
ಬಾಗಲಕೋಟೆ: ಅಂಜುಮನ್ ಇಸ್ಲಾಂ ಕಮಿಟಿಯ ಅಭಿವೃದ್ಧಿಗಾಗಿ ಹಾಗೂ ಸಂಸ್ಥೆಯ ಬಹುಪಯೋಗಿ ಭವನ ನಿರ್ಮಿಸಲು ಸರಕಾರ ಒಂದು ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ಕುದುರೆ ತಿಳಿಸಿದರು.
ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಳೇದಗುಡ್ಡದಲ್ಲಿ ಅಂಜುಮನ್ ಎ ಇಸ್ಲಾಂ ಕಮಿಟಿ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿಸಲು ಕಮಿಟಿಯ ಹಿಂದಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜದ ಮುಖಂಡರು ಶಾಸಕರ ಮೂಲಕ ಸರ್ಕಾರಕ್ಕೆ ಸಾಕಷ್ಟು ಬಾರಿ ವಿನಂತಿ ಮಾಡಿಕೊಳ್ಳಲಾಗಿತ್ತು.
ಮನವಿಗೆ ಸ್ಪಂದಿಸಿದ ಈ ಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮತ್ತು ಬಾದಾಮಿ ಮತ ಕ್ಷೇತ್ರದ ಹಿಂದಿನ ಶಾಸಕ ಸಿ.ಎಂ. ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆಸಕ್ತಿವಹಿಸಿ ಬಹುಪಯೋಗಿ ಭವನ ನಿರ್ಮಿಸಲು ಅನುದಾನ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ನಿಕಟ ಪೂರ್ವ ಅಧ್ಯಕ್ಷ ಕೆ. ಆರ್. ರಾಯಚೂರು ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಸಲೀಂ ಇಳಕಲ್ಲ ಕಾರ್ಯದರ್ಶಿ ಎಂ.ಎಂ. ಮುದ್ದೇಬಿಹಾಳ, ಖಜಾಂಚಿ ಮೆಹಬೂಬ್ ಸವರಾಜು, ಸದಸ್ಯರಾದ ರಫೀಕ್ ಅಹಮದ್ ಕಲಬುರ್ಗಿ, ರಂಜಾನ್ ಶಾ ಮಕಾನದಾರ್, ಗೌಸ್ ಮೋಹಿದ್ದಿನ್ ಭಾಗವಾನ್, ಅನ್ವರ್ ಮುದುಗಲ್, ಕಲೀಲ್ ಕೊತ್ತಲ್, ಉಮರ್ ಡಾಲಾಯತ್, ಸಮೀರ್ ಡಾಲಾಯತ್ , ಮೆಹಬೂಬ್ ಹಣಿಗಿ, ಅಹಮದ್ ಅಮೀನಗಡ, ದಾದಾಪೀರ್ ಕಲಾದಗಿ, ಅಬ್ದುಲ ಗಫಾರ್ ಯಾಳಗಿ, ಅಬ್ದುಲ್ ಭಾಗವಾನ್, ಜಮೀರ ಮೌಲ್ವಿ ಮತ್ತು ಎಲ್ಲ ಮಸೀದಿಗಳ ಚೇರ್ಮನ್ನರು ಉಪಸ್ಥಿತರಿದ್ದರು.