ಮೋದಿ ತಪ್ಪು ಹುಡುಕೋದೇ ನನ್ನ ಕೆಲಸವಲ್ಲ: ದೇವೇಗೌಡ

By Kannadaprabha NewsFirst Published Oct 9, 2020, 2:30 PM IST
Highlights

ಲಘು ಮಾತುಗಳಿಗೆ ಉತ್ತರ ಕೊಡಲಾರೆ: ದೇವೇಗೌಡ| ಸಿದ್ದರಾಮಯ್ಯ ನಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಮಾತನಾಡಿರುವುದನ್ನು ವಿಶ್ಲೇಷಣೆ ಮಾಡಲ್ಲ| ಚುನಾವಣೆಯಲ್ಲಿ ಜನರೇ ಉತ್ತರ ಕೊಡ್ತಾರೆ: ದೇವೇಗೌಡ| ಕೋವಿಡ್‌ನಿಂದಾಗಿ ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಗುರಿಯಾಗಿದೆ| 

ಕಲಬುರಗಿ(ಅ.09): ಜೆಡಿಎಸ್‌ ಬಗ್ಗೆ, ತಮ್ಮ ಹಾಗೂ ತಮ್ಮ ಕುಟುಂಬದವರ ಬಗ್ಗೆ ರಾಜಕೀಯವಾಗಿ ಯಾರೇ ಲಘುವಾಗಿ ಮಾತನಾಡಿದರೂ ಸಹ ಅದನ್ನೆಲ್ಲ ವಿಶ್ಲೇಷಣೆ ಮಾಡುತ್ತ ಕೂರೋದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಈಶಾನ್ಯ ಶಿಕ್ಷಕ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಆಗಮಿಸಿದ್ದ ಗೌಡರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರಿವರ ಲೇವಡಿ ಮಾತನ್ನಿಲ್ಲಿ ಪ್ರಸ್ತಾಪಿಸಿ ನೀವು (ಮಾಧ್ಯಮದವರು) ನನ್ನಿಂದ ಏನೆಲ್ಲಾ ಉತ್ತರ ಬಯಸಿದ್ದೀರಿ ಅಂತ ಗೊತ್ತು. ಆದರೆ, ಅಂತಹ ಮಾತುಗಳಿಗೆ ವಿಶ್ಲೇಷಣೆ ಮಾಡುವ ಕಾಲವಿದಲ್ಲ. ನಾವೀಗ ಚುನಾವಣೆ ಕಾಲದಲ್ಲಿದ್ದೇವೆ ಎಂದರು.

ಶಿಕ್ಷಕರ ಕ್ಷೇತ್ರದ 2, ಪದವಿಧರ ಕ್ಷೇತ್ರದ 2 ಚುನಾವಣೆ, ಉಪ ಚುನಾವಣೆಗಳಲ್ಲಿ ಜೆಡಿಎಸ್‌ ಎಲ್ಲಾಕಡೆ ಹುರಿಯಾಳುಗಳನ್ನು ಕಣಕ್ಕಿಳಿಸಿ ಏಕಾಂಗಿ ಹೋರಾಟ ಮಾಡಲಿದೆ. ನಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಯಾರು ಏನೇ ಹೇಳಲಿ ತಲೆ ಕೆಡೆಸಿಕೊಳ್ಳೋದಿಲ್ಲ. ಕಾರ್ಯಕರ್ತರ ಹೋರಾಟದಿಂದ ಪಕ್ಷ ಬಲಿಷ್ಠವಾಗಿದೆ. ಅದೇ ನಮ್ಮ ಪಕ್ಷಕ್ಕೆ ಇಂದಿಗೂ ಬಹುದೊಡ್ಡ ಆನೆಬಲ ಎಂದರು.

ಕಲಬುರಗಿಯಲ್ಲಿ ಎಂಬಿ ಅಂಬಲಗಿ, ಬಸವರಾಜ ತಡಕಲ್‌, ದೇವೇಗೌಡ ತೆಲ್ಲೂರ್‌ ಸೇರಿದಂತೆ ಹಲವರು ಕಾರ್ಯಕರ್ತರು ಪಕ್ಷ ಬಿಟ್ಟು ಹೋಗಿರುವ ವಿಚಾರ ಪತ್ರಿಕೆಗಳಲ್ಲಿ ಗಮನಿಸಿದ್ದಾಗಿ ಹೇಳಿದರಲ್ಲದೆ ಇವರೆಲ್ಲರಿಗೂ ಕರೆ ಮಾಡಿರುವೆ. ಪಕ್ಷಕ್ಕೆ ಅವರು ಮರಳುತ್ತಾರೆ. ಅದೇನೇ ವ್ಯತ್ಯಾಸಗಳಿದ್ದರೂ ಎಲ್ಲವನ್ನು ಬಗೆಹರಿಸಿ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವಾಗಿ ಕಟ್ಟುತ್ತೇವೆ. ಅದೇ ತಮ್ಮ ಗುರಿ ಎಂದರು.

'ಸಿಎಂ ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಲಿ'

ಜೆಡಿಎಸ್‌ ಪಕ್ಷ ಸದಾ ಅನ್ಯರ ಹೆಗಲನ್ನೇರಿ ಸವಾರಿ ಮಾಡೋ ಪಕ್ಷವೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, ಜೆಡಿಎಸ್‌ ರಾಷ್ಟ್ರೀಯ ಪಕ್ಷ. ಅವರಿವರ ಹೆಗಲ ಮೇಲೇಕೆ ನಾವು ಸವಾರಿ ಮಾಡೋದು, 90ರ ದಶಕದಲ್ಲಿ ಹೀಗೆ ಮಾತನಾಡಿದವರೆಲ್ಲರೂ ಎಲ್ಲಿದ್ರು? ಇವ್ರು ಆಗ ಯಾರ ಹೆಗಲ ಮೇಲೆ ಕುತಿದ್ರು? ಇಂತಹ ಚರ್ಚೆಗಳು ಸಾಕಷ್ಟು ಮಾಡಬಹುದು. ಆದರೀಗ ನಾನು ಅದಕ್ಕೆಲ್ಲ ಸಿದ್ದನಿಲ್ಲವೆಂದು ತಮ್ಮ ಮಾತಿಗೆ ತೆರೆ ಎಳೆದರು.

ಮೋದಿ ತಪ್ಪು ಹುಡುಕೋದೇ ನನ್ನ ಕೆಲಸವಲ್ಲ

ಕೋವಿಡ್‌ನಿಂದಾಗಿ ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಗುರಿಯಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆದೂರಿದ ಸಮಸ್ಯೆಗಳೂ ದೇಶವನ್ನು ಕಾಡುತ್ತಿವೆ. ಈ ಸಂದರ್ಭದಲ್ಲಿ ಬರೇ ಪ್ರಧಾನಿ ಮೋದಿಯ ಬಗ್ಗೆ ತಪ್ಪು ಹುಡುಕೋದೇ ನನ್ನ ಕೆಲಸವಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ. 

ದೇಶದ ವಿದ್ಯಮಾನಗಳೆಲ್ಲವನ್ನು ಗಮನಿಸುತ್ತಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ರಾಜಕೀಯ ಕಾಳಗ ನಡೆದಿದೆ. ಕೋವಿಡ್‌ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ ಎಂದರು. ಇದೇ ವೇಳೆ ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ಮತ್ತೊಂದು ನ್ಯಾಯಮಂಡಳಿ ರಚಿಸುವ ಅಗತ್ಯವಿಲ್ಲ. ರಾಜ್ಯದ ಪಾಲಿನ ನೀರನ್ನು ಉಳಿಸಿಕೊಳ್ಳಲು ಕೊನೆಯವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.
 

click me!