
ಹಾಸನ (ಜು.19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D. Deve Gowda) ಅವರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ನಿಧನದ ಹಿನ್ನೆಲೆಯಲ್ಲಿ, ಹಾಸನ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಚೆನ್ನಮ್ಮನವರ ಅಂತ್ಯಕ್ರಿಯೆ ಮತ್ತು ಪಾರ್ಥಿವ ಶರೀರದ ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ (Law and Order) ಕಾಪಾಡುವ ದೃಷ್ಟಿಯಿಂದ ಹಾಸನ ಜಿಲ್ಲಾಧಿಕಾರಿ (DC) ಲತಾಕುಮಾರಿ ಕೆ.ಎಸ್. ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಹೊಳೆನರಸೀಪುರ (Holenarasipura) ತಾಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕರ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಮುನ್ನೆಚ್ಚರಿಕೆ ಕ್ರಮ (Precautionary Measure) ಕೈಗೊಳ್ಳಲಾಗಿದೆ.
ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನವು ಬೆಂಗಳೂರಿನಿಂದ ಹಾಸನ ಜಿಲ್ಲೆಯ ಗಡಿ ಭಾಗವಾದ ಹಿರೀಸಾವೆಗೆ (Hirisave) ಆಗಮಿಸುತ್ತಿದ್ದಂತೆ, ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಸಂಜೆ ವೇಳೆಗೆ ಹಾಸನ ತಲುಪಬೇಕಿದ್ದ ವಾಹನವು, ಅಭಿಮಾನಿಗಳ ಜನಸಾಗರದಿಂದಾಗಿ ತಡವಾಗುತ್ತಿದೆ. ರಾತ್ರಿಯಾದರೂ ಗಡಿ ಭಾಗದ ರಸ್ತೆಗಳಲ್ಲಿ ಜನ ಅಂತಿಮ ದರ್ಶನಕ್ಕಾಗಿ (Final Darshan) ಕಾದು ನಿಂತಿದ್ದಾರೆ.
ಹಿರೀಸಾವೆ ಗಡಿಯಲ್ಲಿ ಪಾರ್ಥಿವ ಶರೀರವನ್ನು ಸಂಸದ ಶ್ರೇಯಸ್ ಪಟೇಲ್ (Shreyas Patel), ಶಾಸಕರಾದ ಸಿ.ಎನ್. ಬಾಲಕೃಷ್ಣ ಮತ್ತು ಕೆ.ಎಂ. ಶಿವಲಿಂಗೇಗೌಡ ಅವರು ಬರಮಾಡಿಕೊಂಡರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಮತ್ತು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಪಾರ್ಥಿವ ಶರೀರದ ಜೊತೆಯಲ್ಲೇ ಆಗಮಿಸಿದ್ದಾರೆ.
ಅತಿಯಾದ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಸ್ತೆಯಲ್ಲಿ ಹಗ್ಗಗಳನ್ನು ಹಿಡಿದುಕೊಳ್ಳುವ ಮೂಲಕ ಅಭಿಮಾನಿಗಳು ವಾಹನದ ಹತ್ತಿರ ಬರದಂತೆ ತಡೆದು ಬಿಗಿ ಪೊಲೀಸ್ ಬಂದೋಬಸ್ತ್ (Security Arrangement) ಕಲ್ಪಿಸಲಾಗಿದೆ. ಇಡೀ ಜಿಲ್ಲೆಯು ದೇವೇಗೌಡರ ಕುಟುಂಬದ ದೊಡ್ಡಮ್ಮನ ಅಗಲಿಕೆಗೆ ಕಂಬನಿ ಮಿಡಿಯುತ್ತಿದೆ.