ಬಿಜೆಪಿಗರ ಜೊತೆ ಜಿಟಿಡಿ : ಎಚ್‌ಡಿಕೆ ರಿಯಾಕ್ಷನ್ ಹೀಗಿತ್ತು

By Kannadaprabha NewsFirst Published Dec 3, 2020, 7:58 AM IST
Highlights

ರಾಜ್ಯದಲ್ಲಿ  ರಾಜಕೀಯ ಬೆಳವಣಿಗೆಗಳಾಗುತ್ತಿದ್ದು ಇದೇ ವೇಳೆ  ಜಿಟಿ ದೇವೇಗೌಡರು ಬಿಜೆಪಿಗರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಚ್ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಮೈಸೂರು (ಡಿ.03):  ಶಾಸಕ ಜಿ.ಟಿ. ದೇವೇಗೌಡ ನಮ್ಮನ್ನು ಬಿಟ್ಟು ಎಲ್ಲಿ ಹೋಗಿದ್ದಾರೆ? ಅವರು ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದಾರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರ ಮುಂದಾಳತ್ವದಲ್ಲೇ ಗ್ರಾ.ಪಂ. ಚುನಾವಣೆ ನಡೆಯುತ್ತದೆ ಎಂದು ಮಾಜಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೇ (ಜಿಟಿಡಿ) ಜೆಡಿಎಸ್‌ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಿಜೆಪಿಯವರ ಜತೆ ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ.ಇದಕ್ಕೆ ಬೇರೆ ರೀತಿಯ ಅರ್ಥಗಳನ್ನು ಕಲ್ಪಿಸಿಕೊಳ್ಳುವುದು ಬೇಡ. ಅವರು ಶಾಸಕರಾಗಿವಷ್ಟುದಿನದವರೆಗೂ ನಮ್ಮ ಪಕ್ಷವನ್ನೇ ಬೆಂಬಲಿಸಬೇಕು ಎಂದರು.

ಇನ್ನೆರಡು ವರ್ಷ ಜೆಡಿಎಸ್‌ನಲ್ಲಿ ಇರ್ತೀನಿ : ದೇವೇಗೌಡ

ಗ್ರಾಮ ಸ್ವರಾಜ್‌ ವರ್ಕೌಟ್‌ ಆಗಲ್ಲ:  ಗಾಪಂ ಚುನಾವಣೆ ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯಲ್ಲ. ಹೀಗಾಗಿ ಬಿಜೆಪಿಯವರ ಗ್ರಾಮ ಸ್ವರಾಜ್‌ ಕಾರ್ಯಕ್ರಮ ವರ್ಕೌಟ್‌ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷ ಇರಲ್ಲ. ಒಂದೇ ಪಕ್ಷದ ಇಬ್ಬರು, ಮೂವರು ಸ್ಪರ್ಧೆ ಮಾಡಬಹುದು. ಒಂದೇ ಕುಟುಂಬದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾಗಿರುವುದನ್ನು ನೋಡಿದ್ದೇವೆ. ಸ್ಥಳೀಯ ವಿಚಾರದ ಆಧಾರದ ಮೇಲೆ ಗ್ರಾಪಂ ಚುನಾವಣೆ ನಡೆಯುತ್ತದೆ. ಆದ್ದರಿಂದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.

ಲವ್‌ ಜಿಹಾದ್‌ಗಿಂತ ಬೇರೆ ಸಮಸ್ಯೆಗಳಿವೆ

ಲವ್‌ ಜಿಹಾದ್‌ ವಿರುದ್ಧ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ವಿಚಾರ ಕುರಿತು ಮಾತನಾಡಿದ ಅವರು, ಲವ್‌ ಜಿಹಾದ್‌ಗಿಂತಲೂ ಮುಖ್ಯವಾದ ಹಲವಾರು ಸಮಸ್ಯೆಗಳು ರಾಜ್ಯದಲ್ಲಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದರು. ಕ್ರಾಸ್‌ ಬ್ರೀಡಿಂಗ್‌ ವಿಚಾರ ನನಗೆ ಬೇಡ. ಅದು ದೊಡ್ಡವರಿಗೆ ಸಂಬಂಧಪಟ್ಟವಿಚಾರ ಎಂದು ಅವರು ಹೇಳಿದರು.

ರೈತರ ಬಾಳಿಗೆ ಬೆಳಕಾಗಿ: ವಾರಣಾಸಿಯಲ್ಲಿ ದೀಪ ಹಚ್ಚಬೇಡಿ. ರೈತರ ಮನೆ, ಬಾಳಿಗೆ ಬೆಳಕಾಗಿ ಎಂದು ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ಮಾಡಿದರು. ರೈತರ ಹೋರಾಟ ತೀವ್ರವಾಗಿ ನಡೆಯುತ್ತಿದೆ. ಹೋರಾಟದಲ್ಲಿ ಪಾಲ್ಗೊಂಡವರ ಪೈಕಿ ಇಬ್ಬರು ಮೃತಪಟ್ಟವರದಿ ನೋಡಿದ್ದೇನೆ. ಆದ್ದರಿಂದಲೇ ದೇವೇಗೌಡರೂ ಹೇಳಿಕೆ ನೀಡಿದ್ದಾರೆ. ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.

click me!