
ಮಂಗಳೂರು: ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯಕೋಮಿನ ಯುವಕನೊಂದಿಗೆ ಯುವತಿ ಪರಾರಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈ ವಿಚಾರ ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸುರತ್ಕಲ್ನ ಮುಕ್ಕದಲ್ಲಿರುವ ಕಾಲೇಜೊಂದರಲ್ಲಿ ಕ್ರಿಮಿನಾಲಜಿ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡು ಆರ್.ಡಿ. ನಗರದ ಮೀಪುಗುರಿ ನಿವಾಸಿ ವೈಶಾಲಿ (23) ಎಂಬ ವಿದ್ಯಾರ್ಥಿನಿ, ಮೊಹಮ್ಮದ್ ಮಿದ್ಲಾಜ್ ಪಿ.ಹೆಚ್. ಎಂಬ ಯುವಕನೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಈ ಇಬ್ಬರೂ ಕೇರಳದ ವಯನಾಡ್ನ ರಿಜಿಸ್ಟರ್ ಕಚೇರಿಯಲ್ಲಿ ಜನವರಿ 31ರಂದು ನೋಂದಣಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೋಷಕರಿಗೆ ಲಭ್ಯವಾಗಿದೆ. ಈ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರೂ ರಿಜಿಸ್ಟರ್ ಮದುವೆಯ ಆಗಿದ್ದಾರೆ ಎಂದು ತಿಳಿದ ಬಳಿಕ, ವೈಶಾಲಿ ವಾಸವಾಗಿದ್ದ ಪಿಜಿಗೆ ಪೋಷಕರು ತೆರಳಿ ವಿಚಾರಣೆ ನಡೆಸಿದ್ದಾರೆ. ಪಿಜಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಫೆಬ್ರವರಿ 9ರಂದು ವೈಶಾಲಿ ಪಿಜಿಯಿಂದ ಹೊರಟಿರುವುದು ದೃಢಪಟ್ಟಿದೆ. ಆ ಬಳಿಕ ಮಗಳು ಯಾವುದೇ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ, ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಗಳು ಮುಸ್ಲಿಂ ಯುವಕನ ಜೊತೆಗೆ ಓಡಿಹೋದ ವಿಚಾರ ತಿಳಿದ ತಂದೆ ವಿದೇಶದಿಂದ ತಕ್ಷಣ ಭಾರತಕ್ಕೆ ಮರಳಿದ್ದಾರೆ. ನಂತರ ಕೇರಳದ ವಯನಾಡ್ ಪೊಲೀಸ್ ಠಾಣೆಗೆ ತೆರಳಿ ಮಗಳನ್ನು ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಆದರೆ ಮಗಳೊಂದಿಗೆ ಐದು ನಿಮಿಷವೂ ಮಾತನಾಡಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರಾದ ವಿಶ್ವನಾಥ್ ಮತ್ತು ಲತಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಪೊಲೀಸರ ಎದುರಲ್ಲೇ ಮಗಳು ನಮ್ಮ ಜೊತೆ ಬರಲು ಸಿದ್ಧಳಿದ್ದಳು. ಆದರೆ ಪೊಲೀಸರೇ ಅವಕಾಶ ನೀಡಲಿಲ್ಲ” ಎಂದು ದೂರಿದ್ದಾರೆ. ತಮ್ಮ ಮಗಳಿಗೆ ಬ್ರೈನ್ವಾಶ್ ಮಾಡಿ, ಬೆದರಿಕೆ ಹಾಗೂ ಬ್ಲ್ಯಾಕ್ಮೇಲ್ ಮೂಲಕ ಕರೆದುಕೊಂಡು ಹೋಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಘಟನೆಯ ಹಿಂದೆ ಸಂಚು ಇರುವ ಅನುಮಾನವನ್ನೂ ಪೋಷಕರು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಅಂಶಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ನೋಂದಣಿ ಮದುವೆ, ಯುವತಿಯ ಸ್ವಯಂ ಇಚ್ಛೆ, ಹಾಗೂ ಪೋಷಕರು ಮಾಡಿದ ಆರೋಪಗಳ ಸತ್ಯಾಸತ್ಯತೆಯನ್ನು ಕಾನೂನು ಪ್ರಕಾರ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಯುವತಿ ಹಾಗೂ ಯುವಕನ ಹೇಳಿಕೆಗಳು, ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.