ಶೃಂಗೇರಿ ತಾಲೂಕು ಹಳ್ಳಿಗಳಲ್ಲಿ ಕಗ್ಗತ್ತಲು

By Kannadaprabha NewsFirst Published Aug 10, 2019, 11:00 AM IST
Highlights

ಮಲೆನಾಡಿನಾದ್ಯಂತ ಬಿರುಸಿನ ಮಳೆ ಮುಂದುವರಿದಿದ್ದು, ತಿಂಗಾ ನದಿ ಪ್ರವಾಹ ಅಪಾಯ ಮಟ್ಟವನ್ನು ಮೀರಿದೆ. ಇದೀಗ ಶೃಂಗೇರಿ ತಾಲೂಕಿನ ಹಳ್ಳಿಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿದ್ದು, ಹಲವು ದಿನಗಳಿಂದ ಹಳ್ಳಿಯಲ್ಲಿ ಕಗ್ಗತ್ತಲಾವರಿದಿದೆ. ವಿವಿಧೆಡೆ ಪ್ರವಾಹ ಉಂಟಾಗಿ ಸಂಪರ್ಕವೂ ಕಡಿತಗೊಂಡಿತ್ತು.

ಚಿಕ್ಕಮಗಳೂರು(ಆ.10): ಶೃಂಗೇರಿ ತಾಲೂಕಿನಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು ಶುಕ್ರವಾರವೂ ಎಡಬಿಡದೆ ಮಳೆ, ಗಾಳಿಯ ಆರ್ಭಟ ಹೆಚ್ಚಾಗಿತ್ತು. ಗುರುವಾರ ತುಂಗಾ ನದಿ ಪ್ರವಾಹ ಅಪಾಯದ ಮಟ್ಟಮೀರಿ ಹರಿಯಲಾರಂಭಿಸಿ, ತಗ್ಗುಪ್ರದೇಶಗಳೆಲ್ಲ ಜಲಾವೃತಗೊಂಡು, ವಿವಿಧೆಡೆ ರಸ್ತೆಯ ಮೇಲೆ ಪ್ರವಾಹ ಉಂಟಾಗಿ ರಸ್ತೆ ಸಂಚಾರ ಕಡಿತಗೊಂಡಿತ್ತು.

ಗಾಂಧಿ ಮೈದಾನ, ಕುರುಬಗೇರಿ ಸಂಪೂರ್ಣ ಜಲಾವೃತಗೊಂಡಿತ್ತು. ಸಂಜೆಯ ವೇಳೆಯಲ್ಲಿ ಪ್ರವಾಹ ಇಳಿಮುಖ ಆಗತೊಡಗಿದರೂ ಮತ್ತೆ ರಾತ್ರಿ ಸುರಿದ ಭಾರಿ ಮಳೆಯಿಂದ ನದಿಯಲ್ಲಿ ಪ್ರವಾಹ ಮತ್ತೆ ಏರತೊಡಗಿತು.

ರಸ್ತೆ, ದೂರವಾಣಿ ಸಂಪರ್ಕವಿಲ್ಲ:

ಶುಕ್ರವಾರವೂ ಮಳೆಗಾಳಿಯ ಆರ್ಭಟ ಮುಂದುವರಿಯಿತು. ಗಾಂಧಿಮೈದಾನ, ಕುರುಬಗೇರಿ ಜಲಾವೃತಗೊಂಡಿತ್ತು. ರಸ್ತೆಯ ಮೇಲೆ ಮರಗಳು ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ತಾಲೂಕಿನ ನೆಮ್ಮಾರು, ಕೆರೆಕಟ್ಟೆ, ಕಿಗ್ಗಾ, ಬೇಗಾರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮೊಬೈಲ್‌, ದೂರವಾಣಿ ಸಂಪರ್ಕವೂ ಸ್ಥಗಿತಗೊಂಡಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಡುತ್ತಿದ್ದಾರೆ. ಶುಕ್ರವಾರವೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಶುಕ್ರವಾರ ಸಂಜೆಯವರೆಗೂ ಮಳೆಗಾಳಿಯ ಆರ್ಭಟ, ತುಂಗಾನದಿಯಲ್ಲಿ ಪ್ರವಾಹ ಮುಂದುವರಿದಿತ್ತು.

ಚಿಕ್ಕಮಗಳೂರು: ಕುಸಿಯುವ ಸ್ಥಿತಿಯಲ್ಲಿ ರಾಜ್ಯ ಹೆದ್ದಾರಿ ಸೇತುವೆ

click me!