ಮಗ ಸಾವನ್ನಪ್ಪಿದ ದುಃಖದಲ್ಲೂ ಮತದಾನ ಮಾಡಿ ಮಾದರಿಯಾದ ಕುಟುಂಬ!

By Suvarna NewsFirst Published Dec 5, 2019, 12:31 PM IST
Highlights

ಮಗ ಸಾವನ್ನಪ್ಪಿದ್ದರೂ ಮತದಾನ ಹಕ್ಕು ಚಲಾಯಿಸಿದ ಕುಟುಂಬಸ್ಥರು| ಹಿರೆಕೇರೂರು ಪಟ್ಟಣದಲ್ಲಿ ನಡೆದ ಘಟನೆ| ಶಂಕಿತ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ ಲೋಹಿತ್ ಗುಬ್ಬಿ| ಬುಧವಾರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಲೋಹಿತ್ ಗುಬ್ಬಿ| ದುಃಖದ ಮಡುವಿನಲ್ಲೂ ಮತದಾನ ಮಾಡಿ ಮಾದರಿಯಾದ ಕುಟುಂಬ| 

ಹಾವೇರಿ(ಡಿ.05): ಮಗ ಸಾವನ್ನಪ್ಪಿದ್ದರೂ ಕುಟುಂಬಸ್ಥರು ಮತದಾನ ಹಕ್ಕು ಚಲಾಯಿಸಿದ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ತೋಟಗಂಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಇಂದು(ಗುರುವಾರ) ನಡೆದಿದೆ. 

21 ವರ್ಷದ ಲೋಹಿತ್ ಗುಬ್ಬಿ ಎಂಬುವರು ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಲೋಹಿತ್ ಹಾಲೇಶ್ ಬುಧವಾರ ಮೃತಪಟ್ಟಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂದು ಬೆಳಗ್ಗೆ ಹಿರೇಕೆರೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಆದರೆ, ಮೃತ ಲೋಹಿತ್ ಹಾಲೇಶ್ ಅವರ ಕುಟುಂಬಸ್ಥರು ಮಾತ್ರ ಪವಿತ್ರವಾದ ಮತ ಹಕ್ಕು ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ. ಇತ್ತೀಚೆಗೆ ವಿದ್ಯಾವಂತ ಮತದಾರರು ಮತದಾನ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಅತೀ ವಿದ್ಯಾವಂತರನ್ನು ಹೊಂದಿದ್ದ ಬೆಂಗಳೂರು ನಗರದಲ್ಲಿ ಮತದಾನ ಮಾಡುವಲ್ಲಿ ಜನರು ಹಿಂದೇಟು ಹಾಕಿದ್ದರು. 

ಮನೆಯಲ್ಲಿ ಮಗ ಸಾವನ್ನಪ್ಪಿದ ದುಃಖದ ಮಡುವಿನಲ್ಲೂ ಮತಗಟ್ಟೆಗೆ ತೆರಳಿ ಮತಚಲಾವಣೆ ಮಾಡಿದ್ದಾರೆ. ಮೃತನ ತಾಯಿ ರತ್ನಮ್ಮ, ತಂಗಿ ಮೀನಾಕ್ಷಿ ಮತ್ತು ಕುಟುಂಬಸ್ಥರು ಮತದಾನ ಮಾಡಿದ್ದಾರೆ. ಮತ ಚಲಾಯಿಸುವ ಮೂಲಕ ಮೃತನ ಯುವಕನ ಮನೆಯವರು ತಮ್ಮ ಮತದಾನದ ಹಕ್ಕು ಮೆರೆದಿದ್ದಾರೆ. ಈ ಮೂಲಕ ಮತದಾರರಿಗೆ ಈ ಕುಟುಂಬ ಮಾದರಿಯಾಗಿದೆ. 

ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!