ಕಡಿಮೆ ದರದಲ್ಲಿ ಗುಣಮಟ್ಟದ ಮನೆಗಳನ್ನು ನೀಡುವ ಯೋಜನೆಯೊಂದರ ಬಗ್ಗೆ ಮುಖಂಡರು ಮಾಹಿತಿ ನೀಡಿದ್ದಾರೆ.
ಮೈಸೂರು (ಡಿ.05): ಬಿಡಿಎ ವತಿಯಿಂದ ಬೆಂಗಳೂರಿನ ಕೆಂಗೇರಿಯ ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ ಬಹುಮಹಡಿ ವಸತಿ ಸಮುಚ್ಚಯವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಎಂಡಿಎ ಅಧ್ಯಕ್ಷರು, ಆಯುಕ್ತರ ನಿಯೋಗ ಭೇಟಿ ಮಾಡಿ ಪರಿಶೀಲಿಸಿತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಹುಮಹಡಿ ವಸತಿ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಬಂಧ ಇಲ್ಲಿನ ವಸತಿ ಸಮುಚ್ಚಯದ ವಿನ್ಯಾಸ, ರಚನೆ ಸೇರಿದಂತೆ ಎಷ್ಟುಜಾಗದಲ್ಲಿ 2 ಬೆಡ್ ರೂಂ ಹಾಗೂ 3 ಬೆಡ್ ರೂಂ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಎಂಡಿಎ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದರು.
ಮೈಸೂರಲ್ಲಿ ಬಂದ್ : ಏನಿದೆ..? ಏನಿಲ್ಲ..? ...
ಯಾವ ತಂತ್ರಜ್ಞಾನದ ಮೂಲಕ ಕಟ್ಟಲಾಗಿದೆ? ಇಂತಹ ಮನೆಗಳನ್ನು ಬೆಂಗಳೂರು ವಲಯದಲ್ಲಿ ಎಲ್ಲೆಲ್ಲಿ ಕಟ್ಟಲಾಗಿದೆ? ಕಟ್ಟಲಾಗುತ್ತಿದೆ? ಇದರ ಬಗ್ಗೆ ಸಾರ್ವಜನಿಕರಿಂದ ಸ್ಪಂದನೆ ಹೇಗಿದೆ? ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡುವ ಯಾವುದಾದರೂ ಯೋಜನೆ ಇದೆಯೇ? ಎಂಬ ಕುರಿತು ನಿಯೋಗ ಮಾಹಿತಿ ಪಡೆಯಿತು. ಲಿಫ್ಟ್ಗಳು, ಸ್ಟೇರ್ಕೇಸ್ಗಳು, ಮಳೆ ಇಂಗುಗುಂಡಿ ನಿರ್ಮಾಣ, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಇತರ ಮೂಲ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆಯಿತು.
ಅಪಾರ್ಟ್ಮೆಂಟ್ ವಿನ್ಯಾಸ, ಒಳಾಂಗಣ ವ್ಯವಸ್ಥೆ, ಮೂಲಸೌಲಭ್ಯದ ಕುರಿತು ಎಂಡಿಎ ಅಧ್ಯಕ್ಷ ಎಚ್.ವಿ. ರಾಜೀವ್ ಅವರು, ವಾಸವಾಗಿರುವ ನಿವಾಸಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.
ಕಡಿಮೆ ದರದಲ್ಲಿ ಗುಣಮಟ್ಟದ ಮನೆ: ಈ ಸಂದರ್ಭದಲ್ಲಿ ಮಾತನಾಡಿದ ಎಂಡಿಎ ಅಧ್ಯಕ್ಷ ಎಚ್.ವಿ. ರಾಜೀವ್, ಸಾಮಾನ್ಯ ಜನರಿಗೂ ಮನೆಗಳು ಕಡಿಮೆ ದರದಲ್ಲಿ ಸಿಗಬೇಕು ಎಂಬ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರೂ ಕೂಡಾ ಆಶಯ ಹೊಂದಿದ್ದಾರೆ. ನಾವೂ ಮೈಸೂರು ಜನತೆಗೆ ಕಡಿಮೆ ದರದಲ್ಲಿ ಗುಣಮಟ್ಟದ ಮನೆಗಳನ್ನು ಮೈಸೂರಿನ ಜನತೆಗೆ ಇಷ್ಟವಾಗುವ ರೀತಿಯಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡಿದ್ದೇವೆ. ಇಲ್ಲಿನ ರೂಪುರೇಷೆ ಸೇರಿದಂತೆ ಎಲ್ಲ ಮಾಹಿತಿಯನ್ನೂ ಪಡೆದು ಮೈಸೂರಿಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಉಸ್ತುವಾರಿ ಸಚಿವ ಸೋಮಶೇಖರ್ಗೆ ಕೃತಜ್ಞತೆ: ಮೈಸೂರು ಹೊರವಲಯ, ರಿಂಗ್ರೋಡ್ ಸೇರಿದಂತೆ ಹಲವೆಡೆ 6 ರಿಂದ 8 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕೆ ಜನರ ಸ್ಪಂದನೆ ನೋಡಿಕೊಂಡು ನಾವು ಮುಂದೆ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡುತ್ತೇವೆ. ಇದಕ್ಕೆ ಸಹಕಾರ ನೀಡಿ, ಮುತುವರ್ಜಿ ವಹಿಸಿ ನಿಯೋಗವನ್ನು ಬೆಂಗಳೂರಿಗೆ ಕರೆಸಿಕೊಂಡು ಮಾಹಿತಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಅಲ್ಲದೆ, ಅವರ ನೇತೃತ್ವದಲ್ಲಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ರಾಜೀವ್ ಹೇಳಿದರು.
ಜನತೆ ಅಭಿರುಚಿಗೆ ತಕ್ಕಂತೆ ನಿರ್ಮಾಣ : ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಎಂಡಿಎ ಅಧ್ಯಕ್ಷ ಎಚ್.ವಿ. ರಾಜೀವ್ ಅವರು ಮೈಸೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು. ಕೊನೆಗೆ ಎಂಡಿಎ ಜೊತೆ ನಾನು ಸಭೆ ನಡೆಸಿದೆ. ಮೈಸೂರು ಜನತೆಗೆ ಕಡಿಮೆ ದರದಲ್ಲಿ ಗುಣಮಟ್ಟದ ಮನೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಜನರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು ಕ್ರಮವಹಿಸುತ್ತೇವೆ ಎಂದು ತಿಳಿಸಿದರು.
ಇನ್ನೂ ನಾಲ್ಕೈದು ಕಡೆ ವೀಕ್ಷಣೆ ಮಾಡಿ ಮೈಸೂರಿನಲ್ಲಿ ಈ ರೀತಿಯ ಮನೆ ಕಟ್ಟಲು ಸರಿಯಾದ ರೀತಿಯಾಗಿ ಪ್ಲ್ಯಾನ್ ಮಾಡಿ ಮೈಸೂರಿನಲ್ಲಿ ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಎಂಡಿಎ ಅಧ್ಯಕ್ಷರ ನೇತೃತ್ವದ ತಂಡ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.