
ಭೇರ್ಯ (ಏ.25): ಈಗಿನ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ನಾನೇ ಸಿಎಂ ಎಂದುಕೊಂಡೇ ಮೂರು ವರ್ಷಗಳು ಕಾಲಹರಣ ಮಾಡಿದರು ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಕೆ.ಆರ್. ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಕುರ್ಜು ಉದ್ಘಾಟನೆ ನೆರವೇರಿಸಿದ ಬಳಿಕ ಬಸವೇಶ್ವರ ಸ್ವಾಮಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿನ ಬೆಳಗಾದರೇ ನುಡಿದಂತೆ ನಡೆದಿದ್ದೇವೆ ಎಂದು ಬೊಬ್ಬೆ ಹೊಡೆಯುವ ಇವರು ಪಂಚ ಗ್ಯಾರಂಟಿ ಕೊಟ್ಟಿದ್ದೇವೆ, ಮಹಿಳೆಯರಿಗೆ ಎರಡು ಸಾವಿರ, ಬಸ್ ಫ್ರೀ ಎಂದು ಒಂದೂವರೆ ಲಕ್ಷ ಕೋಟಿ ಹಣ ಒದಗಿಸಲು ಏಳೂವರೆ ಲಕ್ಷ ಕೋಟಿ ಸಾಲ ಮಾಡಿ ರಾಜ್ಯದ ಜನತೆಯ ಮೇಲೆ ತಲಾ ಒಂದು ಲಕ್ಷ ಸಾಲದ ಹೊರೆ ಹೊರಸಿದ್ದಾರೆ ಎಂದು ಗುಡುಗಿದರು.
ಗ್ರಾಮ ಸ್ವರಾಜ್ ನನಸು ಮಾಡಲು ಸಾಧ್ಯವಾಗಿಲ್ಲ: ಗಾಂಧಿಜೀ ಅವರು ಕಂಡ ಗ್ರಾಮ ಸ್ವರಾಜ್ ಕನಸು ನನಸು ಮಾಡಲು ಸಾಧ್ಯವಾಗಿಲ್ಲ, ಸ್ವಾತಂತ್ರ್ಯ ಬಂದು 78 ವರ್ಷ ಕಳೆದಿದೆ ಇನ್ನೂ ಬಡವರು, ಕೂಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ, ಅವರು ಜನ ಸಾಮಾನ್ಯರ ದಿನ ಬಳಕೆ ವಸ್ತುಗಳ ಮೇಲೆ ವಿಪರೀತ ತೆರಿಗೆ ಏರಿಸಿದ ರಾಜ್ಯ ಸರ್ಕಾರ, ಅಬಕಾರಿ ಸುಂಕ ಸೇರಿದಂತೆ ಪ್ರತಿ ಯೂನಿಟ್ ಗೆ 50 ಪೈಸೆ ಏರಿಸಿದ್ದು, ಇವರ ಸಾಧನೆ ಎಂದು ಸರ್ಕಾರದ ವಿರುದ್ದ ಗುಡುಗಿದರು.
ನಾನು ಸಿಎಂ ಆಗಿದ್ದ ವೇಳೆ ನೀವು ಕಟ್ಟುವ ತೆರಿಗೆ ಹಣದಿಂದ ರೈತರ ಸಾಲ ಮನ್ನಾ ಮಾಡಿದ್ದು ಎಂದರಲ್ಲದೆ, ಕೆ.ಆರ್. ನಗರ ಕ್ಷೇತ್ರದ ಮಂಡಿಗನಹಳ್ಳಿ ಭಾಗದ ಕೆರೆ ಕಟ್ಟೆಗಳನ್ನು ತುಂಬಿಸಲು 25 ಕೋಟಿ ಅನುದಾನ ಹಣವನ್ನು ನೀಡಿದ್ದೆ ಆದರೆ, ಈಗಿನ ಶಾಸಕರು ಮೂರು ವರ್ಷಗಳ ಕಳೆದರೂ ಕೆರೆಕಟ್ಟೆಗಳನ್ನು ತುಂಬಿಸದೇ ದುರುಪಯೋಗ ಪಡಿಸಿಕೊಂಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು.
ಮಾತ್ತೇತ್ತಿದ್ದರೆ ಕೇಂದ್ರ ಸರ್ಕಾರ ಸಾಲ ಮಾಡಿಲ್ವ ಎನ್ನುವ ಕಾಂಗ್ರೆಸ್ ಮುಖಂಡರು, ಕೇಂದ್ರ ಸರ್ಕಾರ ಸಾಲ ಮಾಡಿರುವುದು ರೇಲ್ವೆ, ವಿಮಾನ ನಿಲ್ದಾಣ ಇಂತಹ ಯೋಜನೆಗಳನ್ನು ಮಾಡಿ ದೇಶದ ಆಸ್ತಿಯನ್ನು ವೃದ್ದಿ ಮಾಡಲು, ಆದರೆ ನಿಮ್ಮತರ ಅನಗತ್ಯವಾಗಿ ಸಾಲ ಮಾಡಿ ರಾಜ್ಯದ ಆಸ್ತಿ ಆಡವಿಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತೀರುಗೇಟು ನೀಡಿದರು. ಆನ್ ಲೈನ್ ಗೇಮ್, ಬೆಡ್ಡಿಂಗ್ ನಿಂದ ಸಾಲ ಮಾಡಿ ಕೊಂಡು ಯುವಕರು ಮನೆ ಜಮೀನು ಕಳೆದು ಕೊಂಡು ಬೀದಿ ಬಂದಿದ್ದಾರೆ.
ಇನ್ನೂ ಕೆಲವರು ಸಾಲ ತೀರಿಸಲು ಸಾದ್ಯವಾಗದೇ ಆತ್ಮ*ಹತ್ಯೆ ಮಾಡಿ ಕೊಳುತ್ತಿದ್ದಾರೆ. ಇದರ ಚರ್ಚೆ ಮಾಡದ ಇವರು ಪ್ರತಿ ನಿತ್ಯಾ ನಾನು ಸಿಎಂ, ನಾನು ಸಿಎಂ, ಕೊನೆಗೆ ನಮ್ಮಪ್ಪ ಐದು ವರ್ಷ ಸಿಎಂ ಇದೇ ಆಯಿತು, ಇನ್ನೆಲ್ಲಿ ರಾಜ್ಯ ಅಭಿವೃದ್ಧಿ ಮಾಡಲು ಸಾಧ್ಯ ಹಾಗಾಗಿ ಮುಂದೆ ಒಳ್ಳೆಯ ಸರ್ಕಾರ ತರಲು ನನ್ನೊಂದಿಗೆ ಜನರು ಕೈ ಜೊಡಿಸ ಬೇಕು ಎಂದರು. ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಹೊಸ ಅಗ್ರಹಾರ ಗ್ರಾಮದ ಎಲ್ಲ ಸಮುದಾಯದ ಸೇರಿ ದೇವಸ್ಥಾನದ ಕುರ್ಜು ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಿದ್ದೀರಿ, ಇದು ಧಾರ್ಮಿಕ ಕಾರ್ಯಕ್ರಮ, ನಾನು ರಾಜಕೀಯ ಮಾತನಾಡಲ್ಲ ಎಂದರು.