Mandya : ಚಿರತೆ ಸೆರೆಗೆ ಟಾಸ್ಕ್ ಫೋರ್ಸ್‌ ರಚನೆ

By Kannadaprabha NewsFirst Published Feb 14, 2023, 1:39 PM IST
Highlights

ಚಿರತೆ ಹಾವಳಿ ನಿಯಂತ್ರಿಸುವ ಸಲುವಾಗಿ ಮಂಡ್ಯ ಹಾಗೂ ಮೈಸೂರು ಎರಡು ಜಿಲ್ಲೆಗಳನ್ನು ಸೇರಿಸಿ ಚಿರತೆ ಟಾಸ್‌್ಕ ಫೋರ್ಸ್‌ ಹಾಗೂ 24*7 ಸಹಾಯವಾಣಿಯನ್ನು ಜ.31ರಂದು ತೆರೆಯಲಾಗಿದೆ.

 ಮಂಡ್ಯ :  ಚಿರತೆ ಹಾವಳಿ ನಿಯಂತ್ರಿಸುವ ಸಲುವಾಗಿ ಮಂಡ್ಯ ಹಾಗೂ ಮೈಸೂರು ಎರಡು ಜಿಲ್ಲೆಗಳನ್ನು ಸೇರಿಸಿ ಚಿರತೆ ಟಾಸ್ಕ್  ಫೋರ್ಸ್‌ ಹಾಗೂ 24*7 ಸಹಾಯವಾಣಿಯನ್ನು ಜ.31ರಂದು ತೆರೆಯಲಾಗಿದೆ.

ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 17 ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ.

Latest Videos

ಡಿಸಿಎಫ್‌ ಅವರ ನೇತೃತ್ವದಲ್ಲಿ ಒಬ್ಬ ವಲಯ ಸಂರಕ್ಷಣಾಧಿಕಾರಿ, ನಾಲ್ವರು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು, ಎಂಟು ಫಾರೆಸ್ಟ್‌ ಗಾರ್ಡ್‌ ಹಾಗೂ 40 ಜನ ಸಹಾಯಕರನ್ನು ಒಳಗೊಂಡು ಈ ಟಾಸ್‌್ಕಪೋರ್ಸ್‌ ರಚನೆಯಾಗಿದೆ. ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಿ ಚಿರತೆ ಕಂಡು ಬಂದರೂ 9481996026 ಸಹಾಯವಾಣಿಗೆ ಕರೆ ಮಾಡಿದರೆ ಶೀಘ್ರವೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಲಿದ್ದಾರೆ.

ಸಹಾಯವಾಣಿಗೆ ಸ್ವತಃ ಕರೆ ಮಾಡಿ ಪರಿಶೀಲನೆ ನಡೆಸಿದ್ದೇನೆ. ಸದ್ಯ ದಿನಕ್ಕೆ ಮೂರರಿಂದ ಕರೆಗಳು ಬರುತ್ತಿವೆ. ಜನರು ಆತಂಕಗೋಳ್ಳಬಾರದು, ಎಚ್ಚರದಿಂದ ಇರಬೇಕು. ಅಗತ್ಯ ಬಿದ್ದಾಗ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಎಂದು ಶಾಸಕ ದಿನೇಶ ಗೂಳಿಗೌಡ ಮನವಿ ಮಾಡಿದ್ದಾರೆ.

ಟಾಸ್‌್ಕಫೋರ್ಸ್‌ ಮುಖ್ಯಸ್ಥರೊಂದಿಗೆ ಸಮಾಲೋಚನೆ:

ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಿದೆ. ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕೆ.ಆರ್‌.ಪೇಟೆ, ಮದ್ದೂರು, ಮೇಲುಕೋಟೆ, ಮಳವಳ್ಳಿ, ನಾಗಮಂಗಲ ಭಾಗದಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಾಕು ಪ್ರಾಣಿಗಳಾದ ದನ, ನಾಯಿ, ಕುರಿ, ಮೇಕೆಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದ ರೈತರು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಜನರ ಭಯ ನಿವಾರಿಸಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅಗತ್ಯಬಿದ್ದರೆ ಬೋನ್‌ಗಳನ್ನು ಇಟ್ಟು ಚಿರತೆಗಳನ್ನು ಹಿಡಿಯಬೇಕು. ಜನರ ರಕ್ಷಣೆಗೆ ಟಾಸ್‌್ಕಫೋರ್ಸ್‌ ಸನ್ನದ್ಧವಾಗಿರಬೇಕು ಎಂದರು.

ನಗರದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಚಿರತೆ ಟಾಸ್‌್ಕಫೋರ್ಸ್‌ ಮುಖ್ಯಸ್ಥ ಹಾಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್‌ ಜೊತೆ ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ಚಿರತೆಗಳ ಹಾವಳಿ ಹೆಚ್ಚಲು ಕಾರಣಗಳೇನು ಎಂಬ ಬಗ್ಗೆ ಚರ್ಚಿಸಿದರು.

ತ್ಯಾಜ್ಯ, ಮಾಂಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ:

ಚಿರತೆಗಳು ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಕಬ್ಬಿನ ಗದ್ದೆಗಳಿಗೆ ಬರುತ್ತಿವೆ. ಕಬ್ಬು ಕಟಾವಿಗೆ ಬರುವ ಅಥವಾ ಈ ಭಾಗದಲ್ಲಿ ಓಡಾಡುವ ರೈತರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೇ, ನಗರ ಪ್ರದೇಶದಲ್ಲಿ ಮಾಂಸ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರ ಪರಿಣಾಮ ಬೀದಿ ನಾಯಿಗಳು, ಹಂದಿಗಳ ಪ್ರಮಾಣ ಹೆಚ್ಚಿದೆ. ಇದರಿಂದ ಚಿರತೆಗಳು ಆಹಾರ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಬರುತ್ತಿವೆ ಎಂದು ಸೌರಭ್‌ಕುಮಾರ್‌ ಚಿರತೆಗಳು ಗ್ರಾಮಗಳಿಗೆ ಬರುತ್ತಿರುವ ಕಾರಣದ ಬಗ್ಗೆ ವಿವರಿಸಿದರು.

ಚಿರತೆಗಳ ವರ್ತನೆ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಗುಜರಾತ್‌ನ ಗಿರ್‌ ಅರಣ್ಯಾಧಿಕಾರಿಗಳು, ಮುಂಬೈನ ಸಂಜಯ್‌ಗಾಂಧಿ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಚಿರತೆಗಳನ್ನು ಹಿಡಿದಲ್ಲಿ ದೂರದ ಕಾಡಿಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿರತೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸೌರಭ್‌ಕುಮಾರ್‌ ವಿವರಿಸಿದ್ದಾರೆ.

click me!