
ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 27.72 ಕೋಟಿ ರು. ಮೌಲ್ಯದ 8.04 ಎಕರೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಡಳಿತ ತೆರವುಗೊಳಿಸಿ ವಶಕ್ಕೆ ಪಡೆದಿದೆ.
ಒತ್ತುವರಿಯಾಗಿದ್ದ ಗೋಮಾಳ, ಸರ್ಕಾರಿ ಖರಾಬು ಕೆರೆ, ಮುಪತ್ತು ಕಾವಲ್, ಸರ್ಕಾರಿ ಬಂಜರು, ಖರಾಬು ತೋಪು, ಹದ್ದುಗಿಡದಹಳ್ಳ, ಇನಾಂತಿ ಜಮೀನು ಹಾಗೂ ಗುಂಡುತೋಪು ಜಾಗಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.
ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಖಾಜಿಸೊಣ್ಣೇನಹಳ್ಳಿಯಲ್ಲಿ 6 ಕೋಟಿ ರು. ಮೌಲ್ಯದ 1.30 ಎಕರೆ ಗೋಮಾಳ, ಕಣ್ಣೂರಲ್ಲಿ 2 ಕೋಟಿ ರು. ಮೌಲ್ಯದ 22 ಗುಂಟೆ ಗೋಮಾಳ, ಆನೇಕಲ್ ತಾಲೂಕಿನ ಎಸ್. ಬಿಂಗೀಪುರದಲ್ಲಿ 9 ಕೋಟಿ ರು. ಮೌಲ್ಯದ 1.20 ಗುಂಟೆ ಖರಾಬು ಕೆರೆ, ಸರ್ಜಾಪುರದಲ್ಲಿ 45 ಲಕ್ಷ ರು. ಮೌಲ್ಯದ 13 ಗುಂಟೆ ಮುಪತ್ತು ಕಾವಲ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಶೇಷಗಿರಿಪುರಲ್ಲಿ 15 ಲಕ್ಷ ರು. ಮೌಲ್ಯದ 20 ಗುಂಟೆ ಸರ್ಕಾರಿ ಬಂಜರು, ಯಲಹಂಕ ತಾಲೂಕಿನ ಬಾಗಲೂರಿನಲ್ಲಿ 4 ಕೋಟಿ ರು. ಮೌಲ್ಯದ 1 ಎಕರೆ ಖರಾಬ್ ತೋಪು, ಇಟ್ಟಗಲಾಪುರದಲ್ಲಿ 65 ಲಕ್ಷ ರು. ಮೌಲ್ಯದ 32 ಗುಂಟೆ ಹದ್ದುಗಿಡದಹಳ್ಳ, ಉತ್ತರ ತಾಲೂಕಿನ ದಾಸನಪುರ ಬೈಯಂಡಹಳ್ಳಿ ಗ್ರಾಮದಲ್ಲಿ 5 ಕೋಟಿ ರು. ಮೌಲ್ಯದ 1.03 ಎಕರೆ ಇನಾಂತಿ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.