ಬಲವಂತದ ಭೂಸ್ವಾಧೀನಕ್ಕೆ ಕೆಐಎಡಿಬಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ!

By Govindaraj SFirst Published Jun 25, 2022, 1:30 AM IST
Highlights

ಇಪ್ಪತ್ತೇಳು ವರ್ಷಗಳ ಹಿಂದೆ ಕೆಐಎಡಿಬಿ ಅಧಿಕಾರಿಗಳು ಕೈಗಾರಿಕೆಗಳ ಅಭಿವೃದ್ಧಿಗೆ ಫಲವತ್ತಾದ  ಭೂ ಸ್ವಾಧೀನಕ್ಕೆ ಮುಂದಾಗಿತ್ತು. ಆದರೆ ರೈತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು. 

ವರದಿ: ಟಿ.ಮಂಜುನಾಥ್, ಹೆಬ್ಬಗೋಡಿ

ಆನೇಕಲ್ (ಜೂ.25): ಇಪ್ಪತ್ತೇಳು ವರ್ಷಗಳ ಹಿಂದೆ ಕೆಐಎಡಿಬಿ ಅಧಿಕಾರಿಗಳು ಕೈಗಾರಿಕೆಗಳ ಅಭಿವೃದ್ಧಿಗೆ ಫಲವತ್ತಾದ  ಭೂ ಸ್ವಾಧೀನಕ್ಕೆ ಮುಂದಾಗಿತ್ತು. ಆದರೆ ರೈತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು. ಅಂದಿನಿಂದ ರೈತರು ತಮ್ಮ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ರು. ಆದ್ರೆ ಇದೀಗ ಏಕಾಏಕಿ ಕೆಐಎಡಿಬಿ ಅಧಿಕಾರಿಗಳು ಪೊಲೀಸರ ಸರ್ಪಗಾವಲಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿದ್ದು, ಬಲವಂತವಾಗಿ ರೈತರ ಜಮೀನುಗಳನ್ನು ಕೆಐಎಡಿಬಿ ಭೂ ಸ್ವಾಧೀನಪಡಿಸಿಕೊಂಡಿಸಿಕೊಳ್ಳಲು ಮುಂದಾಗಿದೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಇಗ್ಗಲೂರು ಗ್ರಾಮದಲ್ಲಿ ಇಂದು ಕೆಐಎಡಿಬಿ ಅಧಿಕಾರಿಗಳು ಬಲವಂತವಾಗಿ ಪೊಲೀಸ್ ಬಲಪ್ರಯೋಗ ಮಾಡಿ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ. ಕೆಐಎಡಿಬಿ ಅಧಿಕಾರಿಗಳ ಬಲವಂತದ ಭೂ ಸ್ವಾಧೀನಕ್ಕೆ ಅಡ್ಡಿಪಡಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮಾತ್ರವಲ್ಲದೆ ರೈತರನ್ನು ಠಾಣೆಯಲ್ಲಿ ಕೂರಿಸಿ ಬಂಡವಾಳಶಾಹಿಗಳಿಗೆ ರೈತರ ಜಮೀನುಗಳನ್ನು ಕೆಐಎಡಿಬಿ ಅಧಿಕಾರಿಗಳು ಸ್ವಾಧೀನಕ್ಕೆ ನೀಡಿದ್ದಾರೆ. 26 ವರ್ಷಗಳ ಹಿಂದೆ  ಇಗ್ಗಲೂರು ಗ್ರಾಮದ ಸರ್ವೇ ನಂ 84/3  ರಲ್ಲಿ 15 ಎಕರೆ ಜಮೀನಿನಲ್ಲಿ  11 ಎಕರೆ ಜಮೀನನ್ನು ಭೂ ಸ್ವಾಧೀನಕ್ಕೆ ಪಡೆಯಲಾಗಿತ್ತು. 

ಪತಿಯೊಂದಿಗೆ ಅಕ್ರಮ ಸಂಬಂಧ ಆರೋಪ: ಮಹಿಳೆ ವಿರುದ್ಧ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದು

ಉಳಿಕೆ ನಾಲ್ಕು ಎಕರೆ ಮಾತ್ರ ಉಳಿದುಕೊಂಡಿದ್ದು, ಆಗಲೇ ರೈತರು ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರೈತರ ವಿರೋಧದ ಬಳಿಕವು ಉಳಿದ ಮೂರು ಎಕರೆಯನ್ನು ಅಕ್ರಮವಾಗಿ ಭೂ ಸ್ವಾಧೀನಕ್ಕೆ ಅದೇಶಿಸಲಾಗಿದೆ. ಕೆಐಎಡಿಬಿ ಅಧಿಕಾರಿಗಳು ಕಾನೂನು ಪಾಲನೆ ಮಾಡುತ್ತಿಲ್ಲ. ಆದರೂ ರೈತರ ಮೇಲೆ ಒತ್ತಾಯಪೂರ್ವಕವಾಗಿ ಕಾನೂನು ಜಾರಿಗೆ ಮುಂದಾಗಿದ್ದಾರೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ನೀರಾವರಿ ಜಮೀನುಗಳನ್ನು ಮತ್ತು ರೈತರ ಒಪ್ಪಿಗೆ ಇಲ್ಲದೆ ಭೂ ಸ್ವಾಧೀನ ಮಾಡುವಂತಿಲ್ಲ. 

ಆದ್ರೆ ಇಪ್ಪತ್ತಾರು ವರ್ಷಗಳ ಹಿಂದೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿದ ಕೆಐಎಡಿಬಿ ಅಧಿಕಾರಿಗಳು ಇಂದು ನ್ಯಾಯಾಂಗದ ನಿಂದನೆ ನೆಪವೊಡ್ಡಿ ಭೂ ಸ್ವಾಧೀನಕ್ಕೆ ಆಗಮಿಸಿದ್ದಾರೆ.  ಭೂ ಸ್ವಾಧೀನಕ್ಕೆ ಉದ್ದೇಶಿಸಿರುವ ಜಮೀನುಗಳನ್ನು ನಂಬಿಕೊಂಡು ಸುಮಾರು ಅರವತ್ತು ಕುಟುಂಬಗಳು ಜೀವನ ಕಟ್ಟಿಕೊಂಡಿವೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಆದೇಶ ಪಡೆಯಲಾಗಿದೆ. ನಾವು ಒತ್ತುವರಿದಾರರಲ್ಲ. ನಾವು ಮೂಲ ಜಮೀನು ಮಾಲೀಕರು. ನಮ್ಮನ್ನು ಒತ್ತುವರಿದಾರರು ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ನಾವು ಯಾವುದೇ ಕಾರಣಕ್ಕೂ ಕೆಐಎಡಿಬಿ ಅಧಿಕಾರಿಗಳಿಗೆ ಮಣಿಯುವ ಪ್ರಶ್ನೆ ಇಲ್ಲ. 

ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ: ಎಸ್ಕೇಪ್ ಆಗ ಹೊರಟ ಆರೋಪಿ ಕಾಲಿಗೆ ಗುಂಡೇಟು!

ಸರ್ಕಾರ ರೈತರ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೆಐಎಡಿಬಿ ಅಧಿಕಾರಿಗಳ ಪ್ರಯತ್ನಕ್ಕೆ ಹಲವು ಬಾರಿ ರೈತರು ತಡೆಯೊಡ್ಡುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಈ ಬಾರಿ ಕೆಐಎಡಿಬಿ ಅಧಿಕಾರಿಗಳು ಯಾರಿಗೂ ಮಾಹಿತಿ ನೀಡದೆ ಪೊಲೀಸರ ಪಡೆ ಕಟ್ಟಿಕೊಂಡು ರೈತರನ್ನು ಬಲವಂತವಾಗಿ ಜಮೀನುಗಳಿಂದ ಹೊರ ಹಾಕಲು ಮುಂದಾಗಿದ್ದಾರೆ. ಜೊತೆಗೆ ರೈತರ ಮೇಲೆ ಪ್ರಕರಣ ಸಹ ದಾಖಲು ಮಾಡಿದ್ದು, ಮುಂದಿನ ದಿನಗಳಲ್ಲಿ ನೊಂದ ರೈತರ ಹೋರಾಟ ಯಾವ ಅಯಾಮ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

click me!