ತಪ್ಪಿಸಿಕೊಳ್ಳೋ ಟೈಮಲ್ಲಿ ಫೋನ್ ಆನ್ ಮಾಡಿದ ಮಗಳು: ಸಿಕ್ಕಿಬಿದ್ದ ಸ್ವಪ್ನಾ ಸುರೇಶ್

By Kannadaprabha NewsFirst Published Jul 13, 2020, 10:58 AM IST
Highlights

ಕೇರಳ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ 30 ಕೆ.ಜಿ. ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಬಲೆಗೆ ಬಿದ್ದಿದ್ದು ಹೇಗೆ ಎಂಬ ಕುತೂಹಲಕರ ಮಾಹಿತಿ ಲಭ್ಯವಾಗಿದೆ.

ಕೊಚ್ಚಿ(ಜು.13): ಕೇರಳ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ 30 ಕೆ.ಜಿ. ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಬಲೆಗೆ ಬಿದ್ದಿದ್ದು ಹೇಗೆ ಎಂಬ ಕುತೂಹಲಕರ ಮಾಹಿತಿ ಲಭ್ಯವಾಗಿದೆ.

ಸ್ವಪ್ನಾ ಸುರೇಶ್‌ ಪುತ್ರಿ ಸ್ವಿಚ್‌ ಆಫ್‌ ಆಗಿದ್ದ ತನ್ನ ಮೊಬೈಲ್‌ ಫೋನ್‌ ಅನ್ನು ಸ್ವಿಚ್‌ ಆನ್‌ ಮಾಡಿದ್ದರಿಂದ ಆರೋಪಿ ಇರುವ ಸ್ಥಳದ ಬಗ್ಗೆ ಎನ್‌ಐಎಗೆ ಮಾಹಿತಿ ದೊರೆಯಿತು. ಇದರ ಆಧಾರದ ಮೇಲೆ ಹೈದರಾಬಾದ್‌ನ ಎನ್‌ಐಎ ತಂಡ ಬೆಂಗಳೂರಿಗೆ ಆಗಮಿಸಿ ಸ್ವಪ್ನಾ ಸುರೇಶ್‌ ಹಾಗೂ ಇನ್ನೊಬ್ಬ ಆರೋಪಿ ಸಂದೀಪ್‌ನನ್ನು ಬಂಧಿಸಿತು ಎಂದು ವರದಿಗಳು ತಿಳಿಸಿವೆ.

ಕೇರಳದಲ್ಲಿ ಸಿಕ್ಕಿದ್ದ 15 ಕೋಟಿ ಚಿನ್ನ, ಬೆಂಗಳೂರಲ್ಲಿ ಬಲೆಗೆ ಬಿದ್ದ ಸ್ವಪ್ನ!

ಶುಕ್ರವಾರದವರೆಗೂ ಕೊಚ್ಚಿಯಲ್ಲೇ ಇದ್ದ ಸ್ವಪ್ನಾ, ಚಿನ್ನ ಸ್ಮಗ್ಲಿಂಗ್‌ ಪ್ರಕರಣವನ್ನು ಎನ್‌ಐಎಗೆ ವಹಿಸುತ್ತಿದ್ದಂತೆ ಬೆಂಗಳೂರಿಗೆ ಬಂದಿದ್ದಳು. ಕೋರಮಂಗಲದ ಸುಧೀಂದ್ರ ರೈ ಎನ್ನುವವರ ಸವೀರ್‍ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಅಡಗಿಕೊಂಡಿದ್ದಳು. ಇತ್ತೀಚೆಗೆ ಸ್ವಪ್ನಾ ಸುರೇಶ್‌ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿದ್ದಳು. ಹೀಗಾಗಿ ಆಕೆ ಬಳಸುತ್ತಿದ್ದ 15 ಮೊಬೈಲ್‌ಗಳ ಮೇಲೆ ಎನ್‌ಐಎ ನಿಗಾ ಇಟ್ಟಿತ್ತು. ಸ್ವಪ್ನಾ ಸುರೇಶ್‌ ಪುತ್ರಿ ಮೊಬೈಲ್‌ ಸ್ವಿಚ್‌ ಆನ್‌ ಮಾಡಿದ್ದರಿಂದ ಆಕೆಯ ಬಗ್ಗೆ ಸುಳಿವು ಲಭ್ಯವಾಯಿತು.

ಬಳಿಕ ಈ ಮಾಹಿತಿಯನ್ನು ಎನ್‌ಐಎ ತನ್ನ ಹೈದರಾಬಾದ್‌ ಘಟಕಕ್ಕೆ ರವಾನಿಸಿತ್ತು. ಈ ಸುಳಿವಿನ ಆಧಾರದ ಮೇಲೆ ಕೋರಮಂಗಲದ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ಹೈದರಾಬಾದ್‌ ಎನ್‌ಐಎ ತಂಡ ಸ್ವಪ್ನಾ ಸುರೇಶ್‌ ಹಾಗೂ ಇನ್ನೊಬ್ಬ ಆರೋಪಿ ಸಂದೀಪ್‌ನನ್ನು ಬಂಧಿಸಿತು. ಬಳಿಕ ಇಬ್ಬರನ್ನೂ ದೊಮ್ಮಲೂರಿನ ಎನ್‌ಐಎ ಕಚೇರಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PUC ಓದಿದ ಕ್ರಿಮಿನಲ್ ಸ್ವಪ್ನಾ ದೂತಾವಾಸ ಕಚೇರಿಯಲ್ಲಿ ಆಫೀಸರ್ ಆಗಿದ್ದೇಗೆ..? ಸ್ಮಗ್ಲಿಂಗ್ ಸುಂದರಿಯ ಸೀಕ್ರೆಟ್

ಇದೇ ವೇಳೆ ಸ್ವಪ್ನಾ ಮತ್ತು ಸಂದೀಪ್‌ರನ್ನು ಕೇರಳಕ್ಕೆ ಕರೆತರಲಾಗಿದ್ದು, ಎರ್ನಾಕುಲಂನಲ್ಲಿರುವ ಅಲುವಾ ಆಸ್ಪತ್ರೆಯಲ್ಲಿ ಕೊರೋನಾ ವೈರಸ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಕೊಚ್ಚಿಯಲ್ಲಿರುವ ಎನ್‌ಐಎ ಕೊರ್ಟ್‌ಗೆ ಹಾಜರುಪಡಿಸಲಾಗಿದೆ. ಇಬ್ಬರನ್ನೂ ಕೋರ್ಟ್‌ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

click me!