1 ರು.ಗೆ ಕೊರೋನಾಗೆ ಸಂಪೂರ್ಣ ಚಿಕಿತ್ಸೆ : ನಾಗಮಾರಪಳ್ಳಿ ಮಾದರಿ ಸೇವೆ

By Kannadaprabha NewsFirst Published May 9, 2021, 8:15 AM IST
Highlights
  • ಒಂದೇ ರುಪಾಯಿಗೆ ಕೊರೋನಾ ಸೋಂಕಿತರಿಗೆ ಸಂಪೂರ್ಣ ಚಿಕಿತ್ಸೆ  
  • ಸೋಂಕಿತರಿಗೆ ರಕ್ತ ಮಾದರಿ ತಪಾಸಣೆ, ಎಕ್ಸ್‌ರೇ, ಸಿಟಿ ಸ್ಕ್ಯಾನ್‌, ರೆಮ್‌ಡೆಸಿವಿರ್‌ ಇಂಜೆಕ್ಷನ್‌, ಅಗತ್ಯ ಮಾತ್ರೆಗಳು, ಊಟ, ಉಪಾಹಾರ ಎಲ್ಲವೂ ಉಚಿತ
  • 24 ಗಂಟೆ ಚಿಕಿತ್ಸೆ, 4 ಮಂದಿ ತಜ್ಞ ವೈದ್ಯರು, ಕೋವಿಡ್‌ ಸೋಂಕಿನ ವಿಶೇಷ ತಜ್ಞರು, 12 ನರ್ಸ್‌ಗಳ ಸೇವೆ

ವರದಿ : ಅಪ್ಪಾರಾವ್‌ ಸೌದಿ

 ಬೀದರ್‌ (ಮೇ.09):  ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ ಇಲ್ಲ, ಖಾಸಗಿ ಆಸ್ಪತ್ರೆ ಮೆಟ್ಟಿಲು ತುಳಿಯುವಷ್ಟುಆರ್ಥಿಕ ಶಕ್ತಿ ಬಡವರಿಗೆ ಇಲ್ಲ. ಅಂಥದ್ದರಲ್ಲಿ ಇಲ್ಲೊಂದು ಕಡೆ ಒಂದೇ ರುಪಾಯಿಗೆ ಚಿಕಿತ್ಸೆ ಲಭ್ಯವಿದೆ. ಸೋಂಕಿತರಿಗೆ ರಕ್ತ ಮಾದರಿ ತಪಾಸಣೆ, ಎಕ್ಸ್‌ರೇ, ಸಿಟಿ ಸ್ಕ್ಯಾನ್‌, ರೆಮ್‌ಡೆಸಿವಿರ್‌ ಇಂಜೆಕ್ಷನ್‌, ಅಗತ್ಯ ಮಾತ್ರೆಗಳು, ಊಟ, ಉಪಾಹಾರ ಎಲ್ಲವೂ ಉಚಿತವಾಗಿಯೇ ನೀಡಲಾಗುತ್ತದೆ.

ಬೀದರ್‌ನ ಮಾಜಿ ಸಚಿವ ದಿ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‌, ಗುರುಪಾದಪ್ಪ ನಾಗಮಾರಪಳ್ಳಿ ಸೂಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ, ವಂದೇ ಮಾತರಂ ಶಿಕ್ಷಣ ಸಂಸ್ಥೆ, ವಾಲಿ ಶ್ರೀ ಆಸ್ಪತ್ರೆ ಅಲ್ಲದೆ ಆರ್‌ಎಸ್‌ಎಸ್‌ ಸಂಚಾಲಿತ ಕೇಶವ ಕಾರ್ಯ ಸಂವರ್ಧನಾ ಸಮಿತಿ ಒಟ್ಟಿಗೆ ಸೇರಿ ವಂದೇ ಮಾತರಂ ಶಾಲೆಯ ಕೊಠಡಿಗಳಲ್ಲಿ ಆರೈಕೆ ಕೇಂದ್ರ ತೆರೆಯಲಾಗಿದೆ. ಕೋವಿಡ್‌ ಲಕ್ಷಣವುಳ್ಳವರಿಗೆ ಗುರುಪಾದಪ್ಪ ನಾಗಮಾರಪಳ್ಳಿ ಸೂಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ, ಎಕ್ಸ್‌ರೇ, ಸಿಟಿ ಸ್ಕ್ಯಾನ್‌ ಮಾಡಿಸಿ ಕೋವಿಡ್‌ ಖಚಿತವಾದರೆ ಆರೈಕೆ ಕೇಂದ್ರಕ್ಕೆ ದಾಖಲಾಗಿಸುತ್ತದೆ. ರೋಗಿ ಆಸ್ಪತ್ರೆಯ ಹುಂಡಿಯಲ್ಲಿ ಒಂದು ರುಪಾಯಿ ಹಾಕಿದರೂ, ಹಾಕದಿದ್ದರೂ ಚಿಕಿತ್ಸೆ, ಆರೈಕೆ ಎಲ್ಲವೂ ಉಚಿತ.

ಕೊರೋನಾ ಕಾಟ: ಬೆಡ್‌ಗಳ ಕೊರತೆಯಾಗುತ್ತಿದೆ, ಹುಷಾರಾಗಿ ಮನೆಯಲ್ಲೇ ಇರಿ! .

24 ಗಂಟೆ ಚಿಕಿತ್ಸೆ, 4 ಮಂದಿ ತಜ್ಞ ವೈದ್ಯರು, ಕೋವಿಡ್‌ ಸೋಂಕಿನ ವಿಶೇಷ ತಜ್ಞರು, 12 ನರ್ಸ್‌ಗಳು ಇಲ್ಲಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ‘ಅಮೃತ್‌ ನೋನಿ’ ಉಚಿತ ಆಂಬ್ಯುಲೆನ್ಸ್‌ : ಇಲ್ಲಿ ಸಂಪರ್ಕಿಸಿ

ಖಾಸಗಿ ಆಸ್ಪತ್ರೆಗೆ ರವಾನೆ, ಅಲ್ಲೂ ಉಚಿತ ಚಿಕಿತ್ಸೆ: ರೋಗ ತೀವ್ರವಾಗಿ ವೆಂಟಿಲೇಟರ್‌ ಅಗತ್ಯಬಿದ್ದಲ್ಲಿ ಇಲ್ಲಿನ ವಾಲಿಶ್ರೀ ಆಸ್ಪತ್ರೆಯಲ್ಲಿ ಗರಿಷ್ಠ 5 ಬೆಡ್‌ಗಳನ್ನು ನೀಡಲು ಆಸ್ಪತ್ರೆ ಮಾಲಿಕರಾದ ಡಾ.ರಜನೀಶ ವಾಲಿ ಒಪ್ಪಿದ್ದು, ನಾಗಮಾರಪಳ್ಳಿ ಆರೈಕೆ ಕೇಂದ್ರದಿಂದ ಬರುವ ರೋಗಿ ಇಲ್ಲಿ ಕೂಡ ಯಾವುದೇ ವೆಚ್ಚ ಭರಿಸಬೇಕಿಲ್ಲ.

ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತಿರುವ ಬೀದರ್‌ ಜಿಲ್ಲೆಯ ಮೊದಲ ಕೋವಿಡ್‌ ಕೇರ್‌ ಸೆಂಟರ್‌ ಇದು. ಕಳೆದ ವರ್ಷ ಲಾಕ್‌ಡೌನ್‌ ವೇಳೆ ನಾಗಮಾರಪಳ್ಳಿ ಫೌಂಡೇಶನ್‌ನಿಂದ 40 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ ನೀಡಲಾಗಿತ್ತು. ಇದೀಗ ಈ ಬಾರಿ ರೋಗಿಗಳಿಗೆ ಬೆಡ್‌, ಆಕ್ಸಿಜನ್‌, ಲಸಿಕೆ ಸಿಗುತ್ತಿಲ್ಲ. ಇದನ್ನು ಮನಗಂಡು ಉಚಿತ ಕೋವಿಡ್‌ ಕೇಂದ್ರ ಆರಂಭಿಸಿದ್ದೇವೆ.

- ಸೂರ್ಯಕಾಂತ ನಾಗಮಾರಪಳ್ಳಿ, ಫೌಂಡೇಶನ್‌ ಅಧ್ಯಕ್ಷ

click me!