ಗುಜರಾತ್‌ ಗೆಲುವು ಕರ್ನಾಟಕ ವಿಧಾನಸಭೆ ಚುನಾವಣೆಯ ದಿಕ್ಸೂಚಿ : ಕಾರಜೋಳ

By Kannadaprabha NewsFirst Published Dec 9, 2022, 5:14 AM IST
Highlights

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಪೂರ್ವ ಹಾಗೂ ಅಭೂತಪೂರ್ವ ಗೆಲುವು ಸಾಧಿಸಿದೆ. ಇದು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಕರ್ನಾಟಕ ವಿಧಾನಸಭೆ ಚುನಾವವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವುದು ನಿಶ್ವಿತ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.

   ವಿಜಯಪುರ (ಡಿ. 09): ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಪೂರ್ವ ಹಾಗೂ ಅಭೂತಪೂರ್ವ ಗೆಲುವು ಸಾಧಿಸಿದೆ. ಇದು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಕರ್ನಾಟಕ ವಿಧಾನಸಭೆ ಚುನಾವವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವುದು ನಿಶ್ವಿತ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, (PM Narendra Modi)  ಅವರ ಜನಪರ ಹಾಗೂ ಪ್ರಗತಿಪರ ಕಾರ್ಯ ವೈಖರಿ, ಗುಜರಾತ್‌ ಪ್ರಗತಿಯ ಮಾದರಿಯಿಂದಾಗಿ ಬಿಜೆಪಿ (BJP)  ಗುಜರಾತ್‌ ರಾಜ್ಯದಲ್ಲಿ ಗೆಲುವಿನ ನಗೆ ಬೀರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ದೇಶದಲ್ಲಿ ಶಿಕ್ಷಣ, ನೀರಾವರಿ, ಮೂಲಸೌಕರ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ, ಜನಪರ, ರೈತಪರ ಕಾರ್ಯಕ್ರಮಗಳ ಅನುಷ್ಠಾನದಿಂದಾಗಿ ಜನತೆ ಬಿಜೆಪಿಗೆ ಒಲವು ತೋರಿ ಭರ್ಜರಿ ಗೆಲುವಿನ ಉಡುಗೊರೆ ನೀಡಿದ್ದಾರೆ. ಸಮರ್ಥ ನಾಯಕತ್ವ ಹಾಗೂ ಕಾರ್ಯಕರ್ತ ಬಂಧುಗಳ ಶ್ರಮದಿಂದ ಗೆಲುವು ಸಾಧಿಸಿದೆ. ಈ ಗೆಲುವು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದ್ದು, ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತವಾಗಿದೆ ಎಂದು ಅವರು ಹೇಳಿದ್ದಾರೆ.

 ಮುದ್ದೇಬಿಹಾಳದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಮುದ್ದೇಬಿಹಾಳ: ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಬಿಜೆಪಿ ಘಟಕದಿಂದ ವಿಜಯೋತ್ಸವದಲ್ಲಿ ಹಮ್ಮಿಕೊಳ್ಳಲಾಯಿತು. ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಡಾ.ವೀರೇಶ ಪಾಟೀಲ್‌, ಬಿಜೆಪಿ ಎಸ್ಟಿಮೋರ್ಚಾ ಜಿಲ್ಲಾಧ್ಯಕ್ಷ ದೇವೇಂದ್ರ ವಾಲೀಕಾರ, ನಗರ ಘಟಕದ ಅಧ್ಯಕ್ಷ ಪುನೀತ ಹಿಪ್ಪರಗಿ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಸತೀಶ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ದಡ್ಡಿ(ಶಿವು), ವಿಕ್ರಮ ಓಸ್ವಾಲ್‌, ಪರಶುರಾಮ ಮುರಾಳ, ಬಿ.ಮುರಳಿಕೃಷ್ಣ, ಸಚಿನ್‌ ಚಿನ್ನಾಪೂರ ಮೊದಲಾದವರು ಇದ್ದರು.

ಗುಜರಾತ್‌ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ

  ಮೈಸೂರು :  ಗುಜರಾತ್‌ ವಿಧಾನಸಭೆಯ ಚುನಾವಣೆಯ ಫಲಿತಾಂಶದಿಂದ ಮುಂಬರಲಿರುವ ಕರ್ನಾಟಕ ವಿಧಾನಸಭೆಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಮತ್ತು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾರದ ವಾತಾವರಣವನ್ನು ಸೃಷ್ಟಿಸಿ, ಕಾಂಗ್ರೆಸ್‌ ನಾಯಕರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆದುಕೊಂಡಿದೆ. ಪ್ರಧಾನಮಂತ್ರಿಯ ತವರೂರಾದ ಗುಜರಾತ್‌ನಲ್ಲಿ ನರೇಂದ್ರ ಮೋದಿಯವರು ಜನರ ಮನಸ್ಸನ್ನು ತಲುಪಲು ಆಡಿದ ನಾಟಕ ಪ್ರಜಾಪ್ರಭುತ್ವವನ್ನೇ ಅಪಮಾನಿಸುವಂತಿತ್ತು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಹೇಳುವ ಬಿಜೆಪಿಗೆ ಹಿಮಾಚಲಪ್ರದೇಶ ಚುನಾವಣೆ ತಕ್ಕ ಉತ್ತರ ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೇ ಜನ ತಿರುಗಿ ಬಿದ್ದಿದ್ದಾರೆ. ಜನಸಂಕಲ್ಪ ಯಾತ್ರೆಯ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಹಿಂದೆಯೂ ಗೆದ್ದಿಲ್ಲ, ಮುಂದೆಯೂ ಗೆಲ್ಲುವುದಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ. ತ್ರಿಕೋನ ಸ್ಪರ್ಧೆ ಇಲ್ಲ ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಮಗಿರುವ ಅಪಾರ ಅನುಭವದ ಮೂಲಕ ಸರ್ಕಾರದ ಭ್ರಷ್ಟಾಚಾರವನ್ನು, ದುರಾಡಳಿತವನ್ನು, ವೈಫಲ್ಯಗಳನ್ನು ಜನತೆಗೆ ಜಾಗೃತಿ ಮೂಡಿಸುವುದರಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಟೀಕೆಗಳಿಗೆ ಉತ್ತರ ಕೊಡಲು ಸಾಧ್ಯವಾಗದೇ, ಮುಖ್ಯಮಂತ್ರಿಯಾದಿಯಾಗಿ ಇಡೀ ಸಚಿವ ಸಂಪುಟವೇ ಸಿದ್ದರಾಮಯ್ಯನವರ ವಿರುದ್ಧ ತಿರುಗಿ ಬಿದ್ದಿದೆ ಎಂದು ದೂರಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಹಲವು ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಸಂಘಟಿಸಿದ್ದಾರೆ. ಬಿಜೆಪಿಯವರ ಜನಸಂಕಲ್ಪ ಯಾತ್ರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಬೇಕಾದ ಅನಿವಾರ್ಯತೆ ಬಿಜೆಪಿಗೆ ಬಂದಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

click me!