ರಾಯಣ್ಣ ಬ್ರಿಗೇಡ್‌ ಕಡೆ ನಾನು ತಲೆ ಹಾಕೋದಿಲ್ಲ: ಈಶ್ವರಪ್ಪ

By Kannadaprabha NewsFirst Published Aug 2, 2021, 3:43 PM IST
Highlights

*  ಸಚಿವ ಸ್ಥಾನ ಸಿಗಲಿ, ಬಿಡಲಿ ಬ್ರಿಗೇಡ್‌ಗೆ ಹೋಗಲ್ಲ
*  ರಾಯಣ್ಣ ಬ್ರಿಗೇಡ್‌ ಕೈ ಬಿಡುವಂತೆ ಸೂಚಿಸಿದ ಹೈಕಮಾಂಡ್‌
*  ಕಾಂಗ್ರೆಸ್‌ ಮುಖಂಡರ ವಿರುದ್ಧ ಈಶ್ವರಪ್ಪ ವಾಗ್ದಾಳಿ

ವಿಜಯಪುರ(ಆ.02): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗಲಿ ಅಥವಾ ಬಿಡಲಿ ರಾಯಣ್ಣ ಬ್ರಿಗೇಡ್‌ ಮುಂದುವರಿಯಲ್ಲ. ಆ ಸಂಘಟನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೂ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಪಕ್ಷದ ಹೈಕಮಾಂಡ್‌ನವರು ಕೈ ಬಿಡುವಂತೆ ಸೂಚಿಸಿದ್ದಾರೆ. ಹೈಕಮಾಂಡ್‌ ನಿರ್ದೇಶನದಂತೆ ಬಿಜೆಪಿ ಕಾರ್ಯಕರ್ತನಾಗಿ ಆ ಸಂಘಟನೆಯ ಚಟುವಟಿಕೆಗಳಲ್ಲಿ ತಲೆಹಾಕುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಪಕ್ಷ ಯಾವ ಜವಾಬ್ದಾರಿ ನೀಡಿದರೂ ಅದನ್ನು ವಹಿಸಿಕೊಳ್ಳುತ್ತೇನೆ ಎಂದು ಪುನರುಚ್ಚರಿಸಿದ ಈಶ್ವರಪ್ಪ, ನನ್ನ ಜೀವನದಲ್ಲಿ ಇದೇ ಆಗಬೇಕೆಂದು ಆಸೆ ಪಟ್ಟವನಲ್ಲ. ಮುಖ್ಯಮಂತ್ರಿ ಆಗಲಿಲ್ಲ, ಉಪ ಮುಖ್ಯಮಂತ್ರಿ ಅಥವಾ ಸಚಿವ ಆಗುತ್ತೇನೋ, ಬಿಡುತ್ತೇನೋ ಗೊತ್ತಿಲ್ಲ. ಆದರೆ ಶಾಸಕ ಮಾತ್ರ ಆಗಿರುತ್ತೇನೆ ಎಂದು ಹೇಳಿದರು.

'ಯತ್ನಾಳ್‌ ಪಕ್ಕಾ ಹಿಂದುತ್ವವಾದಿ, ಒಂದೇ ಬಾರಿ ಅಂತವರನ್ನ ಕಳೆದುಕೊಳ್ಳಬಾರು: ಈಶ್ವರಪ್ಪ

ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಬೇಕೆಂದು ಹೇಳಿಕೊಂಡು ಕುರುಬ ಸಮಾಜದವರು ಸೇರಿ ಸಾಕಷ್ಟು ಜನ ಬೆಂಬಲಿಸಿದ್ದಾರೆ. ಸ್ವಾಮೀಜಿಗಳು ಸಹ ಮನೆಗೆ ಬಂದು ಮಾತನಾಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕೊಡುವೆ. ಆದರೆ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರವಾಗಿ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: 

ಏತನ್ಮಧ್ಯೆ, ಈಶ್ವರಪ್ಪ ಅವರು ಕಾಂಗ್ರೆಸ್‌ ಮುಖಂಡರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನಾವೇ ಮುಖ್ಯಮಂತ್ರಿಗಳು ಅನ್ನುತ್ತಿರುವ ಕಾಂಗ್ರೆಸ್‌ ನಾಯಕರಾದ ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್‌ ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ? ನಾವ್ಯಾರು ಪರಸ್ಪರ ಸೋಲಿಸಲು ಪ್ರಯತ್ನ ಮಾಡಿಲ್ಲ, ಒಬ್ಬರಿಗೊಬ್ಬರ ಕಾಲೆಳೆದಿಲ್ಲ ಅಂತ ಪ್ರಮಾಣ ಮಾಡಿದರೆ ಅವರು ಹೇಳಿದಂತೆ ನಾನು ಕೇಳುತ್ತೇನೆ ಎಂದು ಸವಾಲು ಹಾಕಿದರು.
 

click me!