ಬಾಗಲಕೋಟೆ: ಶಾಲೆ ಪಕ್ಕದಲ್ಲೇ ತ್ಯಾಜ್ಯ ಘಟಕ, ಸಾಂಕ್ರಾಮಿಕ ರೋಗದ ಭೀತಿ..!

By Kannadaprabha NewsFirst Published Aug 4, 2023, 9:01 PM IST
Highlights

ಬನಹಟ್ಟಿ ಗಾಂಧಿ ವೃತ್ತದ ಬಳಿ ಇರುವ ಸರ್ಕಾರಿ ಶಾಲೆ ಆವರಣಕ್ಕೆ ಹೊಂದಿಕೊಂಡಂತೆ ಇರುವ ಕಾಂಪೌಂಡ್‌ ಪಕ್ಕದಲ್ಲೇ ರಾಶಿ ರಾಶಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ ಸ್ಥಳೀಯರು. ಹೀಗಾಗಿ ಪಟ್ಟಣದ ಮಧ್ಯೆ ಅದೂ ಶಾಲೆ ಪಕ್ಕದಲ್ಲೇ ಒಂದು ತ್ಯಾಜ್ಯ ಸಂಗ್ರಹ ಮತ್ತು ಸಾಂಕ್ರಾಮಿಕ ರೋಗ ಹರಡುವ ಕೇಂದ್ರವೇ ನಿರ್ಮಾಣವಾದಂತಿದೆ.

ರಬಕವಿ-ಬನಹಟ್ಟಿ(ಆ.04): ಇಲ್ಲಿ ಮಕ್ಕಳು ನಲಿ-ಕಲಿಯುವ ಶಾಲೆ ಕಾಂಪೌಂಡ್‌ ಬಳಿಯೇ ಇದೆ ತ್ಯಾಜ್ಯ ಸಂಗ್ರಹ ಕೇಂದ್ರ! ಪರಿಣಾಮ ನಾನಾ ಸಾಂಕ್ರಾಮಿಕ ರೋಗಗಳು ಎಳೆ ಮಕ್ಕಳನ್ನು ಅಂಟಿಕೊಳ್ಳುವ ಆತಂಕ ಎದುರಾಗಿದೆ. ಬನಹಟ್ಟಿ ಗಾಂಧಿ ವೃತ್ತದ ಬಳಿ ಇರುವ ಸರ್ಕಾರಿ ಶಾಲೆ ಆವರಣಕ್ಕೆ ಹೊಂದಿಕೊಂಡಂತೆ ಇರುವ ಕಾಂಪೌಂಡ್‌ ಪಕ್ಕದಲ್ಲೇ ರಾಶಿ ರಾಶಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ ಸ್ಥಳೀಯರು. ಹೀಗಾಗಿ ಪಟ್ಟಣದ ಮಧ್ಯೆ ಅದೂ ಶಾಲೆ ಪಕ್ಕದಲ್ಲೇ ಒಂದು ತ್ಯಾಜ್ಯ ಸಂಗ್ರಹ ಮತ್ತು ಸಾಂಕ್ರಾಮಿಕ ರೋಗ ಹರಡುವ ಕೇಂದ್ರವೇ ನಿರ್ಮಾಣವಾದಂತಿದೆ.

ನಗರಸಭೆ ನಿರ್ಲಕ್ಷ್ಯ ಮತ್ತು ಸಾರ್ವಜನಿಕರಲ್ಲಿ ಅರಿವು ಕೊರತೆಯಿಂದಾಗಿ ಈ ಹಿರಿಯ ಪ್ರಾಥಮಿಕ ಶಾಲೆ ಆವರಣದ ಬಳಿಯೇ ಬಯಲು ಶೌಚ, ತ್ಯಾಜ್ಯ ಸಂಗ್ರಹ ಘಟಕವೇ ನಿರ್ಮಾಣವಾಗಿ ಬಿಟ್ಟಿದೆ. ಅಕ್ಕಪಕ್ಕದ ಮನೆಗಳವರು ಹಾಗೂ ಮಾರುಕಟ್ಟೆಯಲ್ಲಿ ಸಂತಿ (ತರಕಾರಿ ಮಾರಾಟ) ಹಚ್ಚುವವರು ಅಳಿದುಳಿದ ತ್ಯಾಜ್ಯವನ್ನೆಲ್ಲ ಇಲ್ಲೇ ತಂದು ಸುರಿದು ಹೋಗುತ್ತಿದ್ದಾರೆ.

ಬಾಗಲಕೋಟೆ: ದೀನ ದಲಿತರ ಧ್ವನಿ ಸಿಎಂ ಸಿದ್ದರಾಮಯ್ಯ, ಎಚ್‌.ವೈ.ಮೇಟಿ

ರಾಶಿ ರಾಶಿ ಬಿದ್ದ ಕೊಳೆತ ತರಕಾರಿಯನ್ನು ಜಾನುವಾರು ತಿಂದು ಹೋಗುತ್ತಿದ್ದರೆ, ಹಂದಿ ಮತ್ತು ಬೀದಿ ನಾಯಿಗಳು ತ್ಯಾಜ್ಯದಲ್ಲೇ ಹೊರಳಾಡಿ ಚೆಲ್ಲಾಪಿಲ್ಲಿ ಮಾಡುತ್ತಿವೆ. ವಿದ್ಯಾರ್ಥಿಗಳು ಈ ಕಸದ ರಾಶಿಯಲ್ಲೇ ಹೆಜ್ಜೆ ಹಾಕುವಂತಾಗಿದೆ. ಈ ತ್ಯಾಜ್ಯದಿಂದ ನಾನಾ ಕ್ರಮಿ-ಕೀಟ, ಸೊಳ್ಳೆಗಳು ಹೆಚ್ಚಿದ್ದು, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಶಾಲೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಬನಹಟ್ಟಿ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹಾಗು ಮಾರುಕಟ್ಟೆಯವರು ಸಂಜೆ ವೇಳೆ ತರಕಾರಿ ತ್ಯಾಜ್ಯವನ್ನೆಲ್ಲ ಮೂಟೆಗಳಲ್ಲಿ ತುಂಬಿಕೊಂಡು ತಂದು ಶಾಲಾ ಗೋಡೆ ಬದಿಗೆ ತಂದು ಸುರಿಯುತ್ತಿದ್ದಾರೆ. ಶಾಲೆ ಗೋಡೆ, ಕಾಂಪೌಂಡ್‌ಗೆ ಹೊಂದಿಕೊಂಡೇ ತ್ಯಾಜ್ಯ ಸುರಿಯುವುದರಿಂದ ಕೊಠಡಿಗಳಲ್ಲಿ ದುರ್ನಾತ ಬೀರುತ್ತಿದೆ. ವಿದ್ಯಾರ್ಥಿಗಳು ಕಿಟಕಿ, ಬಾಗಿಲು ಮುಚ್ಚಿಕೊಂಡು ಕುಳಿತುಕೊಳ್ಳುತ್ತಿದ್ದಾರೆ. ಈ ಶಾಲೆ ಅಕ್ಕಪಕ್ಕದಲ್ಲೇ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೇ ಹೆಜ್ಜೆ ಹಾಕುವಂತಾಗಿದೆ.

ನಗರಸಭೆ ವಿಫಲ:

ಪ್ರಧಾನ ಮಂತ್ರಿ ಸ್ವಚ್ಛತಾ ಅಭಿಯಾನ, ನಗರಭೆ ಕೈಗೊಳ್ಳುವ ಸ್ವಚ್ಛತಾ ಆಂದೋಲನ, ಮಕ್ಕಳ ಜಾಗೃತಿ ಅಭಿಯಾನ ಯಾವುದೂ ಇಲ್ಲಿ ಪ್ರಯೋಜನ ಬೀರಿಲ್ಲ. ಇಲ್ಲಿ ತ್ಯಾಜ್ಯ ಹಾಕದಂತೆ ಕ್ರಮ ಕೈಗೊಳ್ಳುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ. ನಗರಸಭೆ ವಿರುದ್ಧ ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಇಲ್ಲಿ ತ್ಯಾಜ್ಯ ಹಾಕದಂತೆ ನಗರಸಭೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆಯೇ ಕಾದು ನೋಡಬೇಕು.

ಮದ್ಯದ ದರ ಹೆಚ್ಚಳ: ಕುಡುಕರು ತಿರುಗಿಬಿದ್ರೆ ಕಾಂಗ್ರೆಸ್ ಸರ್ಕಾರ ಉರುಳುತ್ತೆ: ಕಾರಜೋಳ ವಾಗ್ದಾಳಿ

ಶಾಲೆಯೆಂಬುದು ಜ್ಞಾನದೇಗುಲವಿದ್ದಂತೆ. ದೇಶದ ಭವಿಷ್ಯದ ಪ್ರಜೆಗಳು ರೂಪಿತವಾಗುವ ಇಲ್ಲಿ ಶಾಲೆ, ಮನೆ, ದೇವಾಲಯ ಬಳಿ ನೈರ್ಮಲ್ಯ ಕಾಪಾಡಬೇಕು. ಜನರೂ ಅರಿಯಬೇಕು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಶಾಲೆ ಸಿಬ್ಬಂದಿ ಎಸ್‌.ಎಸ್‌.ಹೊಂಬರಡೆ ಹೇಳಿದ್ದಾರೆ. 

ರಸ್ತೆಯಲ್ಲಿ ತರಕಾರಿ ತ್ಯಾಜ್ಯ ಬಿಸಾಡಿದರೆ ನಗರಸಭೆ ದಂಡ ಹಾಕುತ್ತದೆಂದು ಹೆದರಿ ರಾತ್ರೋ ರಾತ್ರಿ ಶಾಲೆ ಪಕ್ಕದ ಸ್ಥಳದಲ್ಲಿ ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ಗಮನಕ್ಕೆ ಬಂದಿಲ್ಲ. ಸ್ಥಳ ವೀಕ್ಷಿಸಿ ಅಲ್ಲಿಯ ಕಸ ಎತ್ತುವಳಿಗೆ ಕ್ರಮ ವಹಿಸಲಾಗುವದು ಎಂದು ಪೌರಾಯುಕ್ತ ಜಗದೀಶ ಇಟ್ಟಿ ತಿಳಿಸಿದ್ದಾರೆ.  

click me!