ಲಕ್ಕುಂಡಿ ಉತ್ಖನನ: ಚೌಕಿ ಮಠದ ಬಳಿ ಬೃಹತ್ ಹಾವು ಪ್ರತ್ಯಕ್ಷ: ಇದು ನಿಧಿ ಕಾಯುವ ದೇವರ ಸರ್ಪವೆಂದ ಗ್ರಾಮಸ್ಥರು!

Published : Feb 11, 2026, 05:19 PM IST
Lakkundi Snake found

ಸಾರಾಂಶ

ಐತಿಹಾಸಿಕ ಲಕ್ಕುಂಡಿ ಗ್ರಾಮದ ದೇವಾಲಯ ಸ್ವಚ್ಛತಾ ಕಾರ್ಯದ ವೇಳೆ ಬೃಹತ್ ಹಾವು ಪ್ರತ್ಯಕ್ಷವಾಗಿದ್ದು, ಇದು ನಿಧಿ ಕಾಯುತ್ತಿದೆ ಎಂಬ ನಂಬಿಕೆಯನ್ನು ಬಲಪಡಿಸಿದೆ. ಉತ್ಖನನದಲ್ಲಿ 45ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರು 'ನವ ಲಕ್ಕುಂಡಿ' ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.

ಗದಗ (ಫೆ.11): ಬಂಗಾರದ ನಿಧಿ ಸಿಕ್ಕಿದ ಹಾಗೂ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಲಕ್ಕುಂಡಿ ಗ್ರಾಮದಲ್ಲಿ ಹಾವುಗಳು ನಿಧಿ ಕಾಯುತ್ತವೆ ಎಂಬ ಮಾತು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತಿದೆ. ಹಲವು ರಾಜ ಮನೆತನಗಳ ರಾಜಧಾನಿಯಾಗಿದ್ದ ಲಕ್ಕುಂಡಿಯಲ್ಲಿ 101 ದೇವಸ್ಥಾನ ಹಾಗೂ 101 ಬಾವಿಗಳಿದ್ದು, ಅವುಗಳನ್ನು ಹುಡುಕಲು ಉತ್ಖನನ ಕಾರ್ಯ ನಡೆಯುತ್ತಿದೆ. ಇದೀಗ ಲಭ್ಯವಿರುವ ಪಂಚ ಬಾವಿ ಹಾಗೂ ಪಂಚ ದೇವಾಲಯಗಳ ಸ್ವಚ್ಛತಾ ಕಾರ್ಯದ ವೇಳೆ ಜೀವಂತ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ಇಂದು ಬೆಳಗ್ಗೆ ಬೃಹತ್ ಗಾತ್ರದ ಹಾವು ಪ್ರತ್ಯಕ್ಷವಾಗಿದ್ದು, ಈ ದೇವಾಲಯಗಳಲ್ಲಿ ನಿಧಿ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕೋಟೆ ಲಕ್ಷ್ಮೀ ದೇವಸ್ಥಾನದಲ್ಲಿ ಬೃಹತ್ ಹಾವು ಪ್ರತ್ಯಕ್ಷ!

ಲಕ್ಕುಂಡಿಯ ಚೌಕಿಮಠದ ಆವರಣದಲ್ಲಿರುವ ಕೋಟೆ ಲಕ್ಷ್ಮೀ ದೇವಿ ಮೂರ್ತಿಯ ಬಳಿ ಬರೋಬ್ಬರಿ 5 ಮೀಟರ್ ಉದ್ದದ ಬೃಹತ್ ಕೇರೆ ಹಾವು ಕಂಡುಬಂದಿದ್ದು, ಸ್ಥಳೀಯರಲ್ಲಿ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಪಂಚ ಬಾವಿ ಹಾಗೂ ದೇವಸ್ಥಾನಗಳ ಅನಾವರಣದ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದಾಗ ಈ ಹಾವು ಕಾಣಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ದೇವಸ್ಥಾನದ ಆವರಣದಲ್ಲೇ ಇದ್ದ ಈ ಹಾವು, ಸ್ವಚ್ಛತೆ ಮಾಡುವಾಗ ಮೂರ್ತಿಯ ಹಿಂದಿನ ಭಾಗದಲ್ಲಿ ನಾಪತ್ತೆಯಾಗಿದೆ. 'ಇಷ್ಟು ದೊಡ್ಡ ಹಾವನ್ನು ನಾವು ಹಿಂದೆಂದೂ ನೋಡಿಲ್ಲ, ಇದು ದೈವಿಕ ಶಕ್ತಿಯುಳ್ಳ ದೇವರ ಹಾವೇ ಇರಬಹುದು' ಎಂದು ಚೌಕಿಮಠದ ಕುಟುಂಬಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಚೌಕಿಮಠಕ್ಕೆ ಸಚಿವ ಎಚ್.ಕೆ. ಪಾಟೀಲ ಭೇಟಿ:

ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನವನ್ನೇ ಕಳೆದ ನಾಲ್ಕೈದು ತಲೆಮಾರುಗಳಿಂದ ವಾಸದ ಮನೆಯನ್ನಾಗಿ ಮಾಡಿಕೊಂಡಿದ್ದ ಚೌಕಿಮಠ ಕುಟುಂಬದ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೌಕಿಮಠದ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸಿದ ಸಚಿವರು, ಮಠದ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು. ಪಂಚ ದೇವಸ್ಥಾನ ಹಾಗೂ ಪಂಚ ಬಾವಿಗಳ ಪುನರುಜ್ಜೀವನ ಕಾರ್ಯದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು.

ಉತ್ಖನನದಲ್ಲಿ ಸಿಕ್ಕವು 45 ಅಪರೂಪದ ಪ್ರಾಚ್ಯಾವಶೇಷಗಳು:

ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಗತಕಾಲದ ವೈಭವವನ್ನು ಸಾರುವ ಸುಮಾರು 45ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಮಣ್ಣಿನ ಬಿಲ್ಲೆಗಳು, ಪ್ರಾಣಿಗಳ ಮೂಳೆ, ಕವಡೆಗಳು, ಮಡಿಕೆ ಚೂರುಗಳು, ಗಂಟೆ, ಪುರಾತನ ಲಿಂಗ, ಮುಕುಟ ಮಣಿ ಹಾಗೂ ಧೂಪದ ಆಕೃತಿಯ ಲೋಹದ ವಸ್ತುಗಳು ಸಿಕ್ಕಿವೆ. ಈ ಎಲ್ಲಾ ವಸ್ತುಗಳನ್ನು ಸಚಿವರು ವೀಕ್ಷಿಸಿದ್ದು, ಇವುಗಳನ್ನು ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

'ನವ ಲಕ್ಕುಂಡಿ' ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ:

ಲಕ್ಕುಂಡಿಯ ಗತವೈಭವ ಸಂಪೂರ್ಣವಾಗಿ ಮರುಕಳಿಸಬೇಕಾದರೆ ಈಗಿರುವ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸುವುದು ಅನಿವಾರ್ಯ ಎಂಬುದು ಸ್ಥಳೀಯರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದು, ಹಳೆಯ ಲಕ್ಕುಂಡಿಯ ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ 'ನವ ಲಕ್ಕುಂಡಿ' ಗ್ರಾಮವನ್ನು ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ. 101 ದೇವಸ್ಥಾನಗಳ ಅಭಿವೃದ್ಧಿಯಿಂದ ಲಕ್ಕುಂಡಿ ಪ್ರವಾಸಿ ತಾಣವಾಗಿ ಮಾರ್ಪಡಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಬೃಹತ್ ಹಾವಿನ ದರ್ಶನ ಹಾಗೂ ಪುರಾತನ ಅವಶೇಷಗಳ ಪತ್ತೆಯಾಗಿರುವುದು ಲಕ್ಕುಂಡಿಯ ಅಧ್ಯಾತ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.

PREV
Read more Articles on
click me!

Recommended Stories

ಸಾರಿ ಮಮ್ಮಿ, ಪಾಪ…ಐ ಲವ್ ಯು, ನವೋದಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವಿಗೆ ಶರಣು, ಹೆತ್ತವರ ಕಣ್ಣೀರಲ್ಲಿ ಮುಳುಗಿಸಿದ!
ದೊಡ್ಡದಾಗಿ ಮದ್ವೆ ಮಾಡ್ಕೋತೀರಿ ₹10 ಸಾವಿರ ಕೊಡೋ ಯೋಗ್ಯತೆ ಇಲ್ವಾ? ಮದುವೆ ಮಂಟಪದಲ್ಲಿ ಮಂಗಳಮುಖಿಯರ ರಂಪಾಟ!