ಕೆಲಸ ಮಾಡಿಕೊಡಲಿಲ್ಲ ಎಂದು ಕಚೇರಿ ಫೈಲ್‌ನ್ನೇ ಕದ್ದೊಯ್ದ ರೈತ..!

By Kannadaprabha NewsFirst Published Aug 31, 2019, 11:01 AM IST
Highlights

ಸರ್ಕಾರಿ ಸೌಲಭ್ಯ ಪಡೆಯೋದಿರಲಿ, ಇತರ ಕೆಲಸಗಳಿಗಾಗಿ ರೈತರು ಜನ ಸಾಮಾನ್ಯರು ಕಚೇರಿಗೆ ಅಲೆದಾಡುವುದು ಸಾಮಾನ್ಯ. ಆದರೆ ಶಿವಮೊಗ್ಗದ ರೈತರೊಬ್ಬರು ತಹಸೀಲ್ದಾರ್ ಕಚೇರಿಯಿಂದ ತಮ್ಮ ಫೈಲ್‌ ಎಸ್ಕೇಪ್ ಮಾಡಿದ್ದಾರೆ. ಅಷ್ಟಕ್ಕೂ ರೈತ ಫೈಲ್ ಕದ್ದಿದ್ಯಾಕೆ, ಅದನ್ನು ತೆಗೆದು ಡಿಸಿ ಕೈಗೆ ಕೊಟ್ಟಿದ್ದೇಕೆ..? ತಿಳಿಯಲು ಈ ಸುದ್ದಿ ಓದಿ.

ಶಿವಮೊಗ್ಗ(ಆ.31): ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ತನ್ನ ಕೆಲಸ ಮಾಡಿಕೊಡಲಿಲ್ಲ ಎಂದು ಸಿಟ್ಟಿಗೆದ್ದ ರೈತ ಗುಮಾಸ್ತರ ಟೇಬಲ್ ಮೇಲಿದ್ದ ತಮಗೆ ಸಂಬಂಧಿಸಿದ ಕಡತವನ್ನು ಯಾರಿಗೂ ಗೊತ್ತಾ ಗದಂತೆ ಹೊತ್ತೊಯ್ದಿದ್ದಾರೆ. ಶಿವಮೊಗ್ಗದ ತಾಲೂಕು ಕಚೇರಿಯಲ್ಲಿ ನಡೆದಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ಶಿವಮೊಗ್ಗ ತಾಲೂಕಿನಬೆಳಲಕಟ್ಟೆ ಗ್ರಾಮದ ರೈತ ದೇವೇಂದ್ರಪ್ಪ ಎಂಬುವವರೇ ಕಡತ ಹೊತ್ತೊಯ್ದವರು. ಬೆಳಲಕಟ್ಟೆ ಗ್ರಾಮದ ಸರ್ವೆ ನಂ. 167 ಮತ್ತು 169ರಲ್ಲಿನ ದಾಖಲೆಗಳು ಪಾರ್ವತಮ್ಮ ಎಂಬುವವರ ಹೆಸರಿಗೆ ಖಾತೆ ಮಾಡಿ ಪಹಣಿಯಲ್ಲಿ ನಮೂದಿಸುವ ಕೆಲಸವಾಗಬೇಕಿತ್ತು. ಇದಕ್ಕಾಗಿ ದೇವೇಂದ್ರಪ್ಪ ಅವರು ಈ ಹಿಂದೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಮದುವೆಯಾಗ್ತೀನೆಂದು ಯುವತಿಗೆ ನಂಬಿಸಿ ಇಟಲಿಗೆ ಪರಾರಿಯಾದ ಚರ್ಚ್ ಫಾದರ್..!

ಅರ್ಜಿಯ ಜೊತೆ ಇನ್ನು ಕೆಲವು ದಾಖಲೆ ಗಳನ್ನು ನೀಡುವಂತೆ ಕಚೇರಿಯಿಂದ ಹಿಂಬರಹ ನೀಡಲಾಗಿತ್ತು. ಆದರೆ ದಾಖಲೆ ನೀಡುವ ಬದಲು ದೇವೇಂದ್ರಪ್ಪ ಅವರು ಆ. 20 ರಂದು ನೇರವಾಗಿ ತಹಸೀಲ್ದಾರ್ ಅವರ ಕಚೇರಿಗೆ ಬಂದು ತಮ್ಮ ಕಡತ ವಿಲೇವಾರಿ ಮಾಡುತ್ತಿರುವ ಆರ್‌ಆರ್‌ಟಿ ವಿಭಾಗದಲ್ಲಿನ ಗುಮಾಸ್ತರ ಟೇಬಲ್ ಬಳಿ ಸಾಗಿದ್ದಾರೆ.

ಅಲ್ಲಿದ್ದ ತಮ್ಮ ಕಡತವನ್ನು ಯಾರಿಗೂ ಹೇಳದೆ ಕೇಳದೆ ಹೊತ್ತು ಹೊರ ಹೋಗಿದ್ದಾರೆ. ಈ ವಿಚಾರ ಅಲ್ಲಿನ ಯಾವ ಸಿಬ್ಬಂದಿಗೂ ಗೊತ್ತಾಗಲೇ ಇಲ್ಲ. ಎರಡು ದಿನ ಬಿಟ್ಟು ದೇವೇಂದ್ರಪ್ಪ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಡತವನ್ನ ವಾಪಾಸ್ ನೀಡಿದ್ದಾರೆ.

ಜಿಮ್‌ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಮೆರಾ ಅಳವಡಿಸಲು ಆಗ್ರಹ

ಇದರಿಂದ ಆಶ್ಚರ್ಯ ಗೊಂಡ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಗಿರೀಶ್ ರವರಿಗೆ ಕರೆಸಿ ನಿಮ್ಮ ಕಚೇರಿಯಲ್ಲಿ ಇರಬೇಕಾದ ಕಡತವನ್ನು ಇಲ್ಲಿಗೆ ತಂದು ಕೊಡ ಲಾಗಿದೆ. ನಿಮ್ಮ ಕಚೇರಿಯಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಕಡತ ಕಳುವಾಗಿದೆ. ಈ ಬಗ್ಗೆ ಗಮನ ಹರಿಸಿ ಸಂಬಂಧಿಸಿದ ಸಿಬ್ಬಂದಿಗೆ ನೋಟೀಸ್ ಜಾರಿಗೊಳಿಸಿ ಎಂದು ಸೂಚನೆ ನೀಡಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಫೈಲ್ ಕಳ್ಳತನ:

ಇದರಿಂದ ತೀವ್ರ ಆಶ್ಚರ್ಯಗೊಂಡ ತಹಸೀಲ್ದಾರ್ ಗಿರೀಶ್ ಅವರು ತಮ್ಮ ಕಚೇರಿಯ ಸಿಸಿಟಿವಿ ವೀಕ್ಷಿಸಿದಾಗ ಕ್ಯಾಮಾರದಲ್ಲಿ ದೇವೇಂದ್ರಪ್ಪ ಕಡತ ಕೊಂಡೊಯ್ಯುವುದು ಗೊತ್ತಾಗಿದೆ. ವಾಪಸ್ ಬಂದ ಕಡತದಲ್ಲಿ ಕೆಲ ದಾಖಲೆಗಳನ್ನು ತೆಗೆಯಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ತಾಲೂಕು ಕಚೇರಿಯ ಶಿರಸ್ತೆದಾರ್ ಕೃಷ್ಣಮೂರ್ತಿ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

click me!