ಬೆಂಗ್ಳೂರಿನ ಎಲ್ಲ ರಸ್ತೆಗಳ ಆಡಿಟ್‌ ನಡೆಸಲು ಸರ್ಕಾರ ನಿರ್ಧಾರ: ಸಿಎಂ ಬೊಮ್ಮಾಯಿ

Kannadaprabha News   | Asianet News
Published : Sep 24, 2021, 09:16 AM IST
ಬೆಂಗ್ಳೂರಿನ ಎಲ್ಲ ರಸ್ತೆಗಳ ಆಡಿಟ್‌ ನಡೆಸಲು ಸರ್ಕಾರ ನಿರ್ಧಾರ: ಸಿಎಂ ಬೊಮ್ಮಾಯಿ

ಸಾರಾಂಶ

*   ಗುಣಮಟ್ಟದ ಬಗ್ಗೆ ಆರೋಪ ಹಿನ್ನೆಲೆ  *   5 ವರ್ಷದಲ್ಲಿ 20 ಸಾವಿರ ಕೋಟಿ ವೆಚ್ಚ ಮಾಡಿದರೂ ಸುಧಾರಿಸದ ರಸ್ತೆಗಳು *   ಆಡಿಟ್‌ ಮಾಡುವುದರಿಂದ ಎಲ್ಲ ಮಾಹಿತಿ ಲಭ್ಯ  

ಬೆಂಗಳೂರು(ಸೆ.24): ಬೆಂಗಳೂರು(Bengaluru) ನಗರದ ರಸ್ತೆಗಳ ಗುಣಮಟ್ಟ, ಗುಂಡಿಗಳ ಬಗ್ಗೆ ಕೇಳಿ ಬರುತ್ತಿರುವ ದೂರುಗಳನ್ನು ನಿವಾರಿಸಿ ಹೊಣೆಗಾರಿಕೆ ನಿಗದಿಪಡಿಸಲು ರಸ್ತೆಗಳ ಆಡಿಟ್‌ ಮಾಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.  

ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ರು. ವೆಚ್ಚ ಮಾಡಿದ್ದರೂ ರಸ್ತೆಗಳ ಗುಣಮಟ್ಟ ಇಲ್ಲ, ಅನೇಕ ರಸ್ತೆಗಳು ಗುಂಡಿಯಿಂದ ತುಂಬಿಕೊಂಡಿವೆ. ಹೀಗಾಗಿ ಇದಕ್ಕೆಲ್ಲ ಕೊನೆ ಹಾಡಲು ನಗರದ ಎಲ್ಲ ರಸ್ತೆಗಳ ಆಡಿಟ್‌ ಮಾಡಲಾಗುವುದು ಎಂದರು.

ಆಡಿಟ್‌ ಮಾಡುವುದರಿಂದ ರಸ್ತೆ ನಿರ್ಮಾಣವಾದ ವರ್ಷ, ವೆಚ್ಚವಾದ ಮೊತ್ತ, ಗುತ್ತಿಗೆ ಪಡೆದವರು, ಎಂಜಿನಿಯರ್‌ ವಿವರ, ರಸ್ತೆ ನಿರ್ವಹಣಾ ಅವಧಿ ಸೇರಿದಂತೆ ಎಲ್ಲ ಮಾಹಿತಿಗಳು ಸಿಗುತ್ತದೆ. ಇದರಿಂದ ಕಳಪೆ ಕಾಮಗಾರಿ, ನಿರ್ವಹಣೆ ಅವಧಿ ಇದ್ದಾಗ್ಯೂ ನಿರ್ವಹಣೆ ಮಾಡದೇ ಇದ್ದಾಗ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲೂ ಸಾಧ್ಯ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಬೆಂಗ್ಳೂರಲ್ಲಿ ರಸ್ತೆ ಬದಿ ಅನಧಿಕೃತ ಪ್ರತಿಮೆ ಶೀಘ್ರ ತೆರವು: ಬಿಬಿಎಂಪಿ

2015-15ರಿಂದ ಇಲ್ಲಿವರೆಗೆ ಪಾಲಿಕೆ(BBMP) ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಎಲ್ಲ ರೀತಿಯ ರಸ್ತೆಗಳ(Road) ನಿರ್ಮಾಣ ಮತ್ತು ನಿರ್ವಹಣೆಗಾಗಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪಾಲಿಕೆ ವತಿಯಿಂದ 20,060 ಕೋಟಿ ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ನೀಡಲಾಗಿದೆ. ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ಪ್ರದೇಶಾಭಿವೃದ್ಧಿಯಡಿ 26 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಟೆಂಡರ ಶೂರ್‌ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯ ಟೆಂಡರ್‌ ಶೂರ್‌ ಯೋಜನೆಯಡಿ ಸರ್ಕಾರದ ಅನುದಾನದಲ್ಲಿ 46 ರಸ್ತೆಗಳನ್ನು 426.60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸಿ.ಆರ್‌.ರಮೇಶ್‌ ಅವರು, ಸರ್ಕಾರ ನಗರದ ರಸ್ತೆಗಳಿಗೆ ಮಾಡಿರುವ ವೆಚ್ಚ ನೋಡಿದರೆ ಪ್ರತಿ ಕಿ.ಮೀ. ರಸ್ತೆಗೆ 1.50-2 ಕೋಟಿ ವೆಚ್ಚ ಮಾಡಿದಂತಾಗುತ್ತದೆ. ಆದರೆ ಯಾವುದೇ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆ ಪಡೆದವರು, ಆ ರಸ್ತೆಗಳನ್ನು ಐದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕು, ಆದರೆ ಅಂತಹ ನಿರ್ವಹಣೆ ಕಂಡು ಬರುತ್ತಿಲ್ಲ. ಉದಾಹರಣೆಗೆ ಇತ್ತೀಚೆಗೆ ಮಾಗಡಿ ರಸ್ತೆಯಲ್ಲಿ ನಿರ್ಮಿಸಿದ ರಸ್ತೆ ಕೆಲವೇ ತಿಂಗಳಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಒಟ್ಟಾರೆ ಈ ರೀತಿ ಕಳಪೆ ರಸ್ತೆ ನಿರ್ಮಾಣ ಮಾಡಿದವರ ವಿರುದ್ಧ ಸರ್ಕಾರ ಅಥವಾ ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ