ಪಠ್ಯದಲ್ಲಿ ಸಿದ್ದೇಶ್ವರ ಶ್ರೀಗಳ ಅಳವಡಿಕೆ ಎಲ್ಲರ ಆಶಯ: ಎಂ.ಬಿ.ಪಾಟೀಲ

By Kannadaprabha NewsFirst Published Jan 5, 2023, 7:30 PM IST
Highlights

ಅಪ್ಪೊರು ಈಗಾಗಲೇ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದಾರೆ. ಅಂತಿಮ ವಿದಾಯ ಕಾರ್ಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಅದನ್ನು ನಾವು ಭಕ್ತರೇ ನೋಡಿಕೊಂಡಿದ್ದೇವೆ: ಎಂ.ಬಿ.ಪಾಟೀಲ 

ವಿಜಯಪುರ(ಜ.05):  ಶತಮಾನದ ಸಂತ, ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಕುರಿತು ಪಠ್ಯಪುಸ್ತಕದಲ್ಲಿ ಇರಬೇಕು ಎನ್ನುವುದು ಎಲ್ಲರ ಆಶಯವಾಗಿದೆ. ಆದರೆ ಏನಿದ್ದರೂ ರಾಜಕೀಯವಾಗಿ ಹೇಳಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ನಗರದ ಜ್ಞಾನಯೋಗಾಶ್ರಮಕ್ಕೆ ಬುಧವಾರ ಭೇಟಿ ನೀಡಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಪ್ಪೊರು ಈಗಾಗಲೇ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದಾರೆ. ಅಂತಿಮ ವಿದಾಯ ಕಾರ್ಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಅದನ್ನು ನಾವು ಭಕ್ತರೇ ನೋಡಿಕೊಂಡಿದ್ದೇವೆ ಎಂದು ಹೇಳಿದರು.

ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮ ಭಕ್ತರಿಗೆ ಕೊಡುವುದಿಲ್ಲ: ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ

ಸಿದ್ದೇಶ್ವರ ಸ್ವಾಮೀಜಿ ಚಿತಾಭಸ್ಮ ವಿಸರ್ಜನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಕೃಷ್ಣಾ, ಕಾವೇರಿ, ಹಿಂದೂ ಮಹಾಸಾಗರ ಇನ್ನೂ ಕೆಲವು ಇವೆ. ಅದೆಲ್ಲವನ್ನು ನಿರ್ಧಾರ ಮಾಡುತ್ತಾರೆ. ಇದು ಒಬ್ಬರು ತೆಗೆದುಕೊಳ್ಳುವ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದರು.ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ಶ್ರೀಗಳ ಆಶಯದಂತೆ ಶಿಸ್ತು, ಸರಳವಾಗಿ, ಮನಸ್ಸು ಒಪ್ಪುವ ರೀತಿಯಲ್ಲಿ ನೆರವೇರಿತು. ಇದಕ್ಕೆ ಸರ್ಕಾರ, ಜಿಲ್ಲಾಡಳಿತ, ಸಂಘ ಸಂಸ್ಥೆಗಳು, ಭಕ್ತರು  ಸಹಕಾರ ನೀಡಿದ್ದರು. ಆದ್ದರಿಂದ ಎಲ್ಲರಿಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬಸವಲಿಂಗ ಸ್ವಾಮೀಜಿ ಜೊತೆ ಜಿಲ್ಲೆಯ ಜನತೆ, ಪಕ್ಷ, ಜಾತ್ಯತೀತವಾಗಿ ಇದ್ದೇವೆ. ಅಪ್ಪಾಜೀ ಆಶಯದಂತೆ ಗದ್ದುಗೆ, ಸ್ಮಾರಕ ಇಲ್ಲದೇ ಮುಂದುವರಿಯಬೇಕು ಎನ್ನುವುದಕ್ಕೆ ಎಲ್ಲರೂ ಸಹಕಾರ ಇದೆ ಎಂದರು. ಜ್ಞಾನಯೋಗಾಶ್ರಮದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ಜೀವಂತವಾಗಿ ನಡೆಯಬೇಕು. ಇದೊಂದು ಸಣ್ಣ ಪ್ರಸ್ತಾವನೆ ಇದೆ. ಗದ್ದುಗೆ, ಸ್ಮಾರಕ ಇಲ್ಲದೇ ಆಗಬೇಕು. ಮುಂದಿನ ಕಾರ್ಯಗಳು ಸುತ್ತೂರು, ಕನ್ಹೇರಿ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ತಿಳಿಸಿದರು.ನಾವು ಭಕ್ತರಾಗಿ ಇರುತ್ತೇವೆ. ನಾನು ಪ್ರಸ್ತಾವನೆ ಕೊಟ್ಟಿದ್ದೇನೆ. ಇದಕ್ಕೆ ಸ್ವಾಮೀಜಿಗಳು, ನಿವೃತ್ತ ನ್ಯಾಯಮೂರ್ತಿ ಪಚ್ಚಾಪುರೆ ಎಲ್ಲರಿಗೂ ತಿಳಿಸಿದ್ದಾರೆ. ಇದಕ್ಕೆ ಎಲ್ಲರೂ ಒಪ್ಪಬೇಕು ಎಂದರು.
 

click me!