ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜ್ಯೋತಿ ಭತ್ತಕ್ಕೆ ಪರ್ಯಾಯ ತಳಿಗಳ ತಂತ್ರಜ್ಞಾನ ಪರಿಶೀಲನೆಯಡಿಯಲ್ಲಿ ಜ್ಯೋತಿಗೆ ಹೋಲುವ ನಾಲ್ಕು ಹೊಸ ತಳಿಗಳನ್ನು ಮುಂಗಾರಿನಲ್ಲಿ ಪ್ರಾಯೋಗಿಕವಾಗಿ ತರಬೇತಿ ನೀಡಿ ಬಿತ್ತನೆ ಬೀಜವನ್ನು ವಿತರಿಸಲಾಗಿತ್ತು.
ಸುತ್ತೂರು : ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜ್ಯೋತಿ ಭತ್ತಕ್ಕೆ ಪರ್ಯಾಯ ತಳಿಗಳ ತಂತ್ರಜ್ಞಾನ ಪರಿಶೀಲನೆಯಡಿಯಲ್ಲಿ ಜ್ಯೋತಿಗೆ ಹೋಲುವ ನಾಲ್ಕು ಹೊಸ ತಳಿಗಳನ್ನು ಮುಂಗಾರಿನಲ್ಲಿ ಪ್ರಾಯೋಗಿಕವಾಗಿ ತರಬೇತಿ ನೀಡಿ ಬಿತ್ತನೆ ಬೀಜವನ್ನು ವಿತರಿಸಲಾಗಿತ್ತು.
ಈ ತಳಿಗಳನ್ನು ಉತ್ತಮವಾಗಿ ಬೆಳೆಯಲಾಗಿದ್ದು, ಅದರ ಕ್ಷೇತ್ರೋತ್ಸವವನ್ನು ನಂಜನಗೂಡಿನ ಬಿಳಿಗೆರೆ ಗ್ರಾಮದ ಗುರುಲಿಂಗೇಗೌಡರವರ ಗದ್ದೆಯಲ್ಲಿ ಹಾಗೂ ವೇದಿಕೆ ಕಾರ್ಯಕ್ರಮವನ್ನು ಕೆವಿಕೆಯಲ್ಲಿ ಆಯೋಜಿಸಲಾಗಿತ್ತು.
ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ರೈತರು ಐದೂ ತಳಿಗಳನ್ನು ಪರಿಶೀಲಿಸಿದರು. ಕ್ಷೇತ್ರಭೇಟಿಗೆ ಆಗಮಿಸಿದ್ದ, ಸಹಾಯಕ ನಿರ್ದೇಶಕ ರವಿ ಮಾತನಾಡಿ, ರೈತರು ಉತ್ತಮವಾದ ರೋಗನಿರೋಧಕ ತಳಿಗಳನ್ನು ಬಳಸಬೇಕು, ಮುಂಜಾಗ್ರತ ಕ್ರಮವಾಗಿ ಬೀಜೋಪಚಾರ, ಔಷಧಿ ಸಿಂಪಡನೆ ಮಾಡುವುದರಿಂದ ರೋಗ ಹಾಗೂ ಕೀಟದ ಬಾಧೆ ತಡೆದು ಉತ್ತಮ ಇಳುವರಿ ಪಡೆಯಬಹುದೆಂದು ತಿಳಿಸಿದರು.
ವಿ.ಸಿ ಫಾರಂನಿಂದ ಆಗಮಿಸಿದ್ದ ಕಿರಿಯ ಭತ್ತದ ತಳಿ ವಿಜ್ಞಾನಿ ಡಾ.ಎಚ್. ಬಿ. ಮನೋಜ್ ಭತ್ತದ ವಿವಿಧ ರೋಗ ಹಾಗೂ ಅದನ್ನು ತಡೆಯಲು ವಹಿಸಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಿದರು. ವಿವಿಧ ತಳಿಗಳನ್ನು ವೀಕ್ಷಿಸಿದ ರೈತರು ಸಹ್ಯಾದ್ರಿ ಕೆಂಪು ಮುಕ್ತಿ ಅತ್ಯುತ್ತಮವಾಗಿದೆ, ಕೆಎಂಪಿ 220 ಹುಲ್ಲು ಹಾಗೂ ಕಾಳಿನ ಇಳುವರಿ ಉತ್ತಮವಾಗಿದೆ. ಕಾಳು ಒಂದು ಸುತ್ತು ಜ್ಯೋತಿಗಿಂತ ಚಿಕ್ಕದ್ದಾಗಿದೆ. ಕೇರಳದ ತಳಿಗಳಾದ ಶ್ರೇಯಸ್ ಹಾಗು ಪೌರ್ಣಮಿ ತಳಿಗಳ ಅವಧಿ ಹೆಚ್ಚು ಎಂದು ಅಭಿಪ್ರಾಯಪಟ್ಟರು.
ಈ ಭಾಗಕ್ಕೆ ರೋಗ ಕಡಿಮೆ ಇದ್ದು, ಹೆಚ್ಚು ತೆನೆ ಹೊಂದಿರುವ, ಜ್ಯೋತಿಗಿಂತ ಎತ್ತರದ ತಳಿಗಳಾದ ಸಹ್ಯಾದ್ರಿ ಕೆಂಪು ಮುಕ್ತಿ ಹಾಗು ಕೆಎಂಪಿ 220 ಸೂಕ್ತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಗತಿಪರ ರೈತರಾದ ಶಂಕರಗುರು, ಗುರುಲಿಂಗೇಗೌಡ, ವಸಂತಮ್ಮ, ವಿಜ್ಞಾನಿ ಡಾ. ಮನೋಜ್ ಹಾಗೂ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಎಚ್.ವಿ. ದಿವ್ಯಾ ಉದ್ಘಾಟಿಸಿದರು.
ಡಾ. ಮನೋಜ್ರವರು ಕೆಎಂಪಿ 220 ತಳಿಯ ವೈಶಿಷ್ಟ್ಯತೆಗಳ ಕುರಿತು ತಿಳಿಸಿದರು. ಇದೊಂದು ಅತ್ಯುತ್ತಮ ಪ್ರಯೋಗ ರೈತರ ತಾಕಿನಲ್ಲಿ ನಡೆದು ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಎಚ್.ವಿ. ದಿವ್ಯಾ ಮಾತನಾಡಿ, ರೈತರು ತಳಿಗಳ ಪರೀಕ್ಷೆಯನ್ನು ತುಂಬಾ ಆಸಕ್ತಿಯಿಂದ ಮಾಡಿರುವುದಾಗಿ ತಿಳಿಸಿದ್ದಾರೆ. ಜ್ಯೋತಿ ಭತ್ತಕ್ಕೆ ಪರ್ಯಾಯವಾಗಿ ಬಿಡುಗಡೆಯಾಗಿರುವ ನೂತನ ಕೆಂಪು ಭತ್ತದ ತಳಿಗಳಾದ ಕೃಷಿ ಮಹಾವಿದ್ಯಾಲಯದ ಕೆಎಮ್ಪಿ 220, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ್ಯಾದ್ರಿ ಕೆಂಪು ಮುಕ್ತಿ, ಕೇರಳ ಕೃಷಿ ವಿಶ್ವವಿದ್ಯಾಲಯದ ಶ್ರೇಯಸ್ ಮತ್ತು ಪೌರ್ಣಮಿ ತಳಿಗಳ ಗುಣಲಕ್ಷಣಗಳನ್ನು ರೈತರಿಗೆ ವಿವರಿಸಿದರು.
ಡಾ. ವೈ.ಪಿ. ಪ್ರಸಾದ್ ನಿರೂಪಿಸಿದರು. ಕೆವಿಕೆ ವಿಜ್ಞಾನಿ ಶಾಮರಾಜ್, ಶಿಲ್ಪಾ ಹಾಗೂ ಸುತ್ತಮುತ್ತಲಿನ 70ಕ್ಕೂ ಹೆಚ್ಚು ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.