
ಭೂತ, ಪಿಶಾಚಿ, ದೆವ್ವ, ಆತ್ಮ ಇದೆಯೋ ಇಲ್ಲವೋ ಬಲ್ಲವರು ಯಾರೂ ಇಲ್ಲ. ಕೆಲವರು ತಾವು ಇದನ್ನು ನೋಡಿರುವುದಾಗಿ ಹೇಳಿದರೆ, ಮತ್ತೆ ಕೆಲವರು ಇವೆಲ್ಲಾ ಮನಸ್ಸಿನ ಭ್ರಮೆ, ಯಾವುದೂ ಇಲ್ಲ. ಎಲ್ಲವೂ ಸುಳ್ಳು ಎನ್ನುತ್ತಾರೆ. ಮತ್ತೆ ಕೆಲವರು ತಮಗೆ ಆಗಿರುವ ಭಯಾನಕ ಘಟನೆಗಳ ಬಗ್ಗೆ ವಿವರಿಸುತ್ತಾರೆ. ತಮ್ಮ ಪರಿಚಯದವರು ಸತ್ತಿರುವ ವಿಷಯ ಗೊತ್ತೇ ಇಲ್ಲದಿದ್ದರೂ, ಅಚಾನಕ್ ಆಗಿ ಅವರ ಜೊತೆ ಮಾತನಾಡಿದ ಬಳಿಕ ಆತ ಸತ್ತಿರುವ ವಿಷಯ ತಿಳಿದು ಶಾಕ್ ಆದವರೂ ತಮ್ಮ ಅನುಭವ ಹಂಚಿಕೊಂಡಿದ್ದು ಉಂಟು. ಒಟ್ಟಿನಲ್ಲಿ ಇದೊಂದು ಸದಾ ವಿವಾದಾತ್ಮಕ ವಿಷಯವೇ ಆಗಿದೆ.
ಆದರೆ ಇದೀಗ, ನಿಗೂಢ ಆಕೃತಿಯೊಂದು ಮಂಗಳೂರಿನ ಮಂಜಲ್ಪಾದೆಯ ಸಮೀಪ ಕಂಡಿದ್ದು ವಾಹನ ಸವಾರರನ್ನು ಬೆಚ್ಚಿ ಬೀಳಿಸಿತ್ತು. ಈ ದೆವ್ವ ಕಾಣಿಸಿಕೊಂಡಿದ್ದು ಯುವಕನೊಬ್ಬನಿಗೆ. ಮಧ್ಯರಾತ್ರಿ ಪಾಂಡೇಶ್ವರದ ಫಾರಂಮಾಲ್ನಿಂದ ಆ ಯುವಕ ಬರುತ್ತಿದ್ದ ಸಂದರ್ಭದಲ್ಲಿ ಮಂಜಲ್ಪಾದೆ ರಸ್ತೆಯ ಬದಿಯಲ್ಲಿ ಬಿಳಿ ಬಟ್ಟೆ ಧರಿಸಿದ, ಉದ್ದನೆಯ ಬೆರಳುಗಳ ವಿಚಿತ್ರ ಆಕೃತಿ ಕಾಣಿಸಿಕೊಂಡಿದೆ. ಇದನ್ನು ನೋಡಿ ಆತ ಥರ ಥರ ನಡುಗಿ ಹೋಗಿದ್ದಾನೆ. ಭಯದಿಂದ ಆತ ಸ್ಕೂಟರ್ನಿಂದ ಬಿದ್ದೇ ಬಿಟ್ಟಿದ್ದಾನೆ. ಈ ವಿಷಯ ಶರವೇಗದಲ್ಲಿ ಸುತ್ತಲಿನ ಜನರಿಗೆ ಪ್ರಸಾರ ಆಯಿತು. ಈ ಸ್ಟೋರಿ ಜೊತೆಗೆ, ಅಂತೆ, ಕಂತೆಗಳೆಲ್ಲಾ ಸೇರಿ ಆತನ ಮೈಮೇಲೆ ದೆವ್ವಗಳ ಬೆರಳುಗಳು ಮೂಡಿವೆ ಎಂದೆಲ್ಲಾ ಸುದ್ದಿಯಾಯಿತು.
ಈ ಹಿನ್ನೆಲೆಯಲ್ಲಿ ಸ್ಥಳೀಯರು ಬೆಚ್ಚಿಬಿದ್ದರು. ಆ ಯುವಕ ಬೇರೆ ಆ ಆಕೃತಿ ನೋಡಿ ಭಯಭೀತನಾಗಿ ಹೋಗಿದ್ದ. ಆ ರಸ್ತೆಯಲ್ಲಿ ಪ್ರಯಾಣ ಮಾಡಲು ಎಲ್ಲರೂ ಹೆದರುವ ಸ್ಥಿತಿ ಉಂಟಾಯಿತು. ಸಾಲದು ಎನ್ನುವುದಕ್ಕೆ ಆ ಘಟನೆ ಸಂಭವಿಸಿದ ಸಂದರ್ಭದಲ್ಲಿ ಯುವಕನ ಫೋನ್ಗೆ ಒಂದು ಭಯಾನಕ ದನಿಯ ಆಡಿಯೋ ರೆಕಾರ್ಡ್ ಕೂಡ ಬಂದಿತ್ತು. ಅದರಲ್ಲಿ, ತುಳುವಿನಲ್ಲಿ, ಲೇಯ್, ಆ ಕಡೆ ಬರಬೇಡ, ಬಿಳಿ ಆಕೃತಿ ಓಡಾಡ್ತಿದೆ, ಯಾರಿಗೋ ಹೊಡೆತ ಬಿದ್ದಿದೆ ಎಂದು ಹೇಳಲಾಗಿತ್ತು. ಈ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಇನ್ನೂ ಹೆಚ್ಚಿನ ಆತಂಕ ಸೃಷ್ಟಿಸಿತ್ತು.
ಕೊನೆಗೆ ನಿಜಕ್ಕೂ ಏನಿದು, ದೆವ್ವ ಇರುವುದು ನಿಜನಾ ಎಂದೆಲ್ಲಾ ಪರಿಶೀಲಿಸಿದಾಗ ಅಲ್ಲಿ ಆಗಿದ್ದೇ ಬೇರೆ. ಆ ಆಡಿಯೋ ಕಳಿಸಿರುವವರ ಬೆನ್ನತ್ತಿದಾಗ ವಿಷಯ ತಿಳಿದಿದೆ. ಅದೇನೆಂದರೆ, ಅಸಲಿಗೆ ಆ ಆಡಿಯೋ ಕಳಿಸಿದ್ದು, ಅದೇ ಯುವಕನ ಸ್ನೇಹಿತ. ಆತ ಪದೇ ಪದೇ ಮಧ್ಯರಾತ್ರಿ ಮನೆಗೆ ಬರುತ್ತಿದ್ದ. ಆತನ ಮನೆಯವರು ಎಷ್ಟೇ ಹೇಳಿದರೂ ಆತ ಮಾತು ಕೇಳುತ್ತಿರಲಿಲ್ಲ. ಆದ್ದರಿಂದ ಈ ಸ್ನೇಹಿತ ದೆವ್ವದ ಪ್ಲ್ಯಾನ್ ಮಾಡಿ, ದನಿಯನ್ನು ಆ್ಯಪ್ ಮೂಲಕ ಬದಲಿಸಿ ಭಯಾನಕ ದನಿ ಮಾಡಿ ಅದನ್ನು ಸ್ನೇಹಿತನಿಗೆ ಕಳುಹಿಸಿದ್ದ, ಅಲ್ಲಿ ಬಿಳಿ ಬಣ್ಣದ ಡ್ರೆಸ್ ಹಾಕಿಕೊಂಡು ಒಬ್ಬರನ್ನು ನಿಲ್ಲಿಸುವ ವ್ಯವಸ್ಥೆಯನ್ನೂ ಮಾಡಿದ್ದ. ಆದರೆ ಅದು ಸ್ನೇಹಿತನೊಬ್ಬನನ್ನೇ ಹೆದರಿಸದೇ ಸ್ಥಳೀಯರನ್ನು ಬೆಚ್ಚಿಬೀಳಿಸಿ ಆವಾಂತರ ಸೃಷ್ಟಿಸಿತ್ತು!