ಸಂಪತ್ತನ್ನು ಹಂಚಿ ತಿನ್ನುವ ಸ್ವಭಾವ ಹೊಂದಿ: ಶಾಸಕ ಲಕ್ಷ್ಮಣ ಸವದಿ

By Kannadaprabha NewsFirst Published Jul 25, 2023, 1:00 AM IST
Highlights

ಸಂಪತ್ತನ್ನು ಹಂಚಿ ತಿನ್ನುವ ಸ್ವಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಂಪತ್ತನ್ನು ಗಳಿಸಬೇಕು, ಅದನ್ನು ಬೆಳೆಸಬೇಕು, ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಅಂತಹ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. 
 

ರೋಣ (ಜು.25): ಸಂಪತ್ತನ್ನು ಹಂಚಿ ತಿನ್ನುವ ಸ್ವಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಂಪತ್ತನ್ನು ಗಳಿಸಬೇಕು, ಅದನ್ನು ಬೆಳೆಸಬೇಕು, ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಅಂತಹ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ರೋಣ ತಾಲೂಕು ಗಾಣಿಗ ಸಮಾಜ ವತಿಯಿಂದ ಜರುಗಿದ ನೂತನ ಶಾಸಕರಿಗೆ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಬಲಾಢ್ಯವಾಗಲು ಸಮಾಜ ಸಂಘಟನೆಯಾಗಬೇಕು. ಈ ನಿಟ್ಟಿನಲ್ಲಿ ಗಾಣಿಗ ಸಮಾಜ ಮುನ್ನಡೆಯಬೇಕು. ಸಮಾಜದ ಕಡು ಬಡವರಿಗೆ ಶಿಕ್ಷಣಕ್ಕೆ ಹಣಕಾಸಿನ ಸಹಾಯ ಮಾಡುವ ಮೂಲಕ ಶಿಕ್ಷಣದಿಂದ ಸಮಾಜ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ನೊಂದವರ ಕಣ್ಣೀರ ಒರೆಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಚುನಾವಣೆ ಪೂರ್ವದಲ್ಲಿಯೇ ನಾನು ಭವಿಷ್ಯ ನುಡಿದಂತೆ ಬಿಜೆಪಿ 70 ಸ್ಥಾನ ದಾಟಲ್ಲ, ಕಾಂಗ್ರೆಸ್‌ 127ರಿಂದ 135 ಸ್ಥಾನ ಗೆಲ್ಲುವದು ಎಂದಿದ್ದೆ. ಅದರಂತೆ ರಾಜ್ಯದಲ್ಲಿ ನಡೆದಿದೆ. ಬಿಜೆಪಿ ತಾನೇ ಮಾಡಿದ ಎಡವಟ್ಟಿನಿಂದ ಕಡಿಮೆ ಸ್ಥಾನ ಬಂದಿದೆ ಎನ್ನುವುದನ್ನು ಪರಾಮರ್ಶಿಗೊಳ್ಳುತ್ತಿದೆ. 

ಕಣ್ಣನ್‌ ಮಾಮ ಮೇರು ವ್ಯಕ್ತಿತ್ವದ ಮಹಾಚೈತನ್ಯ: ಗುರುರಾಜ ಕರಜಗಿ

ಆದರೆ ಇದರ ಬಗ್ಗೆ ಹೆಚ್ಚಿಗೆ ಮಾತಾಡುವುದು ಬೇಡ ಎನಿಸುತ್ತೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಲ್ಲಿ ಕಾಂಗ್ರೆಸ್‌ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂದು ಅಕ್ಕಿ ಕೊಡಲಿಲ್ಲ. ಆದರೆ ಇದಕ್ಕೆ ಕಾಂಗ್ರೆಸ್‌ ಸರ್ಕಾರ ಯಾವುದೇ ಸೊಪ್ಪು ಹಾಕದೇ, ಅಕ್ಕಿ ಬದಲು ತಲಾ 170 ರುಪಾಯಿ ಪಡಿತರ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಅತ್ಯಂತ ಲಾಭಕರವಾಗಲಿವೆ. ರೈತರಿಗೆ ಬೆಳೆ ಸಾಲ ಅಲ್ಪಾವಧಿ ಸಾಲವನ್ನು . 3ರಿಂದ 5 ಲಕ್ಷದವರೆಗೆ ಏರಿಸಲಾಗಿದೆ. ಮಧ್ಯಾವಧಿ ಸಾಲವನ್ನು . 15 ಲಕ್ಷಕ್ಕೆ ಏರಿಸಲಾಗಿದೆ. ಅದರಂತೆ ದೀರ್ಘಾವಧಿ ಸಾಲವನ್ನು ಹೆಚ್ಚಳ ಮಾಡಲಾಗಿದ್ದು, ಇದರಿಂದ ರೈತರಿಗೆ ಸಾಕಷ್ಟುಅನುಕೂಲವಾಗಲಿದೆ. ಬಡ್ಡಿ ರಹಿತ ಸಾಲವನ್ನು ನೀಡಿದ್ದು, ಇದರಿಂದ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದರು.

ಶಾಸಕ ಜಿ.ಎಸ್‌. ಪಾಟೀಲ ಮಾತನಾಡಿ, 25 ಸಾವಿರ ಮತಗಳ ಅಂತರದಿಂದ ನನ್ನ ಗೆಲುವಿಗೆ ಆಶೀರ್ವಸಿದ್ದನ್ನು ನಾ ಎಂದಿಗೂ ಮರೆಯದೇ ಕೃತಜ್ಞತಾ ಭಾವನೆಯಿಂದ ಇರುತ್ತೇನೆ. ಗಾಣಿಗ ಸಮಾಜ ಶೇ. 90ರಷ್ಟುಕಾಂಗ್ರೆಸ್‌ ಮತ್ತು ನನ್ನ ಮೇಲಿದೆ ಎಂಬುದು ನನಗೆ ಅತ್ಯಂತ ಸಂತಸ ತಂದಿದೆ. ಒಂದು ಸಮಾಜ ಬೆಳೆಯಬೇಕಾದರೆ ಒಗ್ಗಟ್ಟಿನ ಜೊತೆಗೆ, ಶಿಕ್ಷಣವೂ ಅತೀ ಮುಖ್ಯವಾಗಿದೆ ಎಂದರು. ಸಾನಿಧ್ಯವನ್ನು ವಿಜಯಪುರ ವನಶ್ರೀ ಸಂಸ್ಥಾನಮಠ ಗಾಣಿಗ ಗುರು ಪೀಠದ ಡಾ. ಜಯ ಬಸವಕುಮಾರ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಗಾಣಿಗ ಸಮಾಜ ತಾಲೂಕು ಅಧ್ಯಕ್ಷ ಬಸವರಾಜ ನವಲಗುಂದ ವಹಿಸಿದ್ದರು. ರೋಣ ಮತ್ತು ಅಥಣಿ ನೂತನ ಶಾಸಕರು ಸೇರಿದಂತೆ ಗಾಣಿಗ ಸಮಾಜದ ಅನೇಕ ಗಣ್ಯರು, ಸಾಧಕರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ ಮಾತನಾಡಿದರು.

ವಿಶ್ವಕರ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ಕೆ.ಪಿ.ನಂಜುಂಡಿ

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಸಿ.ಕೆ. ಸುಂಕದ, ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ಗಾಣಿಗ ಸಮಾಜ ಜಿಲ್ಲಾಧ್ಯಕ್ಷ ಬಸವರಾಜ ಬಿಂಗಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ಹುಚ್ಚಪ್ಪ ನವಲಗುಂದ, ಡಾ. ಶೇಖರ ಸಜ್ಜನ, ಷಣ್ಮುಖಪ್ಪ ಬಡ್ನಿ, ವ್ಹಿ.ಆರ್‌. ಗುಡಿಸಾಗರ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮೇಟಿ, ಫಕೀರಗೌಡ ಪಾಟೀಲ, ರಂಗನಗೌಡ ಗೌಡಪ್ಪಗೌಡ್ರ, ಶಿವನಪ್ಪ ಮಂಡಸೊಪ್ಪಿ, ಅಮರಗೌಡ ಗೌಡರ, ಉಮೇಶ ಮಂಡಸೊಪ್ಪಿ, ವೆಂಕನಗೌಡ ಗೋವಿಂದಗೌಡ್ರ, ಬಿ.ಸಿ. ಸುಂಕದ, ಎಸ್‌.ಎಚ್‌. ಪಾಟೀಲ, ಬಿ.ಸಿ. ಪಾಟೀಲ, ನಿಂಗಪ್ಪ ಬದಾಮಿ, ಖ್ಯಾತನಗೌಡ ಚನ್ನಪ್ಪಗೌಡ್ರ, ವೀರಣ್ಣ ಹೊರಕೇರಿ, ಸಂಗು ನವಲಗುಂದ, ಅಭಿಷೇಕ ನವಲಗುಂದ, ಬಸನಗೌಡ ಶಿರಗುಂಪಿ, ಶರಣಪ್ಪ ಸಜ್ಜನ ಮುಂತಾದವರು ಉಪಸ್ಥಿತರಿದ್ದರು. ತಾಪಂ ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ ಸ್ವಾಗತಿಸಿದರು.

click me!