ಬಾಳೆದಿಂಡಿನಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ: ಚಿಕ್ಕಮಗಳೂರಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ!

By Govindaraj SFirst Published Jan 26, 2024, 11:59 PM IST
Highlights

ಕಾಫಿಯ ಸುವಾಸನೆಯಲ್ಲೇ ಕಳೆದೋಗಿದ್ದ ಮಲೆನಾಡಿಗರಿಗೀಗಾ ಬಣ್ಣ ಬಣ್ಣದ ಹೂಗಳ ಸುವಾಸನೆ ಸವಿಯೋ ಭಾಗ್ಯ. ಗಣರಾಜ್ಯೋತ್ಸವದ ಪ್ರಯುಕ್ತ ಚಿಕ್ಕಮಗಳೂರಲ್ಲಿ ತೋಟಗಾರಿಕೆ ಇಲಾಖೆ ಏರ್ಪಡಿಸಿರೋ ಐದು ದಿನದ ಫಲಪುಪ್ಪ ಪ್ರದರ್ಶನ ಕಾಫಿನಾಡಿಗರನ್ನ ಕೈಬೀಸಿ ಕರೆಯುತ್ತಿದೆ. 
 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.26): ಕಾಫಿಯ ಸುವಾಸನೆಯಲ್ಲೇ ಕಳೆದೋಗಿದ್ದ ಮಲೆನಾಡಿಗರಿಗೀಗಾ ಬಣ್ಣ ಬಣ್ಣದ ಹೂಗಳ ಸುವಾಸನೆ ಸವಿಯೋ ಭಾಗ್ಯ. ಗಣರಾಜ್ಯೋತ್ಸವದ ಪ್ರಯುಕ್ತ ಚಿಕ್ಕಮಗಳೂರಲ್ಲಿ ತೋಟಗಾರಿಕೆ ಇಲಾಖೆ ಏರ್ಪಡಿಸಿರೋ ಐದು ದಿನದ ಫಲಪುಪ್ಪ ಪ್ರದರ್ಶನ ಕಾಫಿನಾಡಿಗರನ್ನ ಕೈಬೀಸಿ ಕರೆಯುತ್ತಿದೆ. ಕಣ್ಮನ ಸೆಳೆಯೋ ಬಗೆ ಬಗೆಯ ಹೂಗಳ ರಾಶಿ, ಮೈಮರೆಸೋ ಸುವಾಸನೆ ಬೀರೋ ಹೂಗಳ ಪ್ರದರ್ಶನ ಜನಮನ ಸೊರೆಗೊಳಿಸ್ತಿದೆ

Latest Videos

ಹೂವು ಮತ್ತು ವಿವಿಧ ತರಕಾರಿಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳು: ಹಸಿವು ನೀಗಿಸಿಕೊಳ್ಳಲು ಮೊಸಳೆಯೊಂದು ಬಾಯ್ದೆರೆದು ಕುಳಿತಿದೆ. ಬಾತುಕೋಳಿ ರೆಕ್ಕೆಬಿಚ್ಚಿ ಮರಿಯನ್ನು ಮುದ್ದಾಡುತ್ತಿದೆ. ನವಿಲೆರಡು ಗರಿಬಿಚ್ಚಿನರ್ತಿಸಲು ಅಣಿಯಾಗಿದೆ.ಡಾಲ್ಫಿನ್ ಸಮುದ್ರದಿಂದ ಮೇಲೆದ್ದುಬಂದಿದೆ.ಜಿಂಕೆಯೊಂದು ಚಂಗನೆ ನೆಗೆದಿದೆ. ಅರೇರೆ ಏನಿದು ಅಂತಿರಾ ನೀವು ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯ ಸಮೀಪದ ತೋಟಗಾರಿಕೆ ಹಿರಿಯ ಉಪನಿರ್ದೇಶಕರ ಕಚೇರಿಗೆ ಕಾಲಿಟ್ಟರೆ ಸಾಕು ಇವುಗಳನ್ನು ಕಾಣಬಹುದಾಗಿದೆ. ೭೫ನೇ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬರುವ ಚಿತ್ರಣಗಳಿವು. 

ಶಕ್ತಿ ಯೋಜನೆ ಎಫೆಕ್ಟ್‌, ಮಾರ್ಚ್ ಅಂತ್ಯಕ್ಕೆ 5,800 ಬಸ್ ಖರೀದಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಹೂವು ಮತ್ತು ವಿವಿಧ ತರಕಾರಿಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳು ಸುಂದರವಾಗಿ ಮೂಡಿವೆ. ಫಲಪುಷ್ಪ ಪದರ್ಶನಕ್ಕೆ ಕಾಲಿಟ್ಟೊಡನೆ ಬಗೆಬಗೆಯ ಹೂವುಗಳ ನಿಮ್ಮನ್ನು ಸ್ವಾಗತಿಸುತ್ತವೆ. ಜಲಧಾರೆ ಯೊಂದು ಹೂವಿನಲ್ಲಿ ಮೂಡಿದೆ. ಧುಮ್ಮಿಕ್ಕುತ್ತಾ ಝುಳು ಝುಳ ನೀನಾದದೊಂದಿಗೆ ಹರಿಯುವುದನ್ನು ಕಾಣಬಹುದಾಗಿದೆ. ಕರ್ನಾಟಕರಾಜ್ಯ, ಕನ್ನಡ ವರ್ಣಮಾಲೆಯ ಅ ಆ ಇ ಈ ಅಕ್ಷರಗಳು ಮೂಡಿವೆ. ಪ್ರೇಮದ ಸಂಕೇತ ಹೃದಯವೂ ಕೆಂಪುಹೂಗಳಿಂದ ಕಂಗೊಳಿಸುವ ಮೂಲಕ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.

ಬಾಳೆದಿಂಡಿನಲ್ಲಿ ಆಯೋಧ್ಯೆಯ ಶ್ರೀರಾಮಮಂದಿರ: ಕುವೆಂಪು, ಪುನೀತ್ರಾಜ್ಕುಮಾರ್ ಪ್ರತಿಮೆಗಳಿವೆ. ಹಂಸಗಳ ನಡುವೆ ವರನಟ ಡಾ.ರಾಜ್ಕುಮಾರ್ ಯೋಗಾಸನ ಮಾಡುತ್ತಿರುವ ಭಂಗಿಯನ್ನು ನೋಡಬಹುದು. ಹಾಗಲಕಾಯಿಯಲ್ಲಿ ಮೊಳಸೆ ಮೂಡಿ ಬಂದರೆ. ಮೂಲಂಗಿ ಮತ್ತು  ಕ್ಯಾರೆಟ್ನಲ್ಲಿ ಬಾತುಕೋಳಿಯನ್ನು ನಿರ್ಮಿಸಲಾಗಿದೆ. ಕಲ್ಲಂಗಡಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಸ್ವಾಮಿವಿವೇಕಾನಂದ, ಭಗತ್ಸಿಂಗ್, ಹುಲಿ,ಜಿಂಕೆ, ಶ್ರೀರಾಮ, ಸೀತೆ,ಲಕ್ಷ್ಮಣ, ಚಂದ್ರಯಾನದ ರುವಾರಿ ಇಸ್ರೋ ಅಧ್ಯಕ್ಷ ಸೋಮನಾಥನ್,ಮತದಾನದ ಮಹತ್ವಸಾರುವ ಮತಪೆಟ್ಟಿಗೆ ಕಲಾವಿದರ ಕರದಲ್ಲಿ ಸುಂದರವಾಗಿ ಮೂಡಿವೆ.

ಮೂಲಂಗಿ ಮತ್ತು ಕ್ಯಾರೆಟ್ನಲ್ಲಿ  ನವಿಲುಗಳು, ಕಪ್ಪುಬಧನೆ ಮತ್ತು ಮೂಲಂಗಿಗೆಡ್ಡೆಯಲ್ಲಿ ಆನೆ, ಸಿಹಿಗುಂಬಳದಲ್ಲಿ ಬಾತುಕೋಳಿ, ಮೀನು,ಗಜ, ಆಂಜನೇಯಗಂಟೆ, ಕ್ಯಾರೆಟ್ ಮತ್ತು ಬಾಳೆದಿಂಡಿನಲ್ಲಿ ಆಯೋಧ್ಯೆಯ ಶ್ರೀರಾಮಮಂದಿರ ನೋಡುಗರನ್ನು ಆಕರ್ಷಿಸುತ್ತಿದೆ.ಸಿಹಿಗುಂಬಳ ಮತ್ತು ಸೋರೆಕಾಯಿಯಲ್ಲಿ ವೀಣೆ ಒಡಮೂಡಿದೆ.ಹೂವಿನಿಂದ ಡಾಲ್ಫಿನ್, ನಂದಿ, ಆನೆ, ಪೆಂಗ್ವಿನ್, ಐಸ್ಕ್ರೀಂಗಳು ತಯಾರಾಗಿವೆ. ಡೇರಿಯಾ, ಬೇಜೋನಿಯಾ, ಜಿರಾನಿಯಂ ಹೂವುಗಳು ನೋಡುಗರನ್ನು ಮುದಗೊಳಿಸುತ್ತಿವೆ. ಇತ್ತ ಮತ್ಸ್ಯಲೋಕಕ್ಕೆ ಹೋದರೆ ಅಕ್ವೆರಿಯಂನಲ್ಲಿ ಬಣ್ಣಬಣ್ಣದ ಮೀನುಗಳು ಚಿಣ್ಣರನ್ನು ಸೆಳೆಯುತ್ತಿವೆ. ಬಾಲವನ್ನು ಅಲ್ಲಾಡಿಸುತ್ತಾ ನೀರಿನಲ್ಲಿ ಓಡಾಡುತ್ತಿದ್ದರೆ, ಸಾರ್ವಜನಿಕರು ಕಣ್ಣುಮಿಟಿಕಿಸದೆ ನೋಡುವುದನ್ನು ಗಮನಿಸಬಹುದಾಗಿದೆ.

ಮುಧೋಳ ಕ್ಷೇತ್ರದ ಜನತೆಯ ಋುಣ ಮರೆಯಲಾರೆ: ಮಾಜಿ ಡಿಸಿಎಂ ಗೋವಿಂದ ಕಾರಜೋಳ

ಆಕರ್ಷಕ ಸ್ತಬ್ದ ಚಿತ್ರ: ಕಾಫಿನಾಡೆಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ  ಕಾಫಿಹೇಗೆ ಬಂತು ಎನ್ನುವ ಕಾಫಿಯ ಸಮಗ್ರ ಮಾಹಿತಿಯನ್ನು ಪರಿಚಯಿಸುವ  'ಬೆಟ್ಟದಿಂದ ಬಟ್ಟಲಿಗೆ' ಶೀರ್ಷಿಕೆಯಡಿ ಗಿರಿ ಪ್ರದೇಶದಲ್ಲಿ ಮಹಿಳೆ ಕಾಫಿಕಣ್ಣುಕೊಯ್ಯುತ್ತಿರುವ ಕಲಾವಿದ ಹರ್ಷಕಾವ ಅವರ ಕೈಯಲ್ಲಿ ಮೂಡಿರುವ ಸ್ತಬ್ಧಚಿತ್ರ ಜನರನ್ನು ಆಕರ್ಷಿಸುತ್ತಿದೆ. ಸೆಲ್ಫಿ ತೆಗೆದುಕೊಳ್ಳಲು ಪ್ರಚೋದಿಸುತ್ತಿದೆ.ರೈತರು ಬೆಳೆದಿರುವ ಬಗೆಬಗೆಯ ಹಣ್ಣು ಮತ್ತು ತರಕಾರಿಗಳಾದ ಮರಗೆಣಸು, ಕಾಳುಮೆಣಸು, ಬಗೆಬಗೆಯ ಬಾಳೆಕಾಯಿ, ಜಾಯ್ಕಾಯಿ, ಅಡಿಕೆ, ಚಿಕ್ಕ ಆಕರ್ಷಕ ಸಿಹಿಕುಂಬಳ, ಸಪೋಟಹಣ್ಣುಗಳು ಪ್ರದರ್ಶನಕ್ಕಿಡಲಾಗಿದೆ.ಒಟ್ಟಾರೆಯಾಗಿ ಫಲಪುಷ್ಪ ಪ್ರದರ್ಶನ ಜನರನ್ನು ತನ್ನತ್ತ ಸೆಳೆಯುತ್ತಿದೆ.

click me!