ಈಡಿಗ ಸಮುದಾಯವನ್ನು ಎಸ್ಟಿಗೆ ಸೇರಿಸಲು ಆಗ್ರಹಿಸಿ 10 ರಂದು ಉಪವಾಸ ಸತ್ಯಾಗ್ರಹ

By Kannadaprabha NewsFirst Published Dec 3, 2023, 10:09 AM IST
Highlights

ಈಡಿಗ ಸಮುದಾಯವನ್ನು ಎಸ್ಟಿಗೆ ಸೇರಿಸುವುದು ಸೇರಿದಂತೆ 16 ಬೇಡಿಕೆಗಳ ಈಡೇರಿಕೆಗಾಗಿ ಡಿ.10 ರಂದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ನಾರಾಯಣ ಗುರುಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

 ಮೈಸೂರು ;  ಈಡಿಗ ಸಮುದಾಯವನ್ನು ಎಸ್ಟಿಗೆ ಸೇರಿಸುವುದು ಸೇರಿದಂತೆ 16 ಬೇಡಿಕೆಗಳ ಈಡೇರಿಕೆಗಾಗಿ ಡಿ.10 ರಂದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ನಾರಾಯಣ ಗುರುಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಬ್ರಹ್ಮಶ್ರೀ ಈಡಿಗ ಅಭಿವೃದ್ಧಿ ನಿಗಮಕ್ಕೆ ಕೂಡಲೇ 500 ಕೋಟಿ ರೂ. ಬಿಡುಗಡೆ ಮಾಡಬೇಕು. ಹಿಂದಿನ ಈಡಿಗ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕಾಗಿ ಘೋಷಣೆ ಮಾಡಿದ 25 ಲಕ್ಷ ರೂ. ಉಪಯೋಗಿಸಿ, ಕೂಡಲೇ ಕುಲಶಾಸ್ತ್ರ ಅದ್ಯಯನ ಮುಗಿಸಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕುಲಕಸುಬು ಕಳೆದುಕೊಂಡ ಈ ಸಮುದಾಯಕ್ಕೆ ಪ್ರಮುಖವಾಗಿ ಉತ್ತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮರಳಿ ಕಸುಬು ನೀಡಬೇಕು, ಇಲ್ಲವೇ ಕಸುಬು ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ರಾಜ್ಯದಲ್ಲಿ , ಬಿಲ್ಲವ, ನಾಮಧಾರಿ ದೀವರ ಸಮಾಜದಲ್ಲಿ ಅತಿ ನಿರ್ಗತಿಕರಾಗಿರುವವರಿಗೆ ಮನೆ, ನಿವೇಶನಗಳಿಲ್ಲದ ಕುಟುಂಬಗಳಿಗೆ ಯಾವುದಾದರೂ ಯೋಜನೆಯಲ್ಲಿ 25 ಸಾವಿರ ಮನೆಗಳನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಒಂದು ವೇಳೆ ಇವುಗಳನ್ನು ಸರ್ಕಾರ ಈಡೇರಿಸದಿದ್ದರೆ ಮತ್ತೊಮ್ಮೆ ರಾಜ್ಯ ಮಟ್ಟದ ಪಾದಯಾತ್ರೆ ಹಮ್ಮಿಕೊಳ್ಳಬೇಕಾಗುತ್ತದೆ. ಈ ಬೇಡಿಕ ಇವುಗಳನ್ನು ಸರ್ಕಾರ ಈಡೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ವೇಳೆ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಮುದಾಯಕ್ಕೆ ಸಚಿವ ಮಧು ಬಂಗಾರಪ್ಪ ಅವರ ಕೊಡುಗೆಯಾದರೂ ಏನು? ಬಿ.ಕೆ. ಹರಿಪ್ರಸಾದ್ ಅವರ ಪರ ತಾವು ನಿಂತಿದ್ದ ಕಾರಣ ತಮ್ಮನ್ನು ವಿರೋಧಿಸಿದ್ದಾರೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಈಡಿಗ ಮಹಾ ಮಂಡಳಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ವಾಸು, ಪಾಲಿಕೆ ಮಾಜಿ ಸದಸ್ಯ ಧ್ರುವರಾಜ್ ಇದ್ದರು.

click me!