ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು

Kannadaprabha News   | Kannada Prabha
Published : Feb 04, 2026, 08:30 AM IST
Dharmaraya Swamy Temple

ಸಾರಾಂಶ

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ತಿಗಳರ ಪೇಟೆ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕರಣ ವರದಿಯಾಗಿದೆ. ‘ಮುಜರಾಯಿ ಇಲಾಖೆಯಿಂದ ಹುಂಡಿ ಎಣಿಕೆ ವೇಳೆ ಬ್ಯಾಂಕ್‌ನಲ್ಲಿ ದೃಢೀಕರಣ ಮಾಡುವ ನೆಪದಲ್ಲಿ ಚಿನ್ನದ ನೆಕ್ಲೆಸ್‌ ಕಳವು ಮಾಡಲಾಗಿತ್ತು.

ಬೆಂಗಳೂರು : ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ತಿಗಳರ ಪೇಟೆ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕರಣ ವರದಿಯಾಗಿದೆ. ‘ಮುಜರಾಯಿ ಇಲಾಖೆಯಿಂದ ಹುಂಡಿ ಎಣಿಕೆ ವೇಳೆ ಬ್ಯಾಂಕ್‌ನಲ್ಲಿ ದೃಢೀಕರಣ ಮಾಡುವ ನೆಪದಲ್ಲಿ ಚಿನ್ನದ ನೆಕ್ಲೆಸ್‌ ಕಳವು ಮಾಡಲಾಗಿತ್ತು. ಈ ವಿಷಯ ಬಹಿರಂಗವಾದ ಬಳಿಕ ನೆಕ್ಲೆಸ್‌ ತೂಕ ಕಡಿಮೆ ಮಾಡಿ ಹುಂಡಿಗೆ ಹಾಕಲಾಗಿದೆ’ ಎಂಬ ಆರೋಪ ಕೇಳಿಬಂದಿದೆ.

ಇದರ ಬೆನ್ನಲ್ಲೇ ಕರ್ತವ್ಯಲೋಪ ಸಂಬಂಧ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಾಗರಾಜ್ ಅವರನ್ನು ಅಮಾನತು ಮಾಡಿ ಆದೇಶಿಸಿದೆ.

ನೆಕ್ಲೆಸ್‌ ಕಳವು ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೆ.ಸತೀಶ್‌ ಕಳೆದ ವರ್ಷ ದೇವಸ್ಥಾನಕ್ಕೆ ಹುಂಡಿ ಎಣಿಕೆಗೆ ಬಂದಿದ್ದ ಅಧಿಕಾರಿಗಳು ಹುಂಡಿ ಹಣ, ಆಭರಣವನ್ನು ಬ್ಯಾಂಕ್‌ನಿಂದ ಅಪ್ರೇಸ್‌ ಮಾಡುವ ನೆಪದಲ್ಲಿ ಕೊಂಡೊಯ್ದಿದ್ದರು. ಈ ವೇಳೆ ಒಬ್ಬ ಅಧಿಕಾರಿ 122 ಗ್ರಾಂ ತೂಕದ ನೆಕ್ಲೆಸ್‌ ಕಳವು ಮಾಡಿದ್ದರು.

ಸರ ನಾಪತ್ತೆ ಬಗ್ಗೆ ಆರ್‌ಟಿಐ ಮೂಲಕ ಪ್ರಶ್ನಿಸಿದಾಗ ಸರವನ್ನು ತಂದು ಹುಂಡಿಗೆ ಹಾಕಿ ಹೋಗಿದ್ದಾರೆ. ಆದರೆ, 122 ಗ್ರಾಂ ಇದ್ದ ನೆಕ್ಲೆಸ್‌ ಕೇವಲ 68ಗ್ರಾಂ ತೂಕಕ್ಕೆ ಇಳಿದಿತ್ತು. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಕರಗದ ಹೂವಿನ ಅಲಂಕಾರದ ವಿಚಾರದಲ್ಲೂ ಅವ್ಯವಹಾರ ನಡೆದಿದೆ. ಇಲಾಖೆಯ ಐವರು ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿ ಅಮಾನತು

ಈ ಆರೋಪದ ಬೆನ್ನಲ್ಲೇ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೆ. ನಾಗರಾಜ್ ಅವರನ್ನು ಅಮಾನತು ಮಾಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.

ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಇವರ ಕರ್ತವ್ಯ ಲೋಪ ಕಂಡು ಬಂದಿರುವುದರಿಂದ ಕೆ. ನಾಗರಾಜ್ ಅವರ ವಿರುದ್ಧ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿರುವುದಾಗಿ ಇಲಾಖೆ ಆಯುಕ್ತ ಶರತ್ ಆದೇಶದಲ್ಲಿ ತಿಳಿಸಿದ್ದಾರೆ.

ತಪ್ಪಿತಸ್ಥರ ಮೇಲೆ ಕ್ರಮ: ರಾಮಲಿಂಗಾರೆಡ್ಡಿ ಸ್ಪಷ್ಟನೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ವ್ಯವಸ್ಥಾಪನ ಸಮಿತಿಯ ಹಿಂದಿನ ಅಧ್ಯಕ್ಷ ಸತೀಶ್ ಅವರು ನೆಕ್ಲೆಸ್‌ ವಿಚಾರದಲ್ಲಿ ಮಾಡಿರುವ ಆರೋಪ ಗಮನಕ್ಕೆ ಬಂದಿದೆ. ನೆಕ್ಲೆಸ್‌ ಕಳವಾಗಿದೆ. ಬಳಿಕ ಯಾರೋ ಮತ್ತೆ ಹುಂಡಿಯಲ್ಲಿ ಹಾಕಿದ್ದಾರೆ ಎಂದು ಹೇಳಿದ್ದಾರೆ. ಮುಜರಾಯಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದು, ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

ಬೈರಪ್ಪ ಹರೀಶ್ ಕುಮಾರ್‌ಗೆ ಪ್ರಾಣ ಬೆದರಿಕೆ ಆರೋಪ: ಗಿಳಿಯಾರ್‌ ಸೇರಿ ಮೂವರ ವಿರುದ್ಧ FIR
ಕನಕಗಿರಿ: ಸಚಿವ ಶಿವರಾಜ್‌ ತಂಗಡಗಿ ಕುಟುಂಬದಿಂದ ಸರ್ಕಾರಿ ಶಾಲೆಗೆ ಭೂಮಿದಾನ