'ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ ಕ್ಷಮೆ ಕೇಳಿದ್ದು ತಪ್ಪು'

By Kannadaprabha NewsFirst Published Jan 18, 2020, 8:21 AM IST
Highlights

ಸಂವಿಧಾನದ ಬುಡ ಅಲುಗಾಡಿಸಲು ಮುಂದಾಗಿದೆ ಕೇಂದ್ರ ಸರ್ಕಾರ| ಸಮಾಜಕ್ಕೆ ಸಚಿವ ಸ್ಥಾನ ಕೇಳಿದ ವಿಧಾನ ಸರಿಯಿರಲ್ಲಿಲ್ಲ| ಶ್ರೀಗಳು ಕೇಳುವ ವಿಧಾನ ಸರಿಯಿಲ್ಲ| ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅ​ಧಿಕಾರಕ್ಕೆ ತರುವಲ್ಲಿ ಪಂಚಮಸಾಲಿ ಸಮುದಾಯದ ಶ್ರಮ ಸಾಕಷ್ಟಿದೆ|

ಹೂವಿನಹಡಗಲಿ(ಜ.18): ಪಂಚಮಸಾಲಿ ಸಮಾಜದ ಹರ ಜಾತ್ರೆಯ ಸಮಾರಂಭದಲ್ಲಿ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ, ಮುರುಗೇಶ ನಿರಾಣಿ ಹಾಗೂ ತಮ್ಮ ಸಮುದಾಯದ ಮೂವರು ಶಾಸಕರಿಗೆ ಮಂತ್ರಿಗಿರಿ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಶ್ರೀಗಳು ಕೇಳುವ ವಿಧಾನ ಸರಿಯಿರಲಿಲ್ಲ ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಪೀಠದ ಸ್ವಾಮೀಜಿ ಬೆದರಿಕೆ ಹಾಕುವ ರೀತಿ ಎಲ್ಲಿಯೂ ಮಾತನಾಡಿಲ್ಲ. ಸಮಾಜದ ಹಕ್ಕೊತ್ತಾಯ ಮಾಡಿದ್ದಾರೆ. ಇದನ್ನೇ ಬೆದರಿಕೆ ಎಂದು ಹೇಳಬಾರದು. ರಾಜಕೀಯವಾಗಿ ಸಮಾಜದ ಅಭಿವೃದ್ಧಿ ಪರ ಕಾಳಜಿ ಕುರಿತು ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಮಾಜಕ್ಕೆ ರಾಜಕೀಯವಾಗಿ ಅನ್ಯಾಯ ಆದರೇ ಶ್ರೀಗಳು ಮೌನವಹಿಸಲು ಹೇಗೆ ಸಾಧ್ಯ? ಸಮಾಜದ ಪರ ಕಾಳಜಿ ಇಟ್ಟುಕೊಂಡು ಶ್ರೀಗಳು ಮಾತನಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅ​ಧಿಕಾರಕ್ಕೆ ತರುವಲ್ಲಿ ಪಂಚಮಸಾಲಿ ಸಮುದಾಯದ ಶ್ರಮ ಸಾಕಷ್ಟಿದೆ. ಹಾಗಾಗಿ, ನಮ್ಮ ಸಮುದಾಯದ ಶಾಸಕರನ್ನು ಸಚಿವರನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಬೇಕಿತ್ತು. ಅದರಲ್ಲೂ ಸಮಾರಂಭದ ವೇದಿಕೆಯಲ್ಲಿ ಬಹಿರಂಗವಾಗಿ ಕೇಳುವುದು ಸಮಂಜಸವಲ್ಲ ಎಂದು ಹೇಳಿದ ಅವರು, ಮತ್ತೊಂದೆಡೆ ಸ್ವಾಮೀಜಿ ಯಾವುದೇ ಕಾರಣಕ್ಕೂ ಕ್ಷಮೆ ಕೇಳಬಾರದಿತ್ತು. ತಮ್ಮ ಹೇಳಿಕೆಗೆ ಬದ್ಧರಾಗಿ ಇರಬೇಕಿತ್ತು ಎಂದರು.
 

click me!