ಬೆಳಗಾವಿ: ಮಾಧ್ಯಮದವರು ದಾದಾಗಿರಿ ಮಾಡುವ ಪುಂಡರೆಂದ ಸಂಜಯ್‌ ಪಾಟೀಲ್‌

By Kannadaprabha NewsFirst Published Jan 14, 2023, 2:35 PM IST
Highlights

ನಾವು ಹೇಳಿದ್ದನ್ನು ಮೊದಲು ಕೇಳಿಸಿಕೊಳ್ಳಿ ಎಂದು ಪಾಟೀಲ ರಾದ್ದಾಂತ ಸೃಷ್ಟಿಮಾಡಿದರು. ಇದರಿಂದಾಗಿ ಸುದ್ದಿಗೋಷ್ಠಿಯಲ್ಲಿದ್ದ ಬಿಜೆಪಿ ನಾಯಕರಿಗೂ ಇರಿಸು ಮುರಿಸು ಉಂಟಾಯಿತು. ಇದೆಲ್ಲದರ ನಡುವೆಯೇ ಕೊನೆಗೂ ಕ್ಷಮೆಕೇಳುವ ಮೂಲಕ ರಾದ್ಧಾಂತಕ್ಕೆ ಅಂತ್ಯ ಹಾಡಿದ ಸಂಜಯ ಪಾಟೀಲ. 

ಬೆಳಗಾವಿ(ಜ.14):  ಬಿಜೆಪಿ ನಾಯಕರು ಶುಕ್ರವಾರ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾಧ್ಯಮದವರಿಗೆ ದಾದಾಗಿರಿ ಮಾಡಲು ಬಂದಿದ್ದೀರೋ? ನೀವು ದಾದಾಗಿರಿ ಮಾಡುವ ಪುಂಡರು ಎಂದು ಹೀಯಾಳಿಸಿದ್ದು, ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ ಶುಕ್ರವಾರ ನಡೆಯಿತು.

ಶುಕ್ರವಾರ ಬಿಜೆಪಿ ನಾಯಕರು ಸುದ್ದಿಗೋಷ್ಠಿ ಏರ್ಪಡಿಸಿದ್ದರು. ಈ ವೇಳೆ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾಗ್ವಾದಕ್ಕಿಳಿದು ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆಯೇ ಕೊನೆಗೆ ಕ್ಷಮೆಕೋರುವ ಮೂಲಕ ರಾದ್ಧಾಂತಕ್ಕೆ ತೆರೆ ಎಳೆದ ಪ್ರಸಂಗ ನಡೆಯಿತು.

ಅಥಣಿಯಲ್ಲಿ ಎಗ್ಗಿಲ್ಲದೇ ನಡೆದಿದೆ ಮಾವಾ, ಗುಟ್ಕಾ ಮಾರಾಟ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್‌ ಹಂಚಿಕೆ, ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡುವಂತಹ ಸಂವಿಧಾನ ವಿರೋಧಿ ಕೆಲಸ ನಡೆಯುತ್ತಿದೆ. ಈ ಕುರಿತು ವಿಶೇಷ ವರದಿ ಏಕೆ ಮಾಡಿಲ್ಲ ಎಂದು ಮಾಧ್ಯಮದವರನ್ನು ಸಂಜಯ ಪಾಟೀಲ ಪ್ರಶ್ನಿಸಿದರು. ಇದಕ್ಕೆ ಪತ್ರಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪತ್ರಕರ್ತರು ಮತ್ತು ಸಂಜಯ ಪಾಟೀಲ ನಡುವೆ ವಾಗ್ವಾದ ನಡೆಯಿತು. ಮಾತನಾಡುವ ಭರದಲ್ಲಿ ಸಂಜಯ ಪಾಟೀಲ ಮಾಧ್ಯಮ ಪ್ರತಿನಿಧಿಗಳು ದಾದಾಗಿರಿ ಮಾಡುವ ಪುಂಡರು ಎಂದು ಹೀಯಾಳಿಸಿದರು. ನಿಮ್ಮ ಹುಟ್ಟುಹಬ್ಬದ ವೇಳೆ ನೀವು ಕೂಡ ಜನರಿಗೆ ಊಡುಗೊರೆ ಕೊಟ್ಟಿಲ್ಲವೇ? ನಿಮಗೆ ಆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಮಾಧ್ಯಮದವರು ಮರು ಸವಾಲು ಹಾಕಿದರು.

ಸೂಕ್ತ ಉತ್ತರ ನೀಡಲಾರದೇ, ಆವೇಶ ಭರಿತರಾಗಿ ಮಾತನಾಡಿ, ಮಾಧ್ಯಮದವರು ದಾದಾಗಿರಿ ಮಾಡುತ್ತೀದ್ದಿರಿ. ನಿಮ್ಮನ್ನು ನಾವು ಕರೆದಿದ್ದೇವೆ. ನಾವು ಹೇಳಿದ್ದನ್ನು ಮೊದಲು ಕೇಳಿಸಿಕೊಳ್ಳಿ ಎಂದು ಪಾಟೀಲ ರಾದ್ದಾಂತ ಸೃಷ್ಟಿಮಾಡಿದರು. ಇದರಿಂದಾಗಿ ಸುದ್ದಿಗೋಷ್ಠಿಯಲ್ಲಿದ್ದ ಬಿಜೆಪಿ ನಾಯಕರಿಗೂ ಇರಿಸು ಮುರಿಸು ಉಂಟಾಯಿತು. ಇದೆಲ್ಲದರ ನಡುವೆಯೇ ಸಂಜಯ ಪಾಟೀಲ ಕೊನೆಗೂ ಕ್ಷಮೆಕೇಳುವ ಮೂಲಕ ರಾದ್ಧಾಂತಕ್ಕೆ ಅಂತ್ಯ ಹಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ ಬೆನಕೆ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಕೂಡ ಹಾಜರಿದ್ದರು. ಅವರೆದುರೇ ಈ ಘಟನೆ ನಡೆಯಿತು.

click me!