
ಗಂಗಾವತಿ (ಜು.14): ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗಂಗಾವತಿ ನಗರದಲ್ಲಿ ಸುಮಾರು 3 ಕೀಮಿ ದೂರದ ಆನೆಗೊಂದಿ ರಸ್ತೆ ಮಾರ್ಗದಲ್ಲಿ ಮಿನಿ ವಿಧಾನ ಸೌಧ ಇದೆ. ಗ್ರಾಮೀಣ ಪ್ರದೇಶದಿಂದ ಮತ್ತು ನಗರದಲ್ಲಿ ಸಾರ್ವಜನಿಕರು ಸೌಧಕ್ಕೆ ತೆರಳಬೇಕಾದರೆ ಕನಿಷ್ಟ 100 ರುಗಳಿಂದ 150 ರು ಅಟೋಗಳಿಗೆ ನೀಡಬೇಕಾಗುತ್ತದೆ. ಇದರಿಂದ ಬಡ ಜನರಿಗೆ ಹೊರೆಯಾಗಿದೆ ಎಂದು ತಿಳಿಸಿದರು.
ಹಳೆ ಐಬಿ ತೆರುವುಗೊಳಿಸಿ ಕಟ್ಟಡ ನಿರ್ಮಿಸಿ
ನಗರದ ಬಸ್ ನಿಲ್ದಾಣ ಹತ್ತಿರವಿರುವ ಹಳೆ ಪ್ರವಾಸಿ ಮಂದಿರ ಮತ್ತು ಹಳೇ ತಹಸೀಲ್ದಾರ್ ಕಚೇರಿಯ ಕಟ್ಟಡಗಳನ್ನು ತೆರವುಗೊಳಿಸಿ ಇದೇ ಸ್ಥಳದಲ್ಲಿ ವಿಧಾನ ಸೌಧ ನಿರ್ಮಿಸಬೇಕೆಂದು ಸಲಹೆ ನೀಡಿದರು. ವಿವಿಧ ಇಲಾಖೆಗಳು ಒಂದೇ ಸ್ಥಳದಲ್ಲಿದ್ದರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ ಅವರು ಸರಕಾರ ಇದಕ್ಕಾಗಿ ವಿಶೇಷ ಅನುದಾನ ನೀಡಿ ಸುಂದರ ಮಿನಿ ವಿಧಾನಸೌದ ನಿರ್ಮಿಸಬೇಕೆಂದು ತಿಳಿಸಿದರು.
ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭವ್ಯವಾದ ರಂಗ ಮಂದಿರ ನಿರ್ಮಿಸ ಬೇಕೆಂದು ಎಚ್.ಆರ್.ಶ್ರೀನಾಥ ಒತ್ತಾಯಿಸಿದರು. ಕಳೆದ 30 ವರ್ಷಗಳ ಹಿಂದೆ ಇದ್ದ ಹಳೆ ಕಟ್ಟಡವನ್ನು ನಗರಸಭೆಯವರು ತೆರವುಗೊಳಿಸಿದ್ದಾರೆ. ಈ ಸ್ಥಳದಲ್ಲಿ ಫುಡ್ ಕೋರ್ಟ್ ಮಾಡಲು ನಗರಸಭೆಯವರು ಸೂಚಿಸಿರುವುದು ಸರಿಯಲ್ಲ ಎಂದರು.
ಕಾಲೇಜು ಮೈದಾನದಲ್ಲಿ ವೃದ್ದರು, ಮಹಿಳೆಯರು ವಾಕಿಂಗ್ ಬರುವುದಲ್ಲದೆ ವಿದ್ಯಾರ್ಥಿನಿಯರು ಕಾಲೇಜಿನಿಂದ ಸಂಚಾರ ಮಾಡುತ್ತಾರೆ. ಇದರಿಂದ ಫುಡ್ ಕೋರ್ಟ್ ಮಾಡಿದರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಸಲು ಆಸ್ಪದ ನೀಡಿದಂತಾಗುತ್ತದೆ. ಕಾರಣ ನಗರಸಭೆಯವರು ಈ ಸ್ಥಳವನ್ನು ಭವ್ಯವಾದ ರಂಗಮಂದಿರಕ್ಕೆ ಮೀಸಲಿರಿಸಬೇಕೆಂದು ಒತ್ತಾಯಿಸಿದರು.