
ಮೊನ್ನೆ ಶನಿವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಸುಮಾರು ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನಿಂದ ಹಲವು ಬಾರಿ ಡ್ರಿಫ್ಟಿಂಗ್ ನಡೆಸಿರುವ ವಿಡಿಯೋಗಳು ವೈರಲ್ ಆಗಿದ್ದವು. ಸ್ಥಳೀಯರೊಬ್ಬರು ಈ ಪುಂಡಾಟದ ದೃಶ್ಯವನ್ನು ಸೆರೆ ಹಿಡಿದಿದ್ದರು. ಅದು ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರಾಯ್ ಚಲಾಯಿಸುತ್ತಿರುವ ಕಾರು ಎಂದು ತಿಳಿದು ಬಂದಿತ್ತು. ಅಲ್ಲಿಗೆ ಬರುವ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವುದಾಗಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಅಪಾಯಕಾರಿ ಸ್ಟಂಟ್ ವಿರುದ್ಧ ಆಕ್ರೋಶದ ಬಳಿಕ ಪೊಲೀಸರು ರಿಕ್ಕಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದರು.
ಈ ಘಟನೆಯ ಬಳಿಕ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ಕಾರು ಡ್ರಿಫ್ಟಿಂಗ್ ಮಾಡಿರುವುದು ರಿಕ್ಕಿ ರೈ ಎನ್ನುವುದು ಪತ್ತೆಯಾಗಿತ್ತು. ಹೀಗಾಗಿ ರಿಕ್ಕಿ ರೈ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಸಹ ಜಾರಿ ಮಾಡಿದ್ದರು. ಆದರೆ ಇವರ ಪರ ವಕೀಲರು ಇದೀಗ ರಸ್ತೆ ಸರಿಯಿಲ್ಲದ ಹಿನ್ನೆಲೆಯಲ್ಲಿ ಕಾರು ಸ್ಕಿಡ್ ಆಗಿತ್ತಷ್ಟೇ. ಆದರೂ ಅವರ ಡ್ರೈವರ್ಗೆ ಶಹಬಾಸ್ ಹೇಳಲೇಬೇಕು. ಹೇಗೋ ಸಾವರಿಸಿಕೊಂಡು ಮುಂದೆ ಚಲಿಸಿದ್ದಾನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ಇಲ್ಲಿ ಎರಡು ಅಂಶಗಳನ್ನು ಲಾಯರ್ ಹೇಳಿದ್ದಾರೆ. ಒಂದು ರೋಡೇ ಸರಿ ಇಲ್ಲ ಎಂದು. ಇನ್ನೊಂದು ಕಾರನ್ನು ಬೇರೆ ಯಾರೋ ಅರ್ಥಾತ್ ರಿಕ್ಕಿ ಅವರ ಚಾಲಕ ಚಲಾಯಿಸುತ್ತಿದ್ದರು ಎನ್ನುವುದು. ಇವೆರಡನ್ನೂ ಈಗ ಎಲ್ಲರೂ ನಂಬಲೇಬೇಕು, ಏಕೆಂದರೆ ಲಾಯರ್ ಈ ವಿಷಯವನ್ನು ಹೇಳಿದ್ದಾರೆ. ಪದೇ ಪದೇ ನೀವು ರಿಕ್ಕಿ ಚಲಾಯಿಸುತ್ತಿದ್ದುದು ಎಂದು ಹೇಳುವುದು ಏಕೆ, ರೋಡ್ ಮೊದಲು ಸರಿ ಮಾಡಿಸಲು ಹೇಳಿ, ಪಾಪ ಡ್ರೈವರ್ ಹೇಗೋ ಟ್ಯಾಲೆಂಟ್ನಿಂದ ಗಾಡಿಯನ್ನು ಸರಿಯಾಗಿ ಓಡಿಸುವಲ್ಲಿ ಸಫಲ ಆಗಿದ್ದಾನೆ ಎಂದಿದ್ದಾರೆ ಲಾಯರ್. ಇವರ ತಲೆಗೆ, ಮಾತಿನ ಕಲೆಗೆ ಜನರು ಭೇಷ್ ಭೇಷ್ ಎನ್ನುತ್ತಿದ್ದಾರೆ. ಜಾಮೀನು ಪಡೆದು ವಿಚಾರಣೆಗೆ ಹಾಜರಾದ ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ, ಈ ಮಾತನ್ನು ಹೇಳಿದ್ದಾರೆ.
ಇದರ ಮಧ್ಯೆಯೇ, ಬೆಂಗಳೂರು ನಗರ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದು, ಬಂದರೋ ಬಂದರೋ ಭಾವ ಬಂದರೋ ಹಾಡಿನ ಹಿನ್ನೆಲೆಯಲ್ಲಿ, ಈ ಘಟನೆ ಬಗ್ಗೆ ಬರೆದಿದ್ದಾರೆ. ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ. ಸಿಗ್ನಲ್ಗಳನ್ನು ಸಂಚಾರವನ್ನು ನಿಯಂತ್ರಿಸಲು ನಿರ್ಮಿಸಲಾಗಿದೆಯೇ ಹೊರತು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುವುದಕ್ಕಲ್ಲ. ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿರಿ ಎಂದು ಬರೆದಿದ್ದಾರೆ.