
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.21): ಉತ್ಪನ್ನಗಳಿಗೆ ತಾವೇ ದರ ನಿಗದಿ ಮಾಡಿಕೊಳ್ಳುವಂತಾಗಬೇಕು. ಅಲ್ಲಿಯವರೆಗೂ ಉದ್ಧಾರ ಆಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಭತ್ತ ಬೆಳೆದ ರೈತರು ಭತ್ತಕ್ಕೆ ತಾವೇ ದರ ನಿಗದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅಕ್ಕಿಯನ್ನು ತಾವೇ ಮಾಡಿಸಿ, ಮಾರುವ ಮೂಲಕ ದರ ಕುಸಿತದ ನಡುವೆಯೂ ಎದ್ದು ನಿಂತಿದ್ದಾರೆ. ಬಿದ್ದ ಮಾರುಕಟ್ಟೆ ದರದ ನಡುವೆಯೂ ಗೆದ್ದು ಬೀಗಿದ್ದಾರೆ.
ಹೌದು, ಪ್ರಸಕ್ತ ವರ್ಷ ರೈತರು ಭತ್ತ ಇನ್ನೇನು ಮಾರುಕಟ್ಟೆಗೆ ಬರುವಂತಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಭತ್ತದ ದರ ಪಾತಾಳಕ್ಕೆ ಕುಸಿಯಿತು. ಆ ದರಕ್ಕೆ ಮಾರಿದ್ದರೆ ಕೃಷಿಗೆ ಮಾಡಿದ ಖರ್ಚು ಕೂಡ ಬರುತ್ತಿಲ್ಲ. ಆದರೆ, ಭತ್ತದ ದರ ಬಿದ್ದಿದ್ದರೂ ಅಕ್ಕಿಯ ದರ ಮಾತ್ರ ಕುಸಿದಿರಲಿಲ್ಲ (ದಲ್ಲಾಳಿಗಳ ಕೈಚಳಕದಿಂದ). ಹೀಗಾಗಿ, ರೈತರು ನಾವ್ಯಾಕೆ ಭತ್ತ ಮಾರಿ, ಕೈ ಸುಟ್ಟುಕೊಳ್ಳಬೇಕು ಎಂದು ತಾವೇ ಅಕ್ಕಿಯನ್ನು ಮಾಡಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಭತ್ತ ಬೆಳೆದ ರೈತರಿಗೂ ಲಾಭವಾಗಿದೆ ಮತ್ತು ಗ್ರಾಹಕರಿಗೂ ಲಾಭವಾಗಿದೆ. ಅಷ್ಟೇ ಅಲ್ಲ, ಗ್ರಾಹಕರಿಗೆ ಕಲೆಬೆರಕೆ ಇಲ್ಲದ ಗುಣಮಟ್ಟದ ಅಕ್ಕಿ ಕಡಿಮೆ ದರದಲ್ಲಿ ಸಿಕ್ಕಿದೆ.
'ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್ ಮಾರ್ಟಮ್ ಮಾಡ್ತೀರಿ..' ಗವಿಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದು ಯಾಕೆ?
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ರೈತರು ಇಂಥದ್ದೊಂದು ಮಾರ್ಗ ಕಂಡುಕೊಂಡು ಮಾರುಕಟ್ಟೆಯ ದರ ಕುಸಿತದ ಪೆಟ್ಟಿನಿಂದ ಪಾರಾಗಿದ್ದಾರೆ. ಲಕ್ಷಾಂತರ ಕ್ವಿಂಟಲ್ ಅಕ್ಕಿಯನ್ನು ಈ ಮಾದರಿಯಲ್ಲಿಯೇ ಮಾರಿ, ನಷ್ಟದಿಂದ ಆಗುತ್ತಿದ್ದ ಹಾನಿಯನ್ನು ತಪ್ಪಿಸಿಕೊಂಡಿದ್ದು ಅಲ್ಲದೆ ಭರ್ಜರಿ ಲಾಭ ಮಾಡಿಕೊಂಡಿದ್ದಾರೆ.
ಪ್ರತಿ ಬಾರಿಯೂ ರೈತರ ಭತ್ತ ಮಾರುಕಟ್ಟೆಗೆ ಬರುವ ವೇಳೆಗೆ ಭತ್ತದ ದರ ಬರೋಬ್ಬರಿ ₹500\-\B800 ವರೆಗೆ ಕುಸಿಯುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ ಅಕ್ಕಿಯ ದರ ಮಾತ್ರ ಕುಸಿಯುತ್ತಿರಲಿಲ್ಲ. ಮಾರುಕಟ್ಟೆಯಲ್ಲಿ ಭತ್ತದ ದರವನ್ನು ಪಾತಾಳಕ್ಕೆ ದೂಡಿ, ಖರೀದಿಸುತ್ತಿದ್ದ ದಲ್ಲಾಳಿಗಳು ಅದನ್ನು ಮಿಲ್ಲಿನಲ್ಲಿ ಅಕ್ಕಿ ಮಾಡಿಸಿ, ಮಾರಿ ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದರು. ಮಹಡಿ ಮೇಲೆ ಮಹಡಿ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ, ನಾಲ್ಕು ತಿಂಗಳು ಬೆವರು ಸುರಿಸಿ, ಬೆಳೆದ ರೈತರು ಮತ್ತೆ ನಷ್ಟ ಅನುಭವಿಸಿ, ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದರು. ಆದರೆ, ಈ ವರ್ಷ ತಾವೇ ಮಾರುಕಟ್ಟೆ ಮಾಡಿಕೊಂಡಿರುವ ರೈತರು ಗೆದ್ದು ಬೀಗುತ್ತಿದ್ದಾರೆ. ಗ್ರಾಹಕರಿಗೂ ಕಡಿಮೆ ದರದಲ್ಲಿ ಅಕ್ಕಿ ಪೂರೈಕೆ ಮಾಡುತ್ತಿದ್ದಾರೆ.
ಏನಿದು ರಹಸ್ಯ?
ಪ್ರಸಕ್ತ ವರ್ಷ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭತ್ತದ ದರ ಕುಸಿದಿದ್ದರಿಂದ ರೈತರು ಧೃತಿಗೆಡಲಿಲ್ಲ. ಆದರೆ, ತಾವೇ ಅಕ್ಕಿ ಮಾಡಿಸಿ, ತಾವೇ ದರ ನಿಗದಿ ಮಾಡಿ ಮನೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ.
ಕ್ವಿಂಟಲ್ ಗೆ ₹4000-4100, 4200ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ 75 ಕೆಜಿ ಚೀಲದ ಭತ್ತಕ್ಕೆ ₹2000 ಆಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ 75 ಕೆಜಿ ಸೋನಾ ಮಸೂರಿ ಭತ್ತದ ದರ ₹1500ರಿಂದ 1600ಕ್ಕೆ ಕುಸಿದಿತ್ತು. (ಈಗ 1900 ಆಗಿದೆ) ಮಾರುಕಟ್ಟೆಯ ಮರ್ಮ ತಿಳಿದಿರುವ ರೈತರು 25 ಕೆಜಿ ಪಾಕೇಟ್ ಮಾಡಿಸಿ, ₹1000ಯಂತೆ (ಕ್ವಿಂಟಲ್ ಗೆ ₹4 ಸಾವಿರ) ಮಾರಾಟ ಮಾಡುತ್ತಿದ್ದಾರೆ. ಇದೇ ಅಕ್ಕಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ₹4800-5 ಸಾವಿರ ಇದೆ. ಗ್ರಾಹಕರಿಗೆ ಬರೋಬ್ಬರಿ ಕ್ವಿಂಟಲ್ ಗೆ ₹800-1 ಸಾವಿರ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲ, ರೈತರಿಗೂ ಪ್ರತಿ ಕ್ವಿಂಟಲ್ ಗೆ ₹500- 800 ಹೆಚ್ಚುವರಿ ಲಾಭವಾಗಿದೆ.
ಗುಣಮಟ್ಟದ ಅಕ್ಕಿ:
ಮಾರುಕಟ್ಟೆಯಲ್ಲಿ ದೊರೆಯುವ ಅಕ್ಕಿಯಲ್ಲಿ ನೂರೆಂಟು ನಮೂನೆಯ ಕಳೆಪೆ ಅಕ್ಕಿಯನ್ನು ಸಹ ಸೇರಿಸಿರುತ್ತಾರೆ. ಅವುಗಳನ್ನು ಪಾಲಿಶ್ ಮಾಡುವುದರಿಂದ ಅದರ ಸತ್ವವೇ ಇರುವುದಿಲ್ಲ. ಆದರೆ, ರೈತರು ಇದ್ಯಾವುದಕ್ಕೂ ಅವಕಾಶ ನೀಡದೆ ಗುಣಮಟ್ಟದ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ.
ಕೊಪ್ಪಳ: ಗವಿಸಿದ್ದೇಶ್ವರ ರಥೋತ್ಸವದಲ್ಲಿ ಪಲ್ಲಕ್ಕಿ ಹೊತ್ತ ವಿಜಯೇಂದ್ರ!
ನಾನು 400 ಚೀಲ ಭತ್ತವನ್ನು ಅಕ್ಕಿ ಮಾಡಿಸಿಯೇ ಮಾರಿದ್ದೇನೆ, ಮನೆಗೆ ಬಂದು ತೆಗೆದುಕೊಂಡು ಹೋಗುತ್ತಾರೆ. ನಾನು ಸೇರಿದಂತೆ ನಮ್ಮೂರಲ್ಲಿ ಬಹುತೇಕ ರೈತರು ಸೋನಾಮಸೂರಿ ಅಕ್ಕಿಯನ್ನು ಇದೇ ರೀತಿ ಮಾರಾಟ ಮಾಡಿ, ಲಾಭ ಮಾಡಿಕೊಂಡಿದ್ದೇವೆ ಮತ್ತು ಗ್ರಾಹಕರಿಗೂ ಲಾಭವಾಗುತ್ತಿದೆ ಎಂದು ಹಿಟ್ನಾಳ ಗ್ರಾಮದ ರೈತ ಸೋಮಶೇಖರ ಬಸಪ್ಪ ಕುಯ್ಯಪ್ಪನವರ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿದಿದ್ದರಿಂದ ಬಹುತೇಕ ರೈತರು ಈಗ ತಾವೇ ಅಕ್ಕಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ಲಾಭವಾಗುತ್ತಿದೆ. ಗ್ರಾಹಕರಿಗೂ ಇದರಿಂದ ಹೆಚ್ಚು ಅನುಕೂಲವಾಗಿದ್ದು, ದಲ್ಲಾಳಿಗಳ ಶೋಷಣೆಯಿಂದ ಪಾರಾಗುತ್ತಿದ್ದಾರೆ ಎಂದು ರೈತ ಮುಖಂಡ ಉಮೇಶ ಪಲ್ಲೇದ ತಿಳಿಸಿದ್ದಾರೆ.