'ಕೊರೋನಾ ದಂಧೆ : ಖಾಸಗಿ​-ಸರ್ಕಾರಿ ಆಸ್ಪತ್ರೆ, ಆರೋಗ್ಯಾಧಿಕಾರಿ ನಡುವೆ ಒಪ್ಪಂದ'

By Kannadaprabha NewsFirst Published Sep 6, 2020, 1:02 PM IST
Highlights

ಕೊರೋನಾ ಎನ್ನುವುದು ಸದ್ಯ ದಂಧೆಯಾಗಿದೆ. ಒಪ್ಪಂದ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. 

ಶಿವಮೊಗ್ಗ(ಸೆ.06):  ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಂಗಳೂರಂತೆ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೋನಾಗೆ ಚಿಕಿತ್ಸೆ ದೊರಕುವಂತಾಗಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌.ವಿ. ದತ್ತ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಗಣ್ಯರಿಗೆ ಕಾಯ್ದಿರಿಸಿ ಬೇರೆ ರೋಗಿಗಳಿಗೆ ಬೆಡ್‌ ನೀಡದಿರುವುದು ಸರಿಯಲ್ಲ. ಹಲವೆಡೆ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಚಿಕಿತ್ಸೆಗೆ ಬೆಡ್‌ ಮೀಸಲಾಗಿಡಬೇಕು ಎಂದು ಸರ್ಕಾರ ಆದೇಶ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತ ನಿಗಾ ಇಡಬೇಕು. ಅನೇಕ ಬಾರಿ ಕೊರೋನಾ ಪರೀಕ್ಷೆಯೇ ಸಾಕಷ್ಟುಗೊಂದಲ ಉಂಟಾಗುತ್ತಿದೆ. ಒಮ್ಮೆ ಪಾಸಿಟಿವ್‌ ಬಂದರೆ ಮತ್ತೊಮ್ಮೆ ನೆಗೆಟಿವ್‌ ಬರುತ್ತಿದೆ. ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯಾಧಿಕಾರಿಗಳ ನಡುವೆ ಏನೋ ಒಪ್ಪಂದವಾದಂತಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರಲ್ಲದೆ, ಇದೊಂದು ರೀತಿಯಲ್ಲಿ ದಂಧೆಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಬೇಸರ ವ್ಯಕ್ತಪಡಿಸಿದರು.

ಕೊರೋನಾದಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ

ತನಿಖೆ ನಡೆಸಲಿ:  ಒಬ್ಬ ಕೊರೋನಾ ಸೋಂಕಿತನಿಗೆ ಸರ್ಕಾರಿ ಆಸ್ಪತ್ರೆಯ ಶಿಫಾರಸಿನ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತದೆ. ಅಲ್ಲಿ ಆತನಿಗೆ ಕೇವಲ ಒಂದು ಹೊತ್ತು ಊಟ, ಒಂದು ಮೊಟ್ಟೆಮತ್ತು ಒಂದಿಷ್ಟುಸಾಮಾನ್ಯ ಮಾತ್ರೆ ನೀಡಲಾಗುತ್ತದೆ. ಆದರೆ ದಿನಕ್ಕೆ 15 ಸಾವಿರ ರು. ಬಿಲ್‌ ಮಾಡಲಾಗುತ್ತಿದೆ. ಹೀಗೆ ಕನಿಷ್ಠ ಒಂದು ವಾರದ ಚಿಕಿತ್ಸೆ ನೀಡಿದರೆ, ಲಕ್ಷಾಂತರ ರು. ಬಿಲ್‌ ಆಗುತ್ತದೆ. ಇಲ್ಲಿ ಅವ್ಯವಹಾರದ ವಾಸನೆ ಕಂಡುಬರುತ್ತಿದೆ. ಹಾಗಾಗಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಕೊರೋನಾದಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ .

ಅನುಮತಿಗೆ ಮನವಿ:  ದಿ. ಅಪ್ಪಾಜಿಗೌಡರ 11 ನೇ ದಿನದ ಧಾರ್ಮಿಕ ಕಾರ್ಯಕ್ರಮವನ್ನು ಸೆ.13ರಂದು ಭದ್ರಾವತಿಯ ಚರ್ಚ್ ಮೈದಾನದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನದವರೆಗೆ ಆಯೋಜಿಸಲಾಗಿದೆ. ಇದನ್ನು ಶಿಸ್ತುಬದ್ದವಾಗಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್‌ ಬಳಕೆ ಮತ್ತು ಸ್ಯಾನಿಟೈಸರ್‌ ಕಡ್ಡಾಯಗೊಳಿಸಿಕೊಂಡು ನಡೆಸಲಾಗುವುದು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಗತ್ಯ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ವೈ.ಎಸ್‌.ವಿ. ದತ್ತ ಮನವಿ ಮಾಡಿದರು. ಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್‌, ಪ್ರಮುಖರಾದ ಆನಂದ್‌, ಜೆ.ಪಿ.ಯೋಗೀಶ್‌, ಮಣಿಶೇಖರ್‌, ಎಸ್‌.ಕುಮಾರ್‌, ನಾಗರಾಜ್‌ ಕಂಕಾರಿ, ಕರುಣಾಕರಮೂರ್ತಿ ಮತ್ತಿತರರು ಇದ್ದರು

click me!