Chikkamagaluru news: ಪ್ರತಿಯೊಬ್ಬರೂ ಜೀವನದಲ್ಲಿ ಮುಂದೆ ಬರಬೇಕು: ಸಿ.ಟಿ. ರವಿ

By Kannadaprabha NewsFirst Published Jan 13, 2023, 7:48 AM IST
Highlights

ದೇಶದ ಪ್ರತಿ ಪ್ರಜೆ ಮುಂದೆ ಬಂದರೆ 138 ಕೋಟಿ ಹೆಜ್ಜೆ ದೇಶ ಮುಂದೆ ಹೋಗುತ್ತದೆ. ಎರಡು ಹೆಜ್ಜೆ ಮುಂದೆ ಹೋದರೆ ಅದು 276 ಕೋಟಿ ಹೆಜ್ಜೆ ಮುಂದೆ ಹೋಗುತ್ತದೆ. ನಮ್ಮ ಬದುಕಿನಲ್ಲಿ ಎಷ್ಟುಹೆಜ್ಜೆ ಮುಂದೆ ಹೋಗುತ್ತೇವೆಯೋ ಅಷ್ಟುಹೆಜ್ಜೆ ನಮ್ಮ ದೇಶ ಮುಂದೆ ಹೋಗುತ್ತದೆ. ಈ ರೀತಿ ಜೀವನದಲ್ಲಿ ಪ್ರತಿಯೊಬ್ಬರು ಮುಂದೆ ಬರೋಣ ಎಂದು ಹೇಳಿದರು.

ಚಿಕ್ಕಮಗಳೂರು (ಜ.13) ಜೀವನದಲ್ಲಿ ಪ್ರತಿಯೊಬ್ಬರು ಮುಂದೆ ಬರಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಚಿಕ್ಕಮಗಳೂರು ಹಬ್ಬದ ಅಂಗವಾಗಿ ಗುರುವಾರ ಏರ್ಪಡಿಸಲಾಗಿದ್ದ ವಾಕಥಾನ್‌ಗೆ ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಜೀವನದಲ್ಲಿ ಮುಂದೆ ಬರಬೇಕೆಂಬ ಆಪೇಕ್ಷೆ ಸ್ವಾಭಾವಿಕವಾಗಿ ಇರುತ್ತದೆ. ಎಲ್ಲರೂ ಮುಂದೆ ಬಂದರೆ ಸ್ವಾಭಾವಿಕವಾಗಿ ದೇಶ ಮುಂದೆ ಬರುತ್ತದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಆತ್ಮನಿರ್ಭರ ಭಾರತ ಎಂದು ಹೇಳಿದರು.

ದೇಶದ ಪ್ರತಿ ಪ್ರಜೆ ಮುಂದೆ ಬಂದರೆ 138 ಕೋಟಿ ಹೆಜ್ಜೆ ದೇಶ ಮುಂದೆ ಹೋಗುತ್ತದೆ. ಎರಡು ಹೆಜ್ಜೆ ಮುಂದೆ ಹೋದರೆ ಅದು 276 ಕೋಟಿ ಹೆಜ್ಜೆ ಮುಂದೆ ಹೋಗುತ್ತದೆ. ನಮ್ಮ ಬದುಕಿನಲ್ಲಿ ಎಷ್ಟುಹೆಜ್ಜೆ ಮುಂದೆ ಹೋಗುತ್ತೇವೆಯೋ ಅಷ್ಟುಹೆಜ್ಜೆ ನಮ್ಮ ದೇಶ ಮುಂದೆ ಹೋಗುತ್ತದೆ. ಈ ರೀತಿ ಜೀವನದಲ್ಲಿ ಪ್ರತಿಯೊಬ್ಬರು ಮುಂದೆ ಬರೋಣ ಎಂದು ಹೇಳಿದರು.

ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ: ಸಿಟಿ ರವಿ

ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷತೆ ಇದೆ, ಹಬ್ಬ ಎಂದರೆ ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ರಮ. ಹಿಂದೆ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದೆಡೆ ಸೇರುತ್ತಿದ್ದರು, ಸಂಬಂಧಗಳನ್ನು ಬೆಳೆಸುವ ಕೆಲಸವಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲೋ ಒಂದು ಕಡೆ ಹಿಂದಿನ ವ್ಯವಸ್ಥೆ ಮಾಯವಾಗಿರುವುದನ್ನು ಕಾಣುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಬಿ.ಆರ್‌.ರೂಪ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ರಾಜೇಶ್‌ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

13ರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಚಿಕ್ಕಮಗಳೂರು: ಜಿಲ್ಲಾ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಸಮಿತಿಯಿಂದ ಕುವೆಂಪು ಕಲಾಮಂದಿರ ಹಾಗೂ ಮುಖ್ಯ ವೇದಿಕೆಗಳಲ್ಲಿ ಜ.13 ರಿಂದ ಜ.22 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಸಪ್ರಶ್ನೆ ಸ್ಪರ್ಧೆ, ಮಹಿಳಾ ಉತ್ಸವ, ಯುವ ಮತ್ತು ಹಿರಿಯರ ಉತ್ಸವ, ಚಿತ್ರಕಲಾ ಶಿಬಿರ, ನಾಟಕೋತ್ಸವ, ಸಿನಿಮೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಕಲಾಮಂದಿರದಲ್ಲಿ ಜ.13 ರಂದು ವಿಷನ್‌ ಚಿಕ್ಕಮಗಳೂರು ಜಿಲ್ಲಾ ಮಟ್ಟದ ರಸಪ್ರಶ್ನೆ, ಸ್ಪರ್ಧೆ, 14 ರಂದು ಮಹಿಳಾ ಉತ್ಸವ, 16 ರಂದು ಯುವ ಹಿರಿಯರ ಉತ್ಸವ, ಜ. 18 ರಿಂದ 21ರ ರವರೆಗೆ ನಾಟಕೋತ್ಸವ, 19 ರಂದು ಶಾಸ್ತ್ರೀಯ ಸಂಗೀತೋತ್ಸವ ಹಾಗೂ 21 ರಂದು ಕವ್ವಾಲಿ ಗಾಯನ ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಆಟದ ಮೈದಾನದಲ್ಲಿ ಜ. 18 ರಂದು ಮುಖ್ಯಮಂತ್ರಿಗಳಿಂದ ಚಿಕ್ಕಮಗಳೂರು ಹಬ್ಬದ ಉದ್ಘಾಟನಾ ಕಾರ್ಯಕ್ರಮದ ನಂತರ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ 50 ಕ್ಕೂ ಹೆಚ್ಚಿನ ಜಾನಪದ ತಂಡಗಳಿಂದ ಜಾನಪದ ಜಾತ್ರೆ, ಜ.19 ರಂದು ಚಿತ್ರಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಉಪಸ್ಥಿತರಿದ್ದರು.

ಸ್ಥಳಿಯರಿಗೆ ಆದ್ಯತೆ ಇಲ್ಲದ ಜಿಲ್ಲಾ ಉತ್ಸವ: ಪ್ರಸಾದ್‌ ಅಮೀನ್‌

ಚಿಕ್ಕಮಗಳೂರು: ಜಿಲ್ಲಾಡಳಿತ ನಡೆಸುತ್ತಿರುವ ಜಿಲ್ಲಾ ಉತ್ಸವದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೆ ಇರುವುದು ಬೇಸರದ ಸಂಗತಿ ಎಂದು ಮಲೆನಾಡು ನೃತ್ಯ ಶಾಲಾ ಮಾಲೀಕರ ಸಂಘದ ಗೌರವಾಧ್ಯಕ್ಷ ಪ್ರಸಾದ್‌ ಅಮೀನ್‌ ಆರೋಪಿಸಿದ್ದಾರೆ.

ಚಿಕ್ಕಮಗಳೂರು ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಈ ಹಬ್ಬದಲ್ಲಿ ಸ್ಥಳೀಯ ಕಲಾವಿದರಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸದೆ ಇರುವುದನ್ನು ನೋಡಿದರೆ ಈ ಉತ್ಸವ ಜಿಲ್ಲಾ ಉತ್ಸವ ಹೇಗೆ ಆಗುತ್ತದೆ ಎಂಬ ಅನುಮಾನ ಇಡೀ ಜಿಲ್ಲೆಯ ಕಲಾವಿದರನ್ನು ಕಾಡುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ 30 ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೃತ್ಯ ಶಾಲೆ ನಡೆಸುತ್ತಿದ್ದು, 20 ಕ್ಕೂ ಹೆಚ್ಚು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳನ್ನು ಜಿಲ್ಲೆಯಲ್ಲಿ ನಡೆಸಿ ಯಶಸ್ವಿಯಾಗಿದ್ದೇವೆ. ಜಿಲ್ಲಾಡಳಿತದಿಂದ ಇದುವರೆಗೂ ಯಾವುದೇ ಮಾಹಿತಿಗಳು ನಮಗೆ ಲಭ್ಯವಿಲ್ಲ ಎಂದು ಹೇಳಿದ್ದಾರೆ.

ಕಲಾವಿದರನ್ನು ಕಡೆಗಣಿಸಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಸಹ ಯಾವ ಪ್ರತಿಕ್ರಿಯೆ ಬಂದಿಲ್ಲ, ಇದು ಜಿಲ್ಲಾ ಉತ್ಸವವೋ ಅಥವಾ ಖಾಸಗಿ ಉತ್ಸವವೋ ಎಂಬುದು ಸಂಬಂಧ ಪಟ್ಟವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಕರ್ತರು ಪೂರ್ವಗ್ರಹ ಪೀಡಿತರಾಗದಿರಲಿ: ಶೋಭಾ ಕರಂದ್ಲಾ​ಜೆ

ಚಿಕ್ಕಮಗಳೂರು ಸಾಂಸ್ಕೃತಿಕ ಕಲಾ ಸಂಘ ಸೇರಿದಂತೆ ಹಲವು ಸಂಘಗಳನ್ನು ಕಡೆಗಣಿಸಲಾಗಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡದೆ ಇದ್ದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಜಿಲ್ಲಾ ಉತ್ಸವದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

click me!