ಶಿವಮೊಗ್ಗದಲ್ಲಿ 4 ಲಕ್ಷ ಜನರಿಗೆ ಉಚಿತ ಆಯುರ್ವೇದ ಕಿಟ್‌

By Kannadaprabha NewsFirst Published Jul 19, 2020, 10:37 AM IST
Highlights

ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಶಿವಮೊಗ್ಗ ನಗರದ ನಾಲ್ಕು ಲಕ್ಷ ಜನರಿಗೆ ರೋಗ ನಿರೋಧಕ ಮತ್ತು ಶಕ್ತಿವರ್ಧಕ ಔಷಧಿ ಕಿಟ್‌ ಕೋವಿಡ್‌ ಸುರಕ್ಷಾ ಪಡೆ ನೇತೃತ್ವದಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

 ಶಿವಮೊಗ್ಗ (ಜು. 19):  ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಶಿವಮೊಗ್ಗ ನಗರದ ನಾಲ್ಕು ಲಕ್ಷ ಜನರಿಗೆ ರೋಗ ನಿರೋಧಕ ಮತ್ತು ಶಕ್ತಿವರ್ಧಕ ಔಷಧಿ ಕಿಟ್‌ ಕೋವಿಡ್‌ ಸುರಕ್ಷಾ ಪಡೆ ನೇತೃತ್ವದಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಸುಮಾರು 85 ಸಾವಿರ ಮನೆಗಳಿವೆ. ಪ್ರತಿ ವಾರ್ಡ್‌ ಪಾಲಿಕೆ ಸದಸ್ಯರು, ಸ್ವಯಂ ಸೇವಕರು ಪ್ರತಿ ಮನೆಗೂ ಔಷಧಿ ಕಿಟ್‌ ವಿತರಿಸಲಿದ್ದಾರೆ. ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣ ಆರೋಗ್ಯ ಕಿಟ್‌ ಉಚಿತ ವಿತರಿಸಲಾಗುತ್ತದೆ ಎಂದರು.

ಕೊರೋನಾ ನಿಯಂತ್ರಣಕ್ಕೆ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಆಯುರ್ವೇದ ಔಷಧ ಕಿಟ್‌ ವಿತರಿಸುವ ಉದ್ದೇಶ ಹೊಂದಲಾಗಿದೆ. ಕೋವಿಡ್‌-19ಗೆ ಲಸಿಕೆ ಇಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಳ ಆಗಬೇಕು. ಆಯುರ್ವೇದ ಔಷಧಿ ಪರಿಣಾಮಕಾರಿ ಎಂಬ ಹಿನ್ನೆಲೆಯಲ್ಲಿ ಕಿಟ್‌ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಇತಿಹಾಸ ತಿಳಿದು ಮಾತಾಡ್ಲಿ: ಸಂಸದ ಮುನಿಸ್ವಾಮಿಗೆ ಶಾಸಕ ಟಾಂಗ್

ರಾಜ್ಯದಲ್ಲೇ ಮೊದಲ ಬಾರಿಗೆ ಈ ರೀತಿ ಕಾರ್ಯಕ್ರಮ ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ತಜ್ಞ ಡಾ. ಗಿರಿಧರ್‌ ಕಜೆ ಅವರು ಜು.29 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು. ಆಯುರ್ವೇದ ಕಿಟ್‌ ಪಡೆಯಲು ಆಧಾರ್‌ ಕಾರ್ಡ್‌ ಬೇಕಾಗುತ್ತದೆ. ಒಂದು ಪಕ್ಷ ಆಧಾರ್‌ ಕಾರ್ಡ್‌ ಇಲ್ಲದಿದ್ದರೂ ಸಹ ಕಾರ್ಯಕರ್ತರ ಬಳಿ ಮಾಹಿತಿ ನೀಡಿದಲ್ಲಿ ಆಧಾರ್‌ ಕಾರ್ಡ್‌ ಮಾಡಿಕೊಡಲಾಗುವುದು. ಔಷಧಿ ಲಭ್ಯತೆ ಮೇರೆಗೆ ಹಂತ ಹಂತವಾಗಿ ವಿತರಿಸಲಾಗುವುದು ಎಂದರು.

ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಕೋವಿಡ್‌ ಸುರಕ್ಷಾ ಪಡೆ ರಚಿಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಇದಕ್ಕೆ ಗೌರವಾಧ್ಯಕ್ಷರಾಗಿದ್ದಾರೆ. ತಾವು ಅಧ್ಯಕ್ಷರಾಗಿದ್ದು, ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮತ್ತು ಆರ್‌.ಪ್ರಸನ್ನಕುಮಾರ್‌ ಉಪಾಧ್ಯಕ್ಷರಾಗಿದ್ದಾರೆ. ಇವರ ಜೊತೆಗೆ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್‌. ಅರುಣ್‌ ಮತ್ತು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್‌ ಸಹಕಾರ ನೀಡಲಿದ್ದಾರೆ ಎಂದರು.

ಕಿಟ್‌ನಲ್ಲಿ ಸಂಶಮನಿವಟಿ 60 ಮಾತ್ರೆ, ಆಯುಷ್‌ ಆಯುರ್ವೇದ ಕ್ವಾಥಾಚೂರ್ಣ 100 ಗ್ರಾಂ. ಅಸ್ರೆ್ಯೕನಿಕಂ ಅಲ್ಬಂ-30 ಸತ್ವ ಇದ್ದು, 10 ಮಾತ್ರೆಗಳ ಒಂದು ಸ್ಟ್ರಿಪ್‌ ನೀಡಲಾಗುತ್ತದೆ ಎಂದರು.

ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ಸಚಿವ ಈಶ್ವರಪ್ಪ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಪ್ರಸನ್ನಕುಮಾರ್‌ ಆರೋಪ ಮಾಡಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಅವರ ಮನೆಗೂ ಔಷಧಿ ತಲುಪಿಸೋಣ ಬಿಡಿ ಎಂದು ತಿರುಗೇಟು ನೀಡಿದರು.

 

click me!