PSI Recruitment Scam ತನಿಖೆಯಲ್ಲಿ ಸರ್ಕಾರ ಮೂಗು ತೂರಿಸಲ್ಲ: Minister Araga Jnanendra

By Kannadaprabha NewsFirst Published Jun 22, 2022, 5:51 AM IST
Highlights

ಪಿಎಸ್‌ಐ ಆಕ್ರಮ ನೇಮಕಾತಿ ಹಗರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತ ತನಿಖೆ ಮಧ್ಯೆ ಸರ್ಕಾರ ಎಂದಿಗೂ ಮೂಗು ತೂರಿಸುವುದಿಲ್ಲ ಎಂದು  ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಚನ್ನರಾಯಪಟ್ಟಣ (ಜೂನ್ 22): ಪಿಎಸ್‌ಐ ಆಕ್ರಮ ನೇಮಕಾತಿ ಹಗರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತ ತನಿಖೆ ಮಧ್ಯೆ ಸರ್ಕಾರ ಎಂದಿಗೂ ಮೂಗು ತೂರಿಸುವ ಕೆಲಸ ಮಾಡದೆ ತಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ನಿಲುವು ಹೊಂದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಚಿಕ್ಕಮಗಳೂರಿಗೆ ತೆರಳುವ ಮಾರ್ಗಮಧ್ಯೆ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರರವರು ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್‌ಐ ಆಕ್ರಮ ನೇಮಕಾತಿ ಹಗರಣದ ಸಮಗ್ರ ತನಿಖೆಯ ಸಲುವಾಗಿ ಕೊಂಚ ವಿಳಂಬವಾಗುತ್ತಿದೆ. ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆದಿದ್ದು, ಅವುಗಳ ಪೂರೈಕೆ, ಬಳಕೆ, ತಯಾರಿಕೆ ತನಿಖೆ ಸೇರಿದಂತೆ ಮತ್ತಷ್ಟುಮಂದಿ ಇರುವ ಬಗೆ ಸಂಶಯವಿದ್ದು, ತನಿಖೆ ಮುಂದುವರಿದಿದೆ ಎಂದರು.

ಯೋಗ ಮಾಡುವವರ ರೀತಿ ಮೋದಿ ಸುತ್ತ ಕುಳಿತಿದ್ದ ಭದ್ರತಾ ಸಿಬ್ಬಂದಿ!

ಅಭಿವೃದ್ಧಿ ಪರ್ವ: ಪಿಎಂ ನರೇಂದ್ರಮೋದಿ ಅವರು ದೇಶದ ಅಭಿವೃದ್ಧಿ ಮುಖೇನ ಜನರ ಖಾತೆಗೆ 15 ಲಕ್ಷ ರು. ಹಣ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸೋಮವಾರದಂದು ಬೆಂಗಳೂರಿನಲ್ಲಿ ಮೋದಿಯವರು 33 ಸಾವಿರ ಕೋಟಿ ರು. ಅಭಿವದ್ಧಿ ಕಾರ್ಯಗಳಿಗೆ ಗುದ್ದಲಿಪೂಜೆ, ಶಂಕುಸ್ಥಾಪನೆ ಮಾಡಿದ್ದಾರೆ. ಕಾಂಗ್ರೆಸ್‌ನವರ ಟ್ರೋಲ್‌ಗೆ ಉತ್ತರಿಸುವ ಅವಶ್ಯಕತೆಯಿಲ್ಲ, ದೇಶವನ್ನು 70 ವರ್ಷದಿಂದ ಲೂಟಿ ಮಾಡಿದವರು ಕಾಂಗ್ರೆಸಿಗರು, ನಾವು ಬಂದ ಮೇಲೆ ದೇಶದ ಅಭಿವೃದ್ಧಿ ಮಾಡಿದ್ದೇವೆ ಎಂದರು.

ಅಗ್ನಿಪಥ್‌ ಯೋಜನೆಯನ್ನು ಬಹಳ ಜನ ಅರ್ಥಮಾಡಿಕೊಂಡಿಲ್ಲ. ಅಗ್ನಿಪಥ್‌ ಯೋಜನೆ ಮುಖಾಂತರ 45 ಸಾವಿರ ಯುವಕರಿಗೆ 4 ವರ್ಷಗಳ ಕಾಲ ಕೆಲಸ ಸಿಕ್ಕಿ, ತದನಂತರ ಅವರ ಸ್ವಾವಲಂಬಿ ಬದುಕಿಗಾಗಿ ಸಾಕಷ್ಟುಹಣ ಅವರ ಕೈ ಸೇರುತ್ತದೆ. ಬೇರೆ ದೇಶಗಳಲ್ಲಿ ಪ್ರತಿಯೊಬ್ಬ ಯುವಕರು ಮಿಲಿಟರಿ ಟ್ರೈನಿಂಗ್‌ ಪಡೆಯುವುದು ಕಡ್ಡಾಯ ಅದರ ಬದಲು ನಾವು ಯುವಕರಿಗಾಗಿ ಅಗ್ನಿಪಥ್‌ ಯೋಜನೆ ಜಾರಿಗೆ ತಂದಿದ್ದು, ಅದನ್ನು ಅರ್ಥಮಾಡಿಕೊಂಡಲ್ಲಿ ಯಾರು ಸಹ ಅದನ್ನು ವಿರೋ​ಧಿಸುವುದಿಲ್ಲವೆಂದರು.

NATIONAL HERALD CASE; ರಾಹುಲ್‌ ಆಯ್ತು, ನಾಳೆ ಸೋನಿಯಾಗೆ ಇ.ಡಿ ಡ್ರಿಲ್‌?

ಪಿಎಸ್‌ಐ ನೇಮಕಾತಿ ಅಕ್ರಮದ ಸಂಪೂರ್ಣ ತನಿಖೆಗೆ ಆದೇಶ ಕೊಟ್ಟಿದ್ದೇವೆ. ಒಳ್ಳೆಯ ಸಿಐಡಿ ತಂಡವನ್ನು ತನಿಖೆಗೆ ನಿಯೋಜಿಸಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಪೊಲೀಸ್‌ ಅ​ಧಿಕಾರಿಗಳಿಂದ ಹಿಡಿದು ಇದರಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳು, ಹಣ ಕೊಟ್ಟವರು ಎಲ್ಲರನ್ನೂ ಜೈಲಿಗೆ ಕಳಿಸುತ್ತೇವೆ. ನಿನ್ನೆ ಕೂಡ ಒಬ್ಬರನ್ನು ಜೈಲಿಗೆ ಕಳಿಸಲಾಗಿದೆ. ಮುಖ್ಯ ಕಿಂಗ್‌ಪಿನ್‌ನನ್ನು ಮುಟ್ಟಿದರೆ ಸರ್ಕಾರವೇ ಬೀಳುತ್ತದೆ ಎನ್ನುವ ಎಚ್‌ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಅವರಿಗೆ ಯಾವುದೇ ಮಾಹಿತಿ ಇದ್ದರೂ ಕೊಡಿ ಎಂದು ಕೇಳಿದ್ದೇನೆ. ಸರ್ಕಾರ ಹೋದ್ರೆ ಹೋಗ್ಲಿ ಮಾಹಿತಿ ಕೊಡಿ ಎಂದಿದ್ದೇನೆ. ಅವರು ಇಲ್ಲಿಯವರೆಗೂ ಯಾವುದೇ ಮಾಹಿತಿ ಕೊಟ್ಟಿರುವುದಿಲ್ಲ. ಅವರು ಹೀಗೆ ಹೇಳುತ್ತಲೇ ಇರುತ್ತಾರೆ. ಆದರೆ ಯಾವುದನ್ನು ದಾಖಲೆ ಸಹಿತ ಹೇಳುವುದಿಲ್ಲ ಎಂದು ಚಾಟಿ ಬೀಸಿದರು.

ಪಿಎಸ್‌ಐ ಆಗಬೇಕು ಎಂದು ಕಷ್ಟಪಟ್ಟು ಓದಿದವರಿಗೆ, ಫಿಟ್‌ ಆಗಲು ವರ್ಷಾನುಗಟ್ಟಲೆ ದೇಹ ಸವೆಸಿರುವ ಮಕ್ಕಳಿಗೆ ಇದರಿಂದ ದುಃಖ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದುಡ್ಡಿದ್ದರೆ ಸೆಲೆಕ್ಟ್ ಆಗುತ್ತೇವೆ. ಇಷ್ಟೆಲ್ಲಾ ಕಷ್ಟಪಡುವುದು ಬೇಡ ಅಂದುಕೊಂಡಿದ್ದಾರೆ. ಅನೇಕ ವರ್ಷಗಳಿಂದ ಪರೀಕ್ಷೆಗಳಲ್ಲಿ ಈ ರೀತಿ ಆಗುತ್ತಿದೆ. ಈ ರೀತಿ ವ್ಯವಸ್ಥೆಗೆ ನಮ್ಮ ಸರ್ಕಾರ ಅವಕಾಶ ಕೊಡುವುದಿಲ್ಲ. ಅವರೆಲ್ಲರೂ ಜೈಲೊಳಗೆ ಬರಬೇಕು. ಇನ್ನೊಮ್ಮೆ ಈ ರೀತಿ ಮಾಡುವವರು ಎದೆ ಮುಟ್ಟಿನೋಡಿಕೊಳ್ಳಬೇಕು. ತನಿಖೆ ಮುಗಿದ ನಂತರ ಮತ್ತೆ ಪರೀಕ್ಷೆ ಮಾಡುವುದಾಗಿ ಹೇಳಿದರು.

click me!