ಮಹಾಲಿಂಗಪುರದಲ್ಲಿ ಸಿಎಂಗೆ ಮನವಿ ಕೊಡಲು ಹೋದ ರೈತರ ಬಂಧನ

By Web DeskFirst Published Oct 5, 2019, 10:56 AM IST
Highlights

ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಕೊಡಬೇಕೆಂದು ಸಿಎಂ ಕಾರು ತಡೆಯಲು ಯತ್ನಿಸಿದ ಸಂತ್ರಸ್ತ ರೈತರನ್ನು ಬಂಧಿಸಿ ಬಿಡುಗಡೆ ಮಾಡಿದ ಪೊಲೀಸರು| ಬೆಳಗಾವಿಯಿಂದ ಮಹಾಲಿಂಗಪುರ ಮಾರ್ಗವಾಗಿ ಬಾಗಲಕೋಟೆಗೆ ಹೊರಟ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಸಮಸ್ಯೆ, ನೇಕಾರರ ಹಾಗೂ ಇನ್ನೂ ಹಲವಾರು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವಂತೆ ಮನವಿಯನ್ನು ಕೊಡಲು ರೈತರು ಸ್ಥಳೀಯ ರಾಣಿ ಚನ್ನಮ್ಮ ವೃತ್ತದಲ್ಲಿ ನಿಂತು ಮುಖ್ಯಮಂತ್ರಿಗಳ ಬರುವಿಕೆಗೆ ಕಾಯ್ದು ಸಿಎಂ ಕಾರು ತಡೆದರು|  

ಮಹಾಲಿಂಗಪುರ(ಅ.5): ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಕೊಡಬೇಕೆಂದು ಸಿಎಂ ಕಾರು ತಡೆಯಲು ಯತ್ನಿಸಿದ ಸಂತ್ರಸ್ತ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ಘಟನೆ ಶುಕ್ರವಾರ ಪಟ್ಟಣದ ಚೆನ್ಮಮ್ಮ ವೃತ್ತದಲ್ಲಿ ನಡೆದಿದೆ.

ಬೆಳಗಾವಿಯಿಂದ ಮಹಾಲಿಂಗಪುರ ಮಾರ್ಗವಾಗಿ ಬಾಗಲಕೋಟೆಗೆ ಹೊರಟ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಸಮಸ್ಯೆ, ನೇಕಾರರ ಹಾಗೂ ಇನ್ನೂ ಹಲವಾರು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವಂತೆ ಮನವಿಯನ್ನು ಕೊಡಲು ರೈತರು ಸ್ಥಳೀಯ ರಾಣಿ ಚನ್ನಮ್ಮ ವೃತ್ತದಲ್ಲಿ ನಿಂತು ಮುಖ್ಯಮಂತ್ರಿಗಳ ಬರುವಿಕೆಗೆ ಕಾಯ್ದು ಸಿಎಂ ಕಾರು ತಡೆದರು. ಆದರೂ ಮುಖ್ಯಮಂತ್ರಿಗಳಿಗೆ ಮನವಿ ಕೊಡುತ್ತೇವೆ ಎಂದು ರಸ್ತೆ ಮೇಲೆ ಕುಳಿತಾಗ ಪೊಲೀಸರು ಅವರನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪೊಲೀಸ್‌ ಠಾಣೆಯಲ್ಲಿ ಮಾತನಾಡಿದ, ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಸಂಚಾಲಕ ಗಂಗಾಧರ ಮೇಟಿ, ಕಳೆದ 2 ತಿಂಗಳ ಹಿಂದೆ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ ನಮ್ಮ ಕ್ಷೇತ್ರದ ನಂದಗಾಂವ, ಢವಳೇಶ್ವರ, ಮಾರಾಪುರ ಗ್ರಾಮಗಳ ಜನರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಕೊಡಲು ಹೋದ ರೈತರ ಮನವಿಯನ್ನು ತೆಗೆದುಕೊಳ್ಳದ ಮುಖ್ಯಮಂತ್ರಿಗಳು, ಹೇಗೆ ನೆರೆ ಪರಿಹಾರದ ಸಮೀಕ್ಷೆ ಮಾಡುತ್ತಾರೆ? ಇವರಿಗೆ ರೈತರ ಮೇಲೆ ನಿಜವಾದ ಕಾಳಜಿ ಇಲ್ಲ. ಇವರು ಮಾಡುವ ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ಸಿಎಂ ವಿರುದ್ಧ ಹರಿಹಾಯ್ದರು.

ಅಲ್ಲದೆ ಸಸಾಲಟ್ಟಿಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು, ಸಕ್ಕರೆ ಕಾರ್ಖಾನೆಗಳು ಸರಿಯಾಗಿ ರೈತರಿಗೆ ಕಬ್ಬಿನ ಬಿಲ್‌ ಹಣವನ್ನು ಕೊಟ್ಟಿಲ್ಲ. ಇನ್ನೂ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಇಂತಹ ಕಾರ್ಖಾನೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. 

ರೈತರ ಕಬ್ಬಿನ ಹಣವನ್ನು ಪಾವತಿಸಬೇಕು ಮತ್ತು ನೇಕಾರರ ಹಕ್ಕೊತ್ತಾಯಗಳು ಮತ್ತು 425 ಕೋಟಿ ಪ್ರಸ್ತಾವ ಜಾರಿಗೊಳಿಸಬೇಕು ಎನ್ನುವ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಕೊಡಲು ನಮಗೆ ಅವಕಾಶ ಕೊಡಲಿಲ್ಲ ಎಂದರೆ ಏನು ಅರ್ಥ? ರೈತರು ನ್ಯಾಯ ಕೇಳುವುದೆ ತಪ್ಪಾ? ಮುಖ್ಯಮಂತ್ರಿಗಳಿಗೆ ರೈತರ ಸಮಸ್ಯೆಗಳೆ ಬೇಡವಾ? ಬರಿ ನಮ್ಮ ಓಟು ಮಾತ್ರ ಬೇಕಾ? ಹೀಗಾದರೆ ನಾವು ಯಾರಿಗೆ ನಮ್ಮ ಸಮಸ್ಯೆ ಹೇಳೋಣ ನಮ್ಮ ಸಮಸ್ಯೆಗಳನ್ನೇ ಕೇಳಲು ಸಮಯವಿಲ್ಲದ ಮುಖ್ಯಮಂತ್ರಿಗಳು ನೆರೆ ಸಂತ್ರಸ್ತರ ಸಮೀಕ್ಷೆ ಹೇಗೆ ಮಾಡುತ್ತಾರೆ. ಆದ್ದರಿಂದ ಕೂಡಲೆ ಮುಖ್ಯಮಂತ್ರಿಗಳು ರೈತರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮುಂದೆ ಬರಬೇಕು. ಇಲ್ಲವಾದರೆ ರೈತರ ತಮ್ಮ ನ್ಯಾಯದ ಉಳಿವಿಗಾಗಿ ಬೀದಿಗೀಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ರೈತಸಂಘದ ಅಧ್ಯಕ್ಷ ಶ್ರೀಕಾಂತ ಗುಳನ್ನವರ, ಸದಸ್ಯರಾದ ಬಂದು ಪಕಾಲಿ, ಕರೇಪ್ಪ ಮೇಟಿ, ಮಲ್ಲಪ್ಪ ಜಡಗನ್ನವರ, ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ, ರಾಜ್ಯ ಪಿಂಚಾರ ಸಂಘದ ಅಧ್ಯಕ್ಷ ಸೈಯದ ನಧಾಫ, ಸುರೇಶ ಮಡಿವಾಳ, ವೀರೇಶ ನ್ಯಾಮಗೌಡ,ಎಚ್‌.ಎಸ್‌.ಬಿರಾದ, ಮಾದೇವ ಜಮಖಂಡಿ, ಶಿವಾನಂದ ಮಾಲಬಸರಿ, ಪರಸು ನಸಲಾಪುರ, ವಿಠ್ಠಲ ಬಾಗೋಜಿ, ಹಜರತ ಮುಲ್ಲಾ, ಪರಪ್ಪ ಸತ್ತಿಗೇರಿ ಸೇರಿದಂತೆ ಹಲವರು ಇದ್ದರು.
 

click me!