* ಮಳೆ ನೀರಿಗೆ 22 ವರ್ಷದಲ್ಲಿ 2ನೇ ಸಲ ರಾಮನಗರದ ಕಣ್ವ ಜಲಾಶಯ ಪೂರ್ಣ
* ಇಗ್ಗಲೂರು ಬ್ಯಾರೇಜ್, ಹಾರೋಬೆಲೆ, ಮಂಚನಬೆಲೆ ಜಲಾಶಯಗಳೂ ಭರ್ತಿ
* ಕೆಆರ್ಎಸ್ಗೆ 2 ಅಡಿ ನೀರು
ಬೆಂಗಳೂರು(ಮೇ.20): ಕಳೆದೊಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೇಸಿಗೆ ಕಾಲದಲ್ಲೇ ರಾಜ್ಯದಲ್ಲಿ ಅನೇಕ ಕೆರೆಕಟ್ಟೆಗಳು ಮಾತ್ರವಲ್ಲದೆ, ಅಣೆಕಟ್ಟುಗಳೂ ಮೈದುಂಬಿವೆ. ಕೊಡಗಿನ ಹಾರಂಗಿ ಜಲಾಶಯ ಬೇಸಿಗೆಯಲ್ಲಿ ಇದೇ ಮೊದಲ ಭಾರಿಗೆ ಭರ್ತಿಯಾಗುವ ಹಂತ ತಲುಪಿದರೆ, ರಾಮನಗರ ಜಿಲ್ಲೆಯ ಕಣ್ವ ಜಲಾಶಯ 22 ವರ್ಷದಲ್ಲಿ 2ನೇ ಬಾರಿಗೆ ತುಂಬಿದೆ.
ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರು ಬಿಡಲು ನಿರ್ಧರಿಸಲಾಗಿದೆ. ಜಲಾಶಯಕ್ಕೆ 4,000 ಕ್ಯುಸೆಕ್ ಒಳಹರಿವಿದ್ದು, 350 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ ಆಗಿದ್ದು, ಜಲಾಶಯದಲ್ಲಿ 2849.60 ಅಡಿ ನೀರಿನ ಸಂಗ್ರಹವಿದೆ. ಈ ಜಲಾಶಯ ಬೇಸಿಗೆಯಲ್ಲಿ ಭರ್ತಿಯಾಗುವ ಹಂತ ತಲುಪುತ್ತಿರುವುದು ಇದೇ ಮೊದಲು.
ಪ್ರವಾಸಿಗರ ಮೋಜು, ಮಸ್ತಿಗೆ ಬ್ರೇಕ್ : ಡ್ಯಾಂ ಹಿನ್ನೀರು ಪ್ರದೇಶಕ್ಕೆ ಕಂದಕ ನಿರ್ಮಾಣ
ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಣ್ವ ಜಲಾಶಯ, ಇಗ್ಗಲೂರಿನ ಬ್ಯಾರೇಜ್, ಮಾಗಡಿಯ ಮಂಚನಬೆಲೆ ಜಲಾಶಯ ಹಾಗೂ ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯಗಳೂ ಭರ್ತಿಯಾಗಿವೆ. ಈ ಭಾಗದ ಕುಡಿಯುವ ನೀರು ಮತ್ತು ಕೃಷಿಗೆ ಈ ಜಲಾಶಯಗಳೇ ಜೀವಾಧಾರ. ಕಣ್ವ ಜಲಾಶಯ ಕಳೆದ ಬೇಸಿಗೆಯಲ್ಲೂ ಭರ್ತಿಯಾಗಿತ್ತು. ಇದೀಗ ಮತ್ತೆ ಭರ್ತಿಯಾಗಿರುವುದರಿಂದ ಇಪ್ಪತ್ತೆರಡು ವರ್ಷಗಳಲ್ಲಿ 2ನೇ ಬಾರಿ ಭರ್ತಿಯಾದಂತಾಗಿದೆ.
ಕೆಆರ್ಎಸ್ಗೆ 2 ಅಡಿ ನೀರು:
ನಾಡಿನ ಪ್ರಮುಖ ಜಲಾಶಯಗಳಲ್ಲೊಂದಾದ ಕೆಆರ್ಎಸ್ಗೆ ಬುಧವಾರ ರಾತ್ರಿಯಿಂದೀಚೆಗೆ 2 ಅಡಿಗಳಷ್ಟುನೀರು ಹರಿದುಬಂದಿದೆ. ಅಣೆಕಟ್ಟೆಗೆ 16 ಸಾವಿರ ಕ್ಯುಸೆಕ್ ನೀರು ಒಳಹರಿವಿದ್ದು, ಬೇಸಗೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಇದೇ ಮೊದಲು. ಕೆಆರ್ಎಸ್ ಡ್ಯಾಂನ ಗರಿಷ್ಠ ಮಟ್ಟ124.80 ಅಡಿಗಳಾಗಿದ್ದು, ಸದ್ಯ 102.30 ಅಡಿಗಳಷ್ಟು ನೀರು ಸಂಗ್ರಹವಿದೆ. ಅದೇ ರೀತಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ ಕೋಡಿ ಬಿದ್ದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
1.ಚನ್ನಪಟ್ಟಣದ ಇಗ್ಗಲೂರು ಬ್ಯಾರೇಜ್
2.ಚನ್ನಪಟ್ಟಣದ ಕಣ್ವ ಡ್ಯಾಂ
3.ಕನಕಪುರದ ಹಾರೋಬೆಲೆ ಜಲಾಶಯ
4.ಮಾಗಡಿಯ ಮಂಚನಬೆಲೆ ಜಲಾಶಯ