ವಿಜಯಪುರ: ಕಾಂಗ್ರೆಸ್‌ ನಾಯಕ ಎಸ್‌.ಆರ್‌. ಪಾಟೀಲ್‌ ಫೋಟೋ ಇರುವ ರಾಶಿ ರಾಶಿ ಗಿಫ್ಟ್‌ ಪತ್ತೆ..!

By Girish GoudarFirst Published Mar 28, 2023, 9:29 AM IST
Highlights

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಮದರಿ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆ ಗೋಡೌನ್‌ನಲ್ಲಿ ರಾಶಿ ರಾಶಿ ಗಿಫ್ಟ್ ಪತ್ತೆ. 

ವಿಜಯಪುರ(ಮಾ.28): ರಾಜ್ಯದಲ್ಲಿ ಚುನಾವಣೆ ಸಮೀಸುತ್ತಿದ್ದಂತೆಯೇ ಗಿಫ್ಟ್ ಪಾಲಿಟಿಕ್ಸ್ ಜೋರಾಗಿಯೇ ನಡೆದಿದೆ. ಮತದಾರರಿಗೆ ಹಂಚಲು ಇಡಲಾಗಿದ್ದ ರಾಶಿ ರಾಶಿ ಗಿಫ್ಟ್ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಮದರಿ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆ ಗೋಡೌನ್‌ನಲ್ಲಿ ನಿನ್ನೆ(ಸೊಮವಾರ) ನಡೆದಿದೆ. 

ಗಿಫ್ಟ್ ರಾಶಿ ಕಂಡು ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ್ ಭಾವಚಿತ್ರ ಇರುವ‌ ರಾಶಿ ರಾಶಿ ಗಿಫ್ಟ್‌ಗಳು ಪತ್ತೆಯಾಗಿವೆ. ಸಾವಿರಾರು ಗೋಡೆ ಗಡಿಯಾರ, ಗುಡ್ಡೆ, ಗುಡ್ಡೆ ಟೀ ಶರ್ಟ್‌ಗಳು ಪತ್ತೆಯಾಗಿವೆ. 

ಗಿಫ್ಟ್ ಪಾಲಿಟಿಕ್ಸ್ ಜೋರು: ವಿಜಯಪುರದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 90 ಕುಕ್ಕರ್ ವಶಕ್ಕೆ ಪಡೆದ ಪೊಲೀಸರು

ರಾತ್ರೋರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಡಿಸಿ ವಿಜಯಮಹಾಂತೇಶ ದಾನಮ್ಮನವರ್ ಹಾಗೂ ಎಸ್ಪಿ ಆನಂದಕುಮಾರ್‌ ಅವರೇ ಶಾಕ್ ಆಗಿದ್ದಾರೆ. ಮುದ್ದೇಬಿಹಾಳ ಚುನಾವಣಾಧಿಕಾರಿ ಪವಾರ್, ಸೆಕ್ಟರ್ ಅಧಿಕಾರಿ ಸುರೇಶ ಬಾವಿಕಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸ್ಥಳಕ್ಕೆ ಮುದ್ದೇಬಿಹಾಳ ತಹಶೀಲ್ದಾರ್ ರೇಖಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಇಡೀ ಗೋಡೌನ್ ತುಂಬ ಬರೀ ಗಿಫ್ಟ್‌ಗಳೇ ತುಂಬಿವೆ. ಹೀಗೆ ಇನ್ನೂ 5 ರಿಂದ 6 ಗೋಡೌನ್‌ಗಳಲ್ಲಿ ಗಿಫ್ಟ್‌ಗಳನ್ನ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ. ಎಸ್‌.ಆರ್‌. ಪಾಟೀಲ್‌ರು ದೇವರಹಿಪ್ಪರಗಿ, ಸ್ವಕ್ಷೇತ್ರ ಬೀಳಗಿಗೆ ಹಂಚಲು ತಂದಿರುವ ಶಂಕೆ ವ್ಯಕ್ತವಾಗಿದೆ. 

ಖಚಿತ ಮಾಹಿತಿ ತಿಳಿದು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸ್ವತಃ ಬಾಲಾಜಿ ಶುಗರ್ಸ್ ಎಂಡಿ ವೆಂಕಟೇಶ ಪಾಟೀಲ್ ಅವರು ಸ್ಥಳಕ್ಕೆ ಹಾಜರಾಗಿದ್ದಾರೆ.  ಬಾಲಾಜಿ ಕಾರ್ಖಾನೆ ಗೋಡೌನ್‌ನಲ್ಲಿ ಗಿಫ್ಟ್ ಪತ್ತೆಯಾಗಿದ್ದರಿಂದ ಸ್ಥಳಕ್ಕೆ ವಿಜಯಪುರ ಡಿಜಿ ವಿಜಯಮಹಾಂತೇಶ ದಾನಮ್ಮನವರ್ ಹಾಗೂ ಎಸ್ಪಿ ಆನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಡೀ ರಾತ್ರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಡಿ ರಾತ್ರಿ ಪರಿಶೀಲನೆ‌ ನಡೆಸಿದರೂ ಕೂಡ ಗಿಫ್ಟ್‌ಗಳ ಎಣಿಕೆ ಮುಗಿದಿಲ್ಲ ಅಂತ ತಿಳಿದು ಬಂದಿದೆ. ಹೀಗಾಗಿ ಜಿಲ್ಲೆಯ ತಾಳಿಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿಯಿಂದ ಸಿಬ್ಬಂದಿಗಳನ್ನ  ಅಧಿಕಾರಿಗಳು ಕರೆಯಿಸಿಕೊಂಡಿದ್ದಾರೆ.

click me!