದಕ್ಕೆ ನಾನು ಏನೆಂದು ಹೇಳಲಿ? ಆ ಬಾಲಕನಿಗೆ ಭಗವಂತ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಚ್ಡಿ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.