Bagalkot: ಎತ್ತಿನಹೊಳೆ ಸಂತ್ರಸ್ಥರಂತೆ ಆಲಮಟ್ಟಿ ಹಿನ್ನೀರು ಸಂತ್ರಸ್ಥರಿಗೂ ಭೂಮಿ ಸಹಿತ ಪರಿಹಾರ ಕೊಡಿ

By Sathish Kumar KHFirst Published Dec 22, 2022, 7:20 PM IST
Highlights

ಉತ್ತರ ಕರ್ನಾಟಕಕ್ಕೆ ಅನ್ಯಾಯದ ಕೂಗು
ಆಲಮಟ್ಟಿ ಹಿನ್ನೀರು ಮುಳುಗಡೆ ಸಂತ್ರಸ್ಥರಿಗೆ ರಾಷ್ಟ್ರೀಯ ಪುನರ್​ವಸತಿ ನೀತಿ ಅನ್ವಯಕ್ಕೆ ಆಗ್ರಹ
ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವಂತೆ ಸ್ಥಳೀಯರ ಆಗ್ರಹ
ಹಲವು ವರ್ಷಗಳಿಂದ ಸರ್ಕಾರದಿಂದ ಕಾಳಜಿ ನಿರ್ಲಕ್ಷ್ಯ

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಡಿ.22): ರಾಜ್ಯದಲ್ಲಿ ಮೇಲಿಂದ ಮೇಲೆ ಆಗಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಅದೀಗ ನಾಡಿನ ಒಳಿತಿಗಾಗಿ ಮುಳುಗಡೆಯಾಗಿ ತಮ್ಮ ತಮ್ಮ ಮನೆ ಮಠಗಳನ್ನ ಬಿಟ್ಟು ಹೋಗುತ್ತಿರೋ ಸಂತ್ರಸ್ಥರನ್ನು ಬಿಟ್ಟಿಲ್ಲ. ಯಾಕಂದ್ರೆ ಅಂತಹವೊಂದು ತಾರತಮ್ಯ ಇದೀಗ ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಸಂತ್ರಸ್ಥರಿಗೂ ಕಾಡುತ್ತಿದೆ.

ಒಂದೆಡೆ ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿ ಮುಳುಗಡೆಯಾಗಿರುವ ಗ್ರಾಮಗಳು, ಮತ್ತೊಂದೆಡೆ ಸಂತ್ರಸ್ಥರ ಬೇಡಿಕೆಗಳನ್ನ ಸಂಪೂರ್ಣ ಈಡೇರಿಸದೇ ರಾಜ್ಯದಲ್ಲಿ ಆಡಳಿತ ಮಾಡಿ ಹೋಗಿರೋ ಬೇರೆ ಬೇರೆ ಪಕ್ಷಗಳ ಸರ್ಕಾರಗಳು, ಇವುಗಳ ಮಧ್ಯೆ ಸಂತ್ರಸ್ಥರಿಗಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಕೇಳಿ ಬರುತ್ತಿರೋ ಒತ್ತಾಯವಾಗಿದೆ. ಅಂದಹಾಗೆ ಇಂತಹವೊಂದು ಚಿತ್ರಣ ಕಂಡು ಬರೋದು ಮುಳುಗಡೆ ನಾಡು ಬಾಗಲಕೋಟೆಯಲ್ಲಿ ಎಂಬುದು ಆಶ್ವರ್ಯವಾಗಿದೆ. ಏಷ್ಯಾದಲ್ಲಿ ಅತಿಹೆಚ್ಚು ಮುಳುಗಡೆ ವ್ಯಾಪ್ತಿಗೆ ಒಳಪಡುವ ಯೋಜನೆಗಳಲ್ಲೊಂದಾಗಿರೋ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಲವು ದಶಕಗಳಿಂದ ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿನ ಗ್ರಾಮಗಳ ಮುಳುಗಡೆ, ಭೂಸ್ವಾಧೀನ ನಂತರ ಪುನರ್ವಸತಿ ಪರಿಹಾರ ಕಾರ್ಯಗಳು ನಡೆಯುತ್ತಲೇ ಇವೆ. ಆದರೆ, ಇವು ಕ್ರಮಬದ್ಧವಾದ ಸರ್ಕಾರದ ನೀತಿಯಂತೆ ನಡೆಯುತ್ತಿಲ್ಲ.

ಆಲಮಟ್ಟಿ ಡ್ಯಾಂ ಎತ್ತರ: ನಾಲ್ಕು ಹಳ್ಳಿಗಳ ಸ್ಥಳಾಂತರಕ್ಕೆ 3,900 ಕೋಟಿ, ಸಿಎಂ ಬೊಮ್ಮಾಯಿ

ಕೇಂದ್ರ ಸರ್ಕಾರ ರಾಷ್ಟ್ರೀಯ ಪುನರ್ ವಸತಿ ನೀತಿಯನ್ನೇನೋ ಜಾರಿಗೊಳಿಸಿದೆ. ಆದರೆ, ಅದನ್ನ ಜಾರಿಗೊಳಿಸುವಲ್ಲಿ ರಾಜ್ಯದಲ್ಲಿ ಆಗಾಗ ಬಂದು ಹೋದ ಸರ್ಕಾರಗಳು ಮಾತ್ರ ಮನಸ್ಸು ಮಾಡ್ತಿಲ್ಲ. ಇದರಿಂದ ಸಹಜವಾಗಿಯೇ ನಾಡಿನ ಒಳಿತಿಗಾಗಿ ತಾವಿದ್ದ ಮನೆ ಮಠ ಊರನ್ನೇ ತೊರೆದ ಸಂತ್ರಸ್ಥರಿಗೆ ನ್ಯಾಯಯುತವಾದ ಪರಿಹಾರ ಮಾತ್ರ ಸಿಕ್ಕಿಲ್ಲ. ಹೀಗಾಗಿ ಸಧ್ಯ ಬೆಳಗಾವಿಯಲ್ಲಿ ನಡೆದಿರೋ ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ಥರ ಬಗ್ಗೆ ಚರ್ಚೆ ಮಾಡಿ ರಾಷ್ಟ್ರೀಯ ಪುನರ್ ವಸತಿ ನೀತಿಯನ್ವಯ ಪರಿಹಾರ ನೀಡುವಂತಾಗಬೇಕು ಎಂದು ಹೋರಾಟಗಾರ, ಆಪ್ ಮುಖಂಡ  ನಾಗರಾಜ್ ಹೊಂಗಲ್​ ಆಗ್ರಹಿಸಿದ್ದಾರೆ.

ಪರಿಹಾರಕ್ಕಾಗಿ ಭೂ ಬ್ಯಾಂಕ್ ಸ್ಥಾಪಿಸಿ:
ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ಥರಿಗಾಗಿ ಸರ್ಕಾರ ಈವರೆಗೆ ಕಾರ್ಯಕಾರಿ ಆದೇಶಗಳ ಮೂಲಕವೇ ಪರಿಹಾರ ನೀಡುತ್ತಲೇ ಬಂದಿವೆ. ಈ ಮಧ್ಯೆ ಸರ್ಕಾರ ಕಾರ್ಯಾದೇಶದ ಮೂಲಕ ಕೈಗೊಂಡ ನೀರಾವರಿ ಯೋಜನೆ ಮತ್ತು ಪುನರ್ವಸತಿ ಮತ್ತು ಪುನರ್​ ನಿರ್ಮಾಣ ಕಾರ್ಯಗಳು ತೃಪ್ತಿದಾಯಕವಾಗಿಲ್ಲ. ಈ ಮಧ್ಯೆ ಎತ್ತಿನ ಹೊಳೆ ಯೋಜನೆಯಲ್ಲಿ ಅನುಸರಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಜಮೀನು ಕಳೆದುಕೊಳ್ಳುವ ಸಂತ್ರಸ್ಥರಿಗೆ ಪರ್ಯಾಯವಾಗಿ ಜಮೀನು ಹಂಚುವ ವ್ಯವಸ್ಥೆ ಇಲ್ಲ. ಹೀಗಾಗಿ ಜಮೀನು ಹಂಚಲು ಭೂ ಬ್ಯಾಂಕ್ ಸ್ಥಾಪನೆಯಾಗಬೇಕು ಮೇಲಾಗಿ ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಸಂತ್ರಸ್ಥರ ಬೇಡಿಕೆಯಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಒತ್ತಾಯಿಸಿದ್ದಾರೆ.

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಪಕ್ಷಿಧಾಮಕ್ಕೆ ವನ್ಯಜೀವಿ ಮಂಡಳಿ ಗ್ರೀನ್ ಸಿಗ್ನಲ್​

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ಥರಿಗೆ ಸರ್ಕಾರ ದ್ವಿಮುಖ ಧೋರಣೆ ಅನುಸರಿಸುತ್ತಿದ್ದು, ಆದಷ್ಟು ಬೇಗ ಆಲಮಟ್ಟಿ ಹಿನ್ನೀರು ಭಾಧಿತ ಸಂತ್ರಸ್ಥರಿಗೆ ರಾಷ್ಟ್ರೀಯ ಪುನರ್ ವಸತಿ ನೀತಿಯನ್ವಯ ಪರಿಹಾರ ನೀಡುವಂತಾಗಲಿ ಅನ್ನೋದೆ ಎಲ್ಲರ ಆಶಯ.

click me!