
ಮೂಡಿಗೆರೆ (ಫೆ.3): ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಯುವತಿಯ ಮೇಲೆ ದೇವಸ್ಥಾನದ ಅರ್ಚಕನೊಬ್ಬ ನಿರಂತರವಾಗಿ ಅತ್ಯಾ*ರ ಎಸಗಿರುವ ಲಜ್ಜೆಗೆಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜಾತಕ ದೋಷದ ಹೆಸರಲ್ಲಿ ಯುವತಿಯನ್ನು ನಂಬಿಸಿ ವಂಚಿಸಿದ ಅರ್ಚಕ ಕೃಷ್ಣರಾವ್ ಎಂಬಾತನನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.
ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕನಾಗಿದ್ದ ಕೃಷ್ಣರಾವ್ ಬಳಿ 23 ವರ್ಷದ ಯುವತಿ ತನ್ನ ಮದುವೆ ವಿಚಾರವಾಗಿ ಜಾತಕ ತೋರಿಸಲು ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಅರ್ಚಕ, "'ನಿನ್ನ ಜಾತಕದಲ್ಲಿ ಗಂಭೀರ ದೋಷವಿದೆ, ಅದನ್ನು ಸರಿಪಡಿಸಲು ಪೂಜೆ ಅಥವಾ ತಡೆ ಹೊಡೆಯಬೇಕು' ಎಂದು ಯುವತಿಯನ್ನು ನಂಬಿಸಿದ್ದಾನೆ.
ದೋಷ ನಿವಾರಣೆಯ ಹೆಸರಿನಲ್ಲಿ 2025ರ ನವೆಂಬರ್ 23 ರಿಂದ 2026ರ ಫೆಬ್ರವರಿ 2ರವರೆಗಿನ ಅವಧಿಯಲ್ಲಿ ಯುವತಿಯ ಮೇಲೆ ಅರ್ಚಕ ಹಲವು ಬಾರಿ ಅತ್ಯಾ*ರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಭಕ್ತಿ ಮತ್ತು ನಂಬಿಕೆಯಿಂದ ಹೋದ ಯುವತಿಗೆ ದೇವಸ್ಥಾನದ ಆವರಣದಲ್ಲಿಯೇ ನರಕದರ್ಶನ ಮಾಡಿಸಿದ್ದಾನೆ.
ಅರ್ಚಕನ ಕಾಮದೃಷ್ಠಿ ಮತ್ತು ದೌರ್ಜನ್ಯ ತಾಳಲಾರದೆ ನೊಂದ ಯುವತಿ ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್ನನ್ನು ಬಂಧಿಸಿ, ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.