GTD ನಿರ್ಗಮನದಿಂದ ಜೆಡಿಎಸ್‌ ಮೇಲೆ ಪರಿಣಾಮ : ಉಳಿಯೋದು 3 ಮಾತ್ರ

By Kannadaprabha NewsFirst Published Aug 26, 2021, 10:35 AM IST
Highlights
  •  ಜಿ.ಟಿ. ದೇವೇಗೌಡರು ಪಕ್ಷ ತ್ಯಜಿಸುವುದು ಜಿಲ್ಲೆಯಲ್ಲಿ ಜೆಡಿಎಸ್‌ ಮೇಲೂ ಪರಿಣಾಮವಾಗಲಿದೆ
  • 2018 ರಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ 5 ರಲ್ಲಿ ಜಯ ಗಳಿಸಿತ್ತು
  • ಆದರೀಗ ಜಿಟಿಡಿ ಪಲಾಯನದಿಂದ ಜೆಡಿಎಸ್‌ಗೆ ಉಳಿಯೋದು ಮೂರೇ ಸ್ಥಾನ

ಮೈಸೂರು (ಆ.26):  ಜಿ.ಟಿ. ದೇವೇಗೌಡರು ಪಕ್ಷ ತ್ಯಜಿಸುವುದು ಜಿಲ್ಲೆಯಲ್ಲಿ ಜೆಡಿಎಸ್‌ ಮೇಲೂ ಪರಿಣಾಮವಾಗಲಿದೆ. 2008 ರಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ ಕೇವಲ ಒಂದು ಸ್ಥಾನ ಗಳಿಸಿತ್ತು. ಕೆ.ಆರ್‌. ನಗರದಿಂದ ಸಾ.ರಾ. ಮಹೇಶ್‌ ಮಾತ್ರ ಗೆದ್ದಿದ್ದರು. ಬಿಜೆಪಿ ಸೇರಿದ್ದ ಜಿ.ಟಿ. ದೇವೇಗೌಡರು ಹುಣಸೂರಿನಲ್ಲಿ ಸೋತಿದ್ದರು. ಉಳಿದೆಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಪರಾಭವಗೊಂಡಿತ್ತು.

ಆದರೆ 2013 ರಲ್ಲಿ ಜೆಡಿಎಸ್‌ಗೆ ಮರಳಿದ ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ, ಎಸ್‌. ಚಿಕ್ಕಮಾದು ಎಚ್‌.ಡಿ. ಕೋಟೆ ಗೆದ್ದಿದ್ದರು. ಕೆ.ಆರ್‌. ನಗರದಲ್ಲಿ ಸಾ.ರಾ. ಮಹೇಶ್‌ ಪುನಾರಾಯ್ಕೆಯಾಗಿದ್ದರು.

ಕಾಂಗ್ರೆಸ್‌ಗೆ ಜಿಟಿಡಿ, ಪುತ್ರ : ಮೂರು ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ತಳಮಳ!

2018 ರಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ 5 ರಲ್ಲಿ ಜಯ ಗಳಿಸಿತ್ತು. ಈ ಪೈಕಿ ಎಚ್‌. ವಿಶ್ವನಾಥ್‌ ನಂತರ ಬಿಜೆಪಿ ಸೇರಿದರು. ಈಗ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಹೋದರೆ ಕೆ.ಆರ್‌. ನಗರದ ಸಾ.ರಾ. ಮಹೇಶ್‌, ಪಿರಿಯಾಪಟ್ಟಣದ ಕೆ. ಮಹದೇವ್‌ ಹಾಗೂ ಟಿ.ನರಸೀಪುರದ ಎಂ. ಅಶ್ವಿನ್‌ಕುಮಾರ್‌ ಮಾತ್ರ ಉಳಿಯುತ್ತಾರೆ. ಕೆ. ಮಹದೇವ್‌ ಕೂಡ ಜಿಟಿಡಿ ಬಣದಲ್ಲಿ ಗುರುತಿಸಿಕೊಂಡು ತಮ್ಮ ಪುತ್ರ ಪಿ.ಎಂ. ಪ್ರಸನ್ನ ಅವರನ್ನು ಮೈಮುಲ್‌ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೀಗಾಗಿ ಮಹದೇವ್‌ ಪಕ್ಷದಲ್ಲಿ ಉಳಿದರೆ ಅವರಿಗೆ ಟಿಕೆಟ್‌ ಸಿಗಬಹುದು. ಇಲ್ಲವೇ ಪಿರಿಯಾಪಟ್ಟಣದಲ್ಲಿ ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ ಉಂಟಾಗಬಹುದು. ಅಲ್ಲಿ ಮಾಜಿ ಸಚಿವ ಕೆ. ವೆಂಕಟೇಶ್‌, ಅವರ ಪುತ್ರ ನಿತಿನ್‌ ವೆಂಕಟೇಶ್‌, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಮತ್ತಿತರರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರು.

click me!